ಬ್ಯಾಂಕಿಂಗ್ ಪರೀಕ್ಷಾ ತಯಾರಿ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಾಗಾರ
ಕಲಬುರಗಿ, ಫೆ. 21: ಹೈದರಾಬಾದ್ ಕರ್ನಾಟಕ ಎಜುಕೇಷನ್ ಸೊಸೈಟಿಯ ಎಸ್.ಎಂ.ಟಿ. ವೀರಮ್ಮ ಗಂಗಸಿರಿ ಮಹಿಳಾ ಕಾಲೇಜಿನಲ್ಲಿ IQAC ಮುಂದಾಳತ್ವದಲ್ಲಿ ಹಾಗೂ ವಾಣಿಜ್ಯ ವಿಭಾಗದ ವತಿಯಿಂದ “ಬ್ಯಾಂಕಿಂಗ್ ಪರೀಕ್ಷಾ ತಯಾರಿ ಮತ್ತು ವೃತ್ತಿ ಮಾರ್ಗದರ್ಶನ” ವಿಷಯದ ಮೇಲೆ ಒಂದು ದಿನದ ಕಾರ್ಯಾಗಾರ ನಡೆಯಿತು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಆರ್.ಬಿ. ಕೊಂಡಾ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿನಿಯರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಈಗಿನಿಂದಲೇ ಯೋಜಿತ ಸಿದ್ಧತೆ ನಡೆಸಬೇಕು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಗುರು ದೀಕ್ಷಾ ಅಕಾಡೆಮಿ, ಕಲಬುರಗಿಯ ತರಬೇತುದಾರರಾದ ಶ್ರೀ ರಾಜಶಂಕರ ಬಿ. ಕರಡಿ ಗುಡ್ಡಿ ಅವರು ಭಾಗವಹಿಸಿ IBPS, SBI ಹಾಗೂ RRB ಬ್ಯಾಂಕಿಂಗ್ ಪರೀಕ್ಷೆಗಳ ಅರ್ಹತೆ, ಹಂತಗಳು ಮತ್ತು ಸಿಲೆಬಸ್ ಕುರಿತು ವಿವರಿಸಿದರು. ಗಣಿತ, ರೀಸನಿಂಗ್, ಇಂಗ್ಲಿಷ್, ಸಾಮಾನ್ಯ ಜ್ಞಾನ ಹಾಗೂ ಕಂಪ್ಯೂಟರ್ ಜ್ಞಾನ ವಿಷಯಗಳಲ್ಲಿ ಪರಿಣಾಮಕಾರಿ ಅಧ್ಯಯನ ವಿಧಾನಗಳು, ದಿನನಿತ್ಯ ಪತ್ರಿಕೆ ಓದುವ ಅಭ್ಯಾಸ, ಹಿಂದಿನ ಪ್ರಶ್ನೆಪತ್ರಿಕೆಗಳ ಅಭ್ಯಾಸ ಮತ್ತು ಮಾಕ್ ಟೆಸ್ಟ್ಗಳ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲರಾದ ಡಾ. ವೀಣಾ ಎಚ್, NAAC ಸಂಯೋಜಕರಾದ ಡಾ. ಮೋಹನರಾಜ್ ಪತ್ತಾರ, IQAC ಸಂಯೋಜಕರಾದ ಡಾ. ಶಿವರಾಜ ಗೌನಹಳ್ಳಿ ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ಕನ್ಯಾಕುಮಾರಿ ವಿ.ಆರ್. ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸಿಬ್ಬಂದಿಗಳಾದ ಶ್ರೀಮತಿ ಅನುರಾಧಾ ಎಸ್. ಪಾಟೀಲ್, ಶ್ರೀಮತಿ ರೀತಾ ಕುಲಕರ್ಣಿ ಹಾಗೂ ಶ್ರೀ ಸಂಗಮೇಶ್ ಟಿ. ಸಹಕರಿಸಿದರು.
ಕಾರ್ಯಕ್ರಮವನ್ನು ಬಿ.ಕಾಂ 4ನೇ ಸೆಮಿಸ್ಟರ್ ವಿದ್ಯಾರ್ಥಿನಿ ತನಿಷಾ ನಿರೂಪಿಸಿದರು. ಮುಖ್ಯ ಅತಿಥಿಗಳ ಪರಿಚಯವನ್ನು ಬಿ.ಕಾಂ 2ನೇ ಸೆಮಿಸ್ಟರ್ ವಿದ್ಯಾರ್ಥಿನಿ ತೇಜಸ್ವಿನಿ ನೀಡಿದರು. ಕೃತಜ್ಞತಾಪೂರ್ವಕ ವಂದನೆಯನ್ನು ಬಿ.ಕಾಂ 2ನೇ ಸೆಮಿಸ್ಟರ್ ವಿದ್ಯಾರ್ಥಿನಿ ಸಂಜನಾ ಸಲ್ಲಿಸಿದರು.
ಕೊನೆಯಲ್ಲಿ ವಿದ್ಯಾರ್ಥಿನಿಯರೊಂದಿಗೆ ಪ್ರಶ್ನೋತ್ತರ ಅವಧಿ ನಡೆಯಿತು.

