ಕಲಬುರಗಿ.28.ಮಾರ್ಚ್.25:ಕಮಲಾಪುರ ಸರ್ಕಾರಿ ಪದವಿ ಕಾಲೇಜಿನಲ್ಲಿ ಶೈಕ್ಷಣಿಕ ವರ್ಷದ ಉದ್ಘಾಟನೆ ಹಾಗೂ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಜಾನಪದ ಉತ್ಸವವನ್ನು ಆಯೋಜಿಸಲಾಗಿತ್ತು.
ಉದ್ಘಾಟನಾ ಕಾರ್ಯಕ್ರಮಕ್ಕೂ ಮುನ್ನ ಪ್ರಾಚಾರ್ಯರು, ಪ್ರಾಧ್ಯಾಪಕರು ಬಂಡಿಯಲ್ಲಿ ಕುಳಿತುಕೊಂಡು ಕಾಲೇಜಿಗೆ ಬಂದರು
ವಿದ್ಯಾರ್ಥಿಗಳು ಹಲಗೆ ಬಾರಿಸುತ್ತಾ, ನೃತ್ಯ ಮಾಡುತ್ತಾ ಅತಿಥಿಗಳನ್ನು ಸಭಾಭವನಕ್ಕೆ ಕರೆತಂದರು. ಕಾಲೇಜಿನ ಆವರಣದಲ್ಲಿ ಬಾಳೆಗೊನೆ, ಕಬ್ಬು, ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿತ್ತು. ಕುಟ್ಟುವ, ಬೀಸುವ ಮತ್ತು ಅಡಕಲ ಗಡಗಿಗಳ ಮೇಲೆ ದೀಪಾಲಂಕಾರ ಮಾಡಲಾಗಿತ್ತು. ಅನೇಕ ಸಾಮಗ್ರಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಸ್.ಮಾಲಿಪಾಟೀಲ, ‘ಜನಪದವು ಯಾವಾಗ ಹುಟ್ಟಿಕೊಂಡಿತು ಎಂದು ನಿಖರವಾದ ಇತಿಹಾಸವಿಲ್ಲ. ಮನುಜನ ಅರಿವಿನ ಉಗಮದೊಂದಿಗೆ ಜನಪದ ಬೆಳೆದು ಬಂದಿದೆ. ಜನರು ತಮ್ಮ ದಿನ ನಿತ್ಯದ ಕಾಯಕದೊಂದಿಗೆ ಹಾಡು, ಕುಣಿತ, ಸಾಹಿತ್ಯ, ಕಲೆ, ಆಟ, ಬಯಲಾಟ, ನಾಟಕಗಳ ಮೂಲಕ ತಮ್ಮ ಸಂಭ್ರಮವನ್ನು ಬಹು ಸಡಗರದಿಂದ ಆಚರಿಸಿಕೊಂಡು ಬಂದಿರುವ ಈ ಕಲೆಗಳೇ ಜಾನಪದವೆಂದು ಹೇಳುತ್ತೇವೆ.
ಜಾನಪದವು ಜನವಾಣಿ ಬೇರು ಕವಿವಾಣಿ ಹೂವು ಎಂದು ಬಿ.ಎಂ.ಶ್ರೀಯವರು ಹೇಳಿದ್ದಾರೆ. ಜಾನಪದವು ಎಲ್ಲಾ ಸಾಹಿತ್ಯ, ಸಂಗೀತ, ಕಲೆಗಳ ತಾಯಿ ಬೇರಾಗಿದೆ’ ಎಂದು ಹೇಳಿದರು.
ನಿವೃತ್ತ ಶಿಕ್ಷಕ ಗುರುಲಿಂಗಪ್ಪ ಚಿರಡಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯೆ ಪ್ರೊ. ಅಮೃತಾ ಕಟಕೆ ‘ಜನಪದವೇ ನಮ್ಮಉಸಿರು, ನಮ್ಮ ಸಂಸ್ಕೃತಿ, ಸಂಪ್ರದಾಯ ಇದನ್ನು ಸದಾ ನಾವು ಆಚರಿಸಬೇಕಾಗಿದೆ. ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಬೇಕಾಗಿದೆ’ ಎಂದರು.
ಎಲ್ಲ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ರೇಷ್ಮೆ ಅಂಗಿ, ಪಂಚೆ, ಇಳಕಲ್ ಸೀರೆ ಧರಿಸಿಕೊಂಡು ಬಂದಿದ್ದರು.
ಪ್ರಾಧ್ಯಾಪಕರಾದ ಜಗದೇವಪ್ಪ ಧರಣಿ, ಫಾತಿಮಾ ಹಸನ್ನತ್, ಮಹಮ್ಮದ್ ಯೂಸೂಫ್, ಜ್ಯೋತಿ ಕಿರಣಗಿ, ಗೌಶೀಯಾ ಬೇಗಂ, ಗಿರೀಶ, ಶ್ರವಣಕುಮಾರಿ, ಅಂಬಣ್ಣ, ಸತ್ತೇಶ್ವರ ಚೌಧರಿ, ಪ್ರೊ.ನೀತಾ ಭೋಸ್ಲೆ, ಖಾಜಿ ಪರವಿನ್, ಶಾಮರಾವ್, ಮಹಾಂತೇಶ, ಸಫಿಯಾ ಬೇಗಂ, ನುಜುತ್ ಪರವೀನ್, ಅವಿನಾಶ ಕಂಠಿಕರ, ರವೀಂದ್ರ ಕುಂಬಾರ, ಲಕ್ಷ್ಮಣ, ಮಾಣಿಕ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.