ಹೊಸ ದೆಹಲಿ.08.ಜೂನ್.25:-ದೇಶದಲ್ಲಿ 49 ಜಿಲ್ಲೆಗಳಲ್ಲಿ ಜನಿಸಿದ ಮಕ್ಕಳ ಸಂಖ್ಯೆಗಿಂತ ಸಾವಿನ ಸಂಖ್ಯೆ ಹೆಚ್ಚಾಗಿದೆ. 2021 ರ ಭಾರತದ ನಾಗರಿಕ ನೋಂದಣಿ ದತ್ತಾಂಶವು ಅನಿರೀಕ್ಷಿತ ಮತ್ತು ಪ್ರಮುಖ ಜನಸಂಖ್ಯಾ ಪ್ರವೃತ್ತಿಯನ್ನು ಎತ್ತಿ ತೋರಿಸಿದೆ. ಕರ್ನಾಟಕದ 7 ಜಿಲ್ಲೆಗಳಲ್ಲಿ, ಹುಟ್ಟುವವರಿಗಿಂತ ಮರಣ ಹೊಂದುವವರ ಪ್ರಮಾಣವೇ ಹೆಚ್ಚಾಗಿದೆ ಎಂಬ ಎಚ್ಚರಿಕೆಯ ಗಂಟೆಯನ್ನು ಕೇಂದ್ರ ಸರ್ಕಾರದ ವರದಿಯೊಂದು ಮೊಳಗಿಸಿದೆ.
ಇದು ಸಾಮಾನ್ಯವಾಗಿ ಕಂಡುಬರದ ಪರಿಸ್ಥಿತಿಯಾಗಿದ್ದು, ಹೆಚ್ಚಿನ ಜನನ ದರಗಳಿಂದಾಗಿ ಜನಸಂಖ್ಯೆಯು ಸ್ಥಿರವಾಗಿ ಹೆಚ್ಚುತ್ತಿದೆ. ಈ ಬದಲಾವಣೆ ಕಂಡುಬರುತ್ತಿರುವ ಹೆಚ್ಚಿನ ಜಿಲ್ಲೆಗಳು ದಕ್ಷಿಣ ಭಾರತದ ರಾಜ್ಯಗಳಲ್ಲಿವೆ. ಕೇರಳ, ತಮಿಳುನಾಡು ಮತ್ತು ಕರ್ನಾಟಕದಂತಹ ರಾಜ್ಯಗಳಲ್ಲಿ ಈ ಬದಲಾವಣೆ ಹೆಚ್ಚಾಗಿ ಕಂಡುಬಂದಿದೆ.
ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಜನಸಂಖ್ಯೆ ಕುಸಿಯುತ್ತಿದೆ ಎಂಬ ವರದಿಗಳ ನಡುವೆಯೇ ಆತಂಕಕಾರಿ ಮಾಹಿತಿಯೊಂದು ಬೆಳಕಿಗೆ ಬಂದಿದೆ.
ಕರ್ನಾಟಕದ ಈ 7 ಜಿಲ್ಲೆಗಳಲ್ಲಿ ಅಪಾಯ
2021ರ ನಾಗರಿಕ ನೋಂದಣಿ ದತ್ತಾಂಶದ ಅನ್ವಯ ಕರ್ನಾಟಕದ 7 ಜಿಲ್ಲೆಗಳು ಹೆಚ್ಚು ಮರಣವನ್ನು ಕಾಣುತ್ತಿವೆ. ಉಡುಪಿ, ಹಾಸನ, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಜನನಕ್ಕಿಂತ ಸಾವಿನ ಸಂಖ್ಯೆಯೇ ಅಧಿಕವಾಗಿದೆ. 2019ರಲ್ಲಿ ಕೇವಲ ಚಾಮರಾಜನಗರ, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಲ್ಲಿ ಮಾತ್ರ ಮರಣದರ ಹೆಚ್ಚಿತ್ತು.
ಕಲ್ಯಾಣ ಕರ್ನಾಟಕ ಮಾಮೂಲು ಸ್ಥಿತಿ
ಕಲ್ಯಾಣ ಕರ್ನಾಟಕ ಭಾಗದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು ಮತ್ತು ಕೊಪ್ಪಳದಲ್ಲಿ ಜನನವೇ ಹೆಚ್ಚಿದೆ ಎಂದು ದತ್ತಾಂಶ ಹೇಳಿದೆ. ಮಿಕ್ಕಂತೆ, ಕೋಲಾರ, ಚಿಕ್ಕಬಳ್ಳಾಪುರ, ಶಿವಮೊಗ್ಗ, ಬಳ್ಳಾರಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳು ಆತಂಕದ ಹೊಸ್ತಿಲಲ್ಲಿವೆ.
ರಾಜ್ಯದ 11 ಜಿಲ್ಲೆಗಳಲ್ಲಿ ಮುಂದಿದೆ ಅಪಾಯ
ಇನ್ನು ಬೆಳಗಾವಿ, ಉತ್ತರ ಕನ್ನಡ, ಧಾರವಾಡ, ಗದಗ, ಹಾವೇರಿ, ದಾವಣಗೆರೆ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ತುಮಕೂರು, ಮೈಸೂರು ಮತ್ತು ಬೆಂಗಳೂರು ನಗರ ಜಿಲ್ಲೆಗಳಲ್ಲಿ ಜನಸಂಖ್ಯೆ ಏರಿಕೆ ತುಂಬಾ ಕಡಿಮೆ ಇದೆ.