ಬೀದರ.13.ಫೆಬ್ರುವರಿ.25:- ಯುವ ವಿದ್ಯಾರ್ಥಿಗಳು ದಿನನಿತ್ಯ ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ಓದಿ ಜ್ಞಾನ ಸಂಪಾದಿಸಿ ಜೀವನದಲ್ಲಿ ಯಶಸ್ಸು ಸಾಧಿಸುವಂತೆ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಕರೆ ನೀಡಿದರು.

ಇಂದು ಬೀದರ ನಗರದಲ್ಲಿ 2022-23ನೇ ಸಾಲಿನ ಕೆಕೆಆರ್ಡಿಬಿ ಮ್ಯಾಕ್ರೊ ಯೋಜನೆ ಅಡಿಯಲ್ಲಿ 2.5 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಜಿಲ್ಲಾ ಕೇಂದ್ರ ಗ್ರಂಥಾಲಯದ ನೂನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಜ್ಞಾನವೇ ಸಂಪತ್ತು, ಜ್ಞಾನ ಗಳಿಸಲು ವಿದ್ಯಾರ್ಥಿಗಳು ಪುಸ್ತಕಗಳನ್ನು, ಪತ್ರಿಕೆಗಳನ್ನು ನಿಯತಕಾಲಿಕೆಗಳನ್ನು ಓದಬೇಕು. ಶೈಕ್ಷಣಿಕ ಅಭ್ಯಾಸದ ಜೊತೆ ಇತರೇ ಜ್ಞಾನವನ್ನು ಸಹ ಗಳಿಸಬೇಕು. ಗ್ರಂಥಾಲಯದಲ್ಲಿ ಎಲ್ಲ ತರಹದ ಪುಸ್ತಕಗಳಿವೆ, ಒಟ್ಟು 10 ಲಕ್ಷ ವಿವಿಧ ವಿಷಯಗಳ ಪುಸ್ತಕಗಳಿದ್ದು ತಾಲ್ಲೂಕಾ ಮಟ್ಟದ ಗ್ರಂಥಾಲಯಗಳಿಗೆ ಕಳಿಸಲಾಗುತ್ತದೆ ಎಂದರು.
ಇಂದು ಜಗತ್ತು ಒಂದು ಹಳ್ಳಿಯಾಗಿದೆ, ಅಧುನಿಕ ವಿಜ್ಞಾನ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನದ ಪರಿಣಾಮವಾಗಿ ಯುವಕರು ಸಾಮಾಜಿಕ ಜಾಲತಾಣದಲ್ಲೇ ಹೆಚ್ಚು ಸಮಯ ಕಳೆಯುತ್ತಾರೆ. ಫೇಸ್ಬುಕ್, ಇನಸ್ಟಾಲ್ ಗ್ರಾಂ, ಟ್ವಿಟಿರ್, ರೀಲ್ಸ್ಗಳನ್ನೇ ವೀಕ್ವಿಸುತ್ತಾರೆ. ಇದರಿಂದ ಆರೋಗ್ಯಕ್ಕೂ ಹಾನಿಕಾರಕ. ಪುಸ್ತಕ ಓದುವುದರಿಂದ ಹೆಚ್ಚಿನ ಜ್ಞಾನ ಗಳಿಸಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದಾಗಿದೆ ಎಂದು ಸಚಿವರು ತಿಳಿಸಿದರು.
ಪ್ರತಿದಿನ 500-600 ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ಭೇಟಿ ನೀಡುತ್ತಾರೆ. ಮುಂಬರುವ ದಿನಗಳಲ್ಲಿ ಡಿಜಿಟಲ್ ಗ್ರಂಥಾಲಯವನ್ನು ಇಲ್ಲಿ ಸ್ಥಾಪಿಸಲು ಕ್ರಮಕೈಗೊಳ್ಳಲಾಗುವುದೆಂದು ಅವರು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಪೌರಾಡಳಿತ ಹಾಗೂ ಹಜ್ ಸಚಿವರಾದ ರಹೀಂ ಖಾನ್, ನಗರಸಭೆ ಅಧ್ಯಕ್ಷರಾದ ಮಹ್ಮದ ಗೌಸ, ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಗಿರೀಶ ಬದೋಲೆ ಸೇರಿದಂತೆ ಇತರರು ಉಪಸ್ಥಿತರಿದ್ದರು.