ಕೊಪ್ಪಳ.05.ಸೆಪ್ಟೆಂಬರ್.26: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕೊಪ್ಪಳ ಜಿಲ್ಲಾಡಳಿತದ ವತಿಯಿಂದ 2026ನೇ ಸಾಲಿನ ‘ತುಂಗಭದ್ರಾ ಆರತಿ ಮಹೋತ್ಸವ’ ಕಾರ್ಯಕ್ರಮವನ್ನು ಸೆಪ್ಟೆಂಬರ್ 8ರಂದು ಆಯೋಜಿಸಲಾಗಿದ್ದು, ಸಾರ್ವಜನಿಕರು ಭಾಗಿಯಾಗುವಂತೆ ಮುಜರಾಯಿ, ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವರಾದ ಕೆ.ಎಸ್.ಬಸವಂತಪ್ಪ ಅವರು ಮನವಿ ಮಾಡಿದ್ದಾರೆ.
ಪ್ರತಿ ವರ್ಷ ಹುಲಿಗೆಮ್ಮ ದೇವಿ ದೇವಸ್ಥಾನದ ವತಿಯಿಂದ ತುಂಗಭದ್ರಾ ನದಿಗೆ ಬಾಗಿನ ಅರ್ಪಿಸುವ ಪದ್ಧತಿ ನಡೆದುಕೊಂಡು ಬಂದಿದ್ದು, ಕಳೆದ ಸಾಲಿನಿಂದ ಭಕ್ತರ ಅಪೇಕ್ಷೆಯಂತೆ ಬಾಗಿನದೊಂದಿಗೆ ವೈಭವದ ತುಂಗಭದ್ರಾ ಆರತಿ ಧಾರ್ಮಿಕ ಕಾರ್ಯಕ್ರಮವನ್ನು ನೆರವೇರಿಸಲಾಗುತ್ತಿದೆ. 2026ನೇ ಸಾಲಿನ ತುಂಗಭದ್ರಾ ಆರತಿ ಮಹೋತ್ಸವವು ಸೆ. 8ರಂದು ಜರುಗಲಿದೆ.
ಈ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದ್ದು, ಅಂದು ಬೆಳಗಿನ ಜಾವ ವಿಶೇಷ ಅಲಂಕಾರದೊಂದಿಗೆ ಅಮ್ಮನವರಿಗೆ ಪೂಜೆ, ನೈವೇದ್ಯ ಹಾಗೂ ಮಂಗಳಾರತಿ ಜರುಗಲಿದೆ. ಅದೇ ರೀತಿ ಬೆಳಿಗ್ಗೆ 8 ಗಂಟೆಗೆ ಚಂಡಿಕಾ ಹೋಮ, ಬೆಳಿಗ್ಗೆ 9 ರಿಂದ 11 ಗಂಟೆಯವರೆಗೆ ಸ್ವಾಮೀಜಿಯವರಿಂದ ಆಶೀರ್ವಚನ ಹಾಗೂ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಮಧ್ಯಾಹ್ನ 12 ಗಂಟೆಯಿಂದ ದಾಸೋಹದಲ್ಲಿ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ, ಮಧ್ಯಾಹ್ನ 3 ಗಂಟೆಯಿಂದ ವಿಜೃಂಭಣೆಯ ಕುಂಭ ಮೆರವಣಿಗೆ ಮತ್ತು ಅಂದು ಸಂಜೆ 6 ಗಂಟೆಯಿಂದ ತುಂಗಭದ್ರಾ ನದಿ ತೀರದಲ್ಲಿ ಪ್ರಮುಖ ಆಕರ್ಷಣೆಯಾದ ಭವ್ಯ ‘ತುಂಗಭದ್ರಾ ಆರತಿ’ ಕಾರ್ಯಕ್ರಮ ನಡೆಯಲಿದೆ.
ಈ ಎಲ್ಲಾ ಧಾರ್ಮಿಕ ವಿಧಿವಿಧಾನಗಳಲ್ಲಿ ಗಣ್ಯ ಮಾನ್ಯರು, ಭಕ್ತಾದಿಗಳು, ಸಾರ್ವಜನಿಕರು ಹಾಗೂ ಮಾಧ್ಯಮದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ, ಶ್ರೀ ಹುಲಿಗೆಮ್ಮ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಇತ್ತೀಚೆಗೆ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ ವೇಳೆ ಸಚಿವರು ಭಕ್ತರಲ್ಲಿ ಮನವಿಮಾಡಿದ್ದಾರೆ.






Any questions related to ಸೆ. 8ರಂದು ಶ್ರೀ ಕ್ಷೇತ್ರ ಹುಲಿಗಿಯಲ್ಲಿ ‘ತುಂಗಭದ್ರಾ ಆರತಿ ಮಹೋತ್ಸವ’: ಸಾರ್ವಜನಿಕರು ಭಾಗವಹಿಸಲು ಸಚಿವರ ಮನವಿ!?