ಬೀದರ.06.ಏಪ್ರಿಲ್.25:- ನನ್ನನ್ನು ಕೇವಲ ಮೂರ್ತಿ ಮಾಡಿ ಪೂಜೆಗೆ ಸೀಮಿತಗೊಳಿಸಿದ್ದೀರಿ.ನನ್ನ ಆಶಯಗಳೇನಾದವು? ನನ್ನ ಹೋರಾಟ ಎಲ್ಲಿಗೆ ಬಂತು? ಸಂವಿಧಾನದ ಆಶಯ ಈಡೇರಿತೆ?’

ಡಾ.ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತಿ ಕಾರ್ಯಕ್ರಮದ ಅಂಗವಾಗಿ ಸಂವಿಧಾನ ಸಂರಕ್ಷಣಾ ಸಮಿತಿಯು ನಗರದ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಶುಕ್ರವಾರ ರಾತ್ರಿ ಏರ್ಪಡಿಸಿದ್ದ ‘ಎಲ್ಲರ ಅಂಬೇಡ್ಕರ್’ ಸಂಘ- ಶರಣಂ- ಗಚ್ಛಾಮಿ ನಾಟಕ ಪ್ರದರ್ಶನವು ಇಂತಹದ್ದೊಂದು ಘಟನೆಗೆ ಸಾಕ್ಷಿಯಾಯಿತು.

ವೇದಿಕೆ ಮೇಲೆ ಪ್ರತಿಷ್ಠಾಪಿಸಿದ್ದ ಅಂಬೇಡ್ಕರ್ ಅವರ ಮೂರ್ತಿಗೆ ರಾಜಕಾರಣಿಗಳು ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸುತ್ತಾರೆ. ಮೂರ್ತಿ ಜೀವ ಪಡೆದು, ಅಂಬೇಡ್ಕರ್ ಅವರು ನಾಲ್ಕೈದು ಹೆಜ್ಜೆ ಹಾಕುತ್ತ ಮುಂದಕ್ಕೆ ಬರುತ್ತಾರೆ. ಆನಂತರ ರಾಜಕಾರಣಿಗಳಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತಾರೆ. ಅದಕ್ಕೆ ಅವರು ದಂಗಾಗಿ ಉತ್ತರ ಕೊಡದವರಾಗುತ್ತಾರೆ.
ಎಲ್ಲರಿಗೂ ಸಮಾನ ಅವಕಾಶಗಳು ಸೃಷ್ಟಿಯಾಗಬೇಕು. ಈ ದೇಶದ ಸಂಪತ್ತಿನ ಸಮಾನ ಹಂಚಿಕೆಯಾಗಬೇಕು. ಎಲ್ಲ ರಂಗಗಳಲ್ಲಿ ಶೋಷಿತರಿಗೆ ಅವಕಾಶಗಳು ಸಿಗಬೆಕು. ಮೇಲು-ಕೀಳು ಎಂಬ ಭಾವನೆ ತೊಲಗಬೇಕು. ಸಮೃದ್ಧವಾದ ರಾಷ್ಟ್ರ ನಿರ್ಮಾಣವಾಗಬೇಕು.
ಅಲ್ಪಸಂಖ್ಯಾತರಿಗೆ ಭದ್ರತೆ ಖಾತ್ರಿಪಡಿಸಬೇಕು. ಆದರೆ, ಈಗ ಏನಾಗುತ್ತಿದೆ. ಸಂವಿಧಾನದ ಆಶಯಗಳಿಗೆ ವಿರುದ್ಧವಾದ ಸಂಗತಿಗಳು ನಡೆಯುತ್ತಿದೆ. ಕೋಮುವಾದ ಹೆಚ್ಚಾಗುತ್ತಿದೆ. ಖಾಸಗಿ ರಂಗದಲ್ಲಿ ಶೋಷಿತರಿಗೆ ಅವಕಾಶಗಳೇ ಇಲ್ಲದಂತಾಗುತ್ತಿದೆ. ಇದರಿಂದ ಅಸಮಾನತೆ ಜಾಸ್ತಿಯಾಗುತ್ತಿದೆ. ದೇಶದಲ್ಲಿ ಇನ್ನೊಂದು ವ್ಯವಸ್ಥೆ ಸೃಷ್ಟಿಯಾಗುತ್ತಿದೆ. ಇನ್ನೊಂದು ಬಗೆಯ ತಾರತಮ್ಯದಿಂದ ಕೂಡಿದ ಸಮಾಜ ಸೃಷ್ಟಿಸಲಾಗುತ್ತಿದೆ. ಇದನ್ನು ತಡೆಯಲು ನೀವೇನೂ ಮಾಡುತ್ತಿದ್ದೀರಿ ಎಂದು ಅಂಬೇಡ್ಕರ್ ಅವರು ಪ್ರಶ್ನಿಸಿದಾಗ, ‘ನಾವು ಅಸಹಾಯಕರಾಗಿದ್ದೇವೆ’ ಎಂದು ರಾಜಕಾರಣಿಗಳು ಉತ್ತರಿಸುತ್ತಾರೆ. ‘ನಾನು ಕಂಡ ಕನಸು, ಸಂವಿಧಾನದ ಆಶಯಗಳು ನಿಜಸ್ವರೂಪದಲ್ಲಿ ಜಾರಿಗೆ ಬರದಿದ್ದರೆ ಸಮ ಸಮಾಜದ ಉದ್ದೇಶ ಈಡೇರುವುದಿಲ್ಲ. ಇದಕ್ಕಾಗಿ ಪ್ರಜೆಗಳು ದನಿ ಎತ್ತಬೇಕು’ ಎಂಬ ಸಂದೇಶ ಕೊಟ್ಟು ಅಂಬೇಡ್ಕರ್ ಪುನಃ ಮೂರ್ತಿಯಾಗುತ್ತಾರೆ. ಇದರೊಂದಿಗೆ ಕರತಾಡನ ಮುಗಿಲು ಮುಟ್ಟುತ್ತದೆ.
ಹೈದರಾಬಾದಿನ ಅಭ್ಯುದಯ ಆರ್ಟ್ಸ್ ಕಲಾವಿದರು ನಡೆಸಿಕೊಟ್ಟ 90 ನಿಮಿಷಗಳ ನಾಟಕವು ಸಭಿಕರನ್ನು ಅವರ ಆಸನಗಳಿಂದ ಎದ್ದೇಳದಂತೆ ಹಿಡಿದಿತ್ತು. ಅಂಬೇಡ್ಕರ್ ಅವರ ಬಾಲ್ಯಜೀವನ, ಜಾತಿ ತಾರತಮ್ಯ, ಜಾತಿಯ ಕಾರಣಕ್ಕಾಗಿ ಎದುರಿಸಿದ ಅಪಮಾನ, ರಮಾಬಾಯಿ ಅವರೊಂದಿಗಿನ ವಿವಾಹ, ವಿದೇಶದಲ್ಲಿ ವ್ಯಾಸಂಗ, ಚೌಡಾರ ಕೆರೆ ನೀರಿಗಾಗಿ ನಡೆಸಿದ ಹೋರಾಟ, ಸಂವಿಧಾನ ರಚನೆ, ಹಿಂದೂ ಕೋಡ್ ಬಿಲ್ ಜಾರಿ, ಶೋಷಿತರಿಗೆ ಮೀಸಲು ಕಲ್ಪಿಸಬೇಕೆಂದು ಮಹಾತ್ಮ ಗಾಂಧೀಜಿ ಜೊತೆ ನಡೆಸಿದ ಸಂವಾದ, ಕಾನೂನು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋರಾಟಕ್ಕಿಳಿದದ್ದು, ಹಿಂದೂ ಧರ್ಮ ತೊರೆದು ಬೌದ್ಧ ಧರ್ಮ ಸ್ವೀಕರಿಸಿ, ಬಹುಜನ ಸಮಾಜವನ್ನು ಉದ್ದೇಶಿಸಿ ಮಾತನಾಡಿದ ಸಂಗತಿಗಳು ಥೇಟ್ ಕಣ್ಣಮುಂದೆ ನಡೆದಂತೆ ಭಾಸವಾಯಿತು. ಕಲಾವಿದರು ಪರಾಕಾಯ ಪ್ರವೇಶ ಮಾಡಿದಂತೆ ಅದ್ಭುತ ನಟನೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ನಾಟಕ ಕೇವಲ ಸಂಭಾಷಣೆಗೆ ಸೀಮಿತವಾಗಿರಲಿಲ್ಲ. ದುಃಖ ಹಾಗೂ ಸಂತೋಷದ ಸಂದರ್ಭವನ್ನು ಪಾತ್ರಧಾರಿಗಳು ಕುಣಿತ, ಹಾಡುಗಳ ಮೂಲಕ ಪ್ರಸ್ತುತಪಡಿಸಿ ನೋಡುಗರನ್ನು ಕಟ್ಟಿಹಾಕಿದರು.
ಈ ನಾಟಕವು ಆಂಧ್ರಪ್ರದೇಶ, ತೆಲಂಗಾಣದಲ್ಲಿ 700 ಪ್ರದರ್ಶನಗಳನ್ನು ಕಂಡಿದೆ. ಮೊದಲ ಬಾರಿಗೆ ಕನ್ನಡ ಭಾಷೆಯಲ್ಲಿ ಪ್ರದರ್ಶನ ಕಂಡಿತು. ಮೊದಲ ಪ್ರದರ್ಶನಕ್ಕೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಯಿತು. ಇಡೀ ರಂಗಮಂದಿರ ಭರ್ತಿಯಾಗಿತ್ತು. ಅನೇಕರು ನಿಂತುಕೊಂಡೇ ನಾಟಕ ಕಣ್ತುಂಬಿಕೊಂಡರು.
ಆಣದೂರಿನ ಭಂತೆ ಮಹಾಥೇರೋ, ಬಸವಕಲ್ಯಾಣದ ಬಸವಲಿಂಗ ಪಟ್ಟದ್ದೇವರು, ಬಸವಮಹಾಮನೆಯ ಬೆಲ್ದಾಳ ಸಿದ್ದರಾಮ ಶರಣರು, ಭಾಲ್ಕಿಯ ಗುರುಬಸವ ಪಟ್ಟದ್ದೇವರು, ಬಸವ ಸೇವಾ ಪ್ರತಿಷ್ಠಾನದ ಗಂಗಾಂಬಿಕಾ ಅಕ್ಕ ಸೇರಿದಂತೆ ಇತರೆ ಧರ್ಮದ ಮುಖಂಡರು, ಸಂವಿಧಾನ ಸಂರಕ್ಷಣಾ ಸಮಿತಿ ಮುಖಂಡರಾದ ಬಾಬುರಾವ್ ಪಾಸ್ವಾನ್, ಅನಿಲಕುಮಾರ ಬೆಲ್ದಾರ, ರಮೇಶ ಡಾಕುಳಗಿ, ಬಸವರಾಜ ಮಾಳಗೆ ಮತ್ತಿತರರು ಹಾಜರಿದ್ದರು. ಸಂದೀಪ ಕಾಂಟೆ ಸಂವಿಧಾನದ ಪೀಠಿಕೆ ಓದಿಸಿದರು. ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಪಂ ಸಿಇಒ ಡಾ. ಗಿರೀಶ ಬದೋಲೆ ಅವರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಗೌರವ ಸಲ್ಲಿಸಿದರು.