ಬೀದರ.22.ಜೂನ್.25:- ದಿನನಿತ್ಯ ಯೋಗ ಪದ್ಧತಿಯನ್ನು ಅಳವಡಿಸಿಕೊಂಡರೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಬೀದರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಬಿ.ಎಸ್.ಬಿರಾದಾರ ಹೇಳಿದರು.
ಅವರು ಶನಿವಾರ ಬೀದರ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಾಚೀನ ಕಾಲದಿಂದಲೂ ಯೋಗ ಪರಂಪರೆಯನ್ನು ಪಾಲಿಸಿಕೊಂಡು ಬಂದಿರುವ ಪೂರ್ವಜರು ಸದೃಢ ಶರೀರ ಹಾಗೂ ಸ್ವಸ್ಥ ಆರೋಗ್ಯವನ್ನು ಕಾಪಾಡಿಕೊಂಡು ಬಂದಿರುವುದನ್ನು ಕಾಣಬಹುದಾಗಿದೆ. ಹೀಗಾಗಿ ಉತ್ತಮ ಆರೋಗ್ಯದಿಂದ ಮಾತ್ರ ಆರೋಗ್ಯಕರ ಸಮಾಜ ನಿರ್ಮಿಸಲು ಸಾಧ್ಯ. ಪ್ರಾಚೀನ ಕಾಲದಿಂದ ಭಾರತದಲ್ಲಿ ಪ್ರಚಲಿತವಿದ್ದ ಈ ಯೋಗ ಪರಂಪರೆಗೆ ಸುದೀರ್ಘವಾದ ಇತಿಹಾಸವಿದೆ.
ಯೋಗದಿಂದ ರೋಗ ದೂರವಾಗುತ್ತದೆ ಮತ್ತು ಯೋಗದಲ್ಲಿ ಎಲ್ಲವೂ ಇದೆ. ಶಾರೀರಿಕ, ಮಾನಸಿಕ, ಆಧ್ಯಾತ್ಮಿಕದ ಸಮನ್ವಯವಿದೆ. ಪ್ರಾಚೀನ ಕಾಲದ ಋಷಿಮುನಿಗಳು, ಸಾಧುಸಂತರು, ಯೋಗಿವರ್ಯರು ಈ ಪರಂಪರೆಗೆ ನಾಂದಿಹಾಡಿದರು. ಇಂದು ಭಾರತದ ಯೋಗ ಪರಂಪರೆ ಜಗತ್ತಿನಾದ್ಯಂತ ಹರಡುತ್ತಿರುವುದು ಭಾರತೀಯರಾದ ನಮಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಡಾ.ಶಾಂತಕುಮಾರ ಚಿದ್ರಿ, ಡಾ.ನಾಗೇಶ ಸಾವಳೆ ಯೋಗ, ಪ್ರಾಣಾಯಾಮದ ಕುರಿತಾದ ಮಾಹಿತಿ ನೀಡುತ್ತಾ ಸರ್ವರಿಗೂ ಯೋಗವಿಧಾನದಂತೆ ಆಸನಗಳನ್ನು ಮಾಡಿಸಿದರು.
ಈ ಸಂದರ್ಭದಲ್ಲಿ ಬೀದರ ವಿಶ್ವವಿದ್ಯಾಲಯದ ಆಡಳಿತ ಕುಲಸಚಿವರಾದ ಸುರೇಖಾ ಕೆ.ಎ.ಎಸ್., ಮೌಲ್ಯಮಾಪನ ಕುಲಸಚಿವರಾದ ಪ್ರೊ.ಪರಮೇಶ್ವರ ನಾಯ್ಕ.ಟಿ, ವಿಶೇಷಾಧಿಕಾರಿ ಡಾ.ರವೀಂದ್ರನಾಥ.ವಿ.ಗಬಾಡಿ ಸೇರಿದಂತೆ ಬೀದರ ವಿಶ್ವವಿದ್ಯಾಲಯದ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ.ರಾಮಚಂದ್ರ ಗಣಾಪೂರ ನಿರೂಪಿಸಿದರು.