ರಾಜ್ಯಸರ್ಕಾರ ಹೊಸ ಹೊಸ ನಿಯಮ ಜಾರಿ ಇನ್ಮುಂದೆ ಕೃಷಿ ಜಮೀನನ್ನು ಕೃಷಿಯೇತರ ಉದ್ದೇಶಗಳಿಗೆ ಬಳಸಲು ಸಲ್ಲಿಸುವ ಅಫಿಡವಿಟ್ ಆಧಾರಿತ ಭೂಪರಿವರ್ತನೆ ಅರ್ಜಿಗಳನ್ನು ಇನ್ನು ಮುಂದೆ ಅತ್ಯಂತ ವೇಗವಾಗಿ ವಿಲೇವಾರಿ ಮಾಡಲು ಕಂದಾಯ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಮಾಸ್ಟರ್ ಪ್ಲಾನ್ ವ್ಯಾಪ್ತಿಯ ಹೊರಗಿರುವ ಜಮೀನುಗಳಿಗೆ ಸಂಬಂಧಿಸಿದಂತೆ ಈ ಹೊಸ ನಿಯಮ ಅನ್ವಯವಾಗಲಿದೆ .
ಹೊಸ ನಿಯಮ
ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 95ರ ಅಡಿಯಲ್ಲಿ ಭೂಪರಿವರ್ತನಾ ಪ್ರಕ್ರಿಯೆಯನ್ನು ಸರಳಗೊಳಿಸುವ ಉದ್ದೇಶದಿಂದ ಸರ್ಕಾರವು ನಿಯಮಗಳಿಗೆ ತಿದ್ದುಪಡಿ ತಂದಿದೆ. ಇದರ ಪ್ರಮುಖ ಅಂಶಗಳೆಂದರೆ:
30 ದಿನಗಳ ಕಾಲಮಿತಿ: ಭೂಪರಿವರ್ತನೆಗಾಗಿ ಅರ್ಜಿ ಸಲ್ಲಿಸಿದ ದಿನಾಂಕದಿಂದ 30 ದಿನಗಳ ಒಳಗೆ ಜಿಲ್ಲಾಧಿಕಾರಿಗಳು ಯಾವುದೇ ನಿರ್ಧಾರ ಕೈಗೊಳ್ಳದಿದ್ದರೆ, ಅದನ್ನು ‘ಪರಿಭಾವಿತ ಭೂಪರಿವರ್ತನೆ’ (Deemed Conversion) ಎಂದು ಪರಿಗಣಿಸಲಾಗುತ್ತದೆ.
ಸ್ವಯಂಚಾಲಿತ ಅನುಮೋದನೆ: ನಿಗಧಿತ ಅವಧಿಯಲ್ಲಿ ವಿಲೇವಾರಿಯಾಗದ ಅರ್ಜಿಗಳಿಗೆ ತಂತ್ರಾಂಶದ ಮೂಲಕ ಸ್ವಯಂಚಾಲಿತವಾಗಿ ಅನುಮೋದನೆ ನೀಡಲಾಗುತ್ತದೆ.
ಶುಲ್ಕ ಪಾವತಿ: ಅರ್ಜಿದಾರರು ನಿಗಧಿತ ಭೂಪರಿವರ್ತನಾ ಶುಲ್ಕ ಪಾವತಿಸಿದ ತಕ್ಷಣವೇ ತಂತ್ರಾಂಶದ ಮೂಲಕ ಸ್ವಯಂಚಾಲಿತವಾಗಿ ಭೂಪರಿವರ್ತನೆ ಆದೇಶ ಸೃಜಿಸಲ್ಪಡುತ್ತದೆ.
ಅಧಿಕಾರಿಗಳಿಗೆ ಹಂಚಿಕೆಯಾದ ಕಾಲಾವಕಾಶ:
ಅರ್ಜಿಯ ಪರಿಶೀಲನೆಗಾಗಿ ವಿವಿಧ ಹಂತದ ಅಧಿಕಾರಿಗಳಿಗೆ ಈ ಕೆಳಗಿನಂತೆ ಕಾಲಮಿತಿಯನ್ನು ನಿಗದಿಪಡಿಸಲಾಗಿದೆ:
ತಹಶೀಲ್ದಾರ್/ಅರಣ್ಯ ಇಲಾಖೆ: ಅಭಿಪ್ರಾಯ ನೀಡಲು 15 ದಿನಗಳು.
ಜಿಲ್ಲಾಧಿಕಾರಿ ಕಛೇರಿ ವಿಷಯ ನಿರ್ವಾಹಕರು:5 ದಿನಗಳು.
ಅಪರ ಜಿಲ್ಲಾಧಿಕಾರಿಗಳು:5 ದಿನಗಳು.
ಜಿಲ್ಲಾಧಿಕಾರಿಗಳು:5 ದಿನಗಳು.
ಒಟ್ಟಾರೆಯಾಗಿ 30 ಕೆಲಸದ ದಿನಗಳ ಒಳಗೆ ಜಿಲ್ಲಾಧಿಕಾರಿಗಳು ತೀರ್ಮಾನ ಕೈಗೊಳ್ಳದಿದ್ದಲ್ಲಿ, ಸದರಿ ಅರ್ಜಿಗೆ ಅನುಮೋದನೆ ಇದೆ ಎಂದು ಪರಿಗಣಿಸಿ, ಶುಲ್ಕ ಪಾವತಿಗಾಗಿ ಅರ್ಜಿದಾರರ ಲಾಗಿನ್ಗೆ ವರ್ಗಾವಣೆಯಾಗುತ್ತದೆ.
ಸಾರ್ವಜನಿಕರಿಗೆ ಅನುಕೂಲ:
ಈ ಹೊಸ ಕ್ರಮದಿಂದಾಗಿ ಸಾರ್ವಜನಿಕರು ಭೂಪರಿವರ್ತನೆಗಾಗಿ ಸರ್ಕಾರಿ ಕಛೇರಿಗಳಿಗೆ ಅಲೆಯುವುದು ತಪ್ಪಲಿದೆ. ಅಕ್ರಮಗಳನ್ನು ತಡೆಯಲು ಮತ್ತು ಪಾರದರ್ಶಕತೆ ತರಲು ತಂತ್ರಜ್ಞಾನದ ಬಳಕೆಯನ್ನು ಈ ಮೂಲಕ ಕಡ್ಡಾಯಗೊಳಿಸಲಾಗಿದೆ. ಈ ಕುರಿತು ಕಂದಾಯ ಆಯುಕ್ತರಾದ ಮೀನಾ ನಾಗರಾಜ್ ಅವರು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.




Any questions related to 30 ದಿನ ಮೀರಿದರೆ ಸಾಕು, ಭೂಪರಿವರ್ತನೆ ಅರ್ಜಿಗಳು ಆಟೋಮ್ಯಾಟಿಕ್ ಅಪ್ರೂವ್!?