ಬೆಂಗಳೂರು.18.ಮೇ.25:- ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಎಂಎಸ್ಎಂಇ ಅನ್ನು (ಅತಿ ಸಣ್ಣ, ಸಣ್ಣ, ಮಧ್ಯಮ ಕೈಗಾರಿಕೆ) ಪ್ರತ್ಯೇಕ ಇಲಾಖೆಯನ್ನಾಗಿ ಮಾಡುತ್ತೇನೆ. MSME) ಪ್ರತ್ಯೇಕ ಇಲಾಖೆ ರಚಿಸಿ ಕಾರ್ಯದರ್ಶಿಯನ್ನು ನೇಮಕ ಮಾಡಲಾಗುವುದು ಅದಕ್ಕೊಬ್ಬರು ಮಂತ್ರಿ ಹಾಗೂ ಕಾರ್ಯದರ್ಶಿಯನ್ನೂ ನೇಮಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಶನಿವಾರ ಹಮ್ಮಿಕೊಂಡಿದ್ದ ಅಮೃತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕೆಲವು ರಾಜ್ಯಗಳಲ್ಲಿ ಎಂಎಸ್ಎಂಇ ಪ್ರತ್ಯೇಕ ಇಲಾಖೆಯನ್ನಾಗಿ ಮಾಡಲಾಗಿದೆ. ಕಾಸಿಯಾದವರು ನೀಡಿರುವ ಮನವಿಯಲ್ಲಿ ಕರ್ನಾಟಕದಲ್ಲಿ ಎಂಎಸ್ಎಂಇಯನ್ನು ಪ್ರತ್ಯೇಕ ಇಲಾಖೆ ಮಾಡುವಂತೆ ಕೇಳಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ಮಂತ್ರಿಗಳನ್ನು ಕರೆದು ಸಭೆ ಕರೆದು ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯದ ಅಭಿವೃದ್ಧಿ ಸಾಧ್ಯ
ಎಂಎಸ್ಎಂಇ ಬೆಳೆದಷ್ಟು ರಾಜ್ಯದ ಅಭಿವೃದ್ದಿ ಸಾಧ್ಯ. ಇದರಿಂದ ತಲಾ ಆದಾಯ ಹೆಚ್ಚಾಗುತ್ತದೆ. 20 ಲಕ್ಷಕ್ಕೂ ಹೆಚ್ಚು ಎಂಎಸ್ಎಂಇ ಮೂಲಕ 1.85 ಕೋ. ರೂ.ಗೂ ಹೆಚ್ಚು ಉದ್ಯೋಗ ಸೃಷ್ಟಿಯಾಗಿದೆ. ಕೃಷಿ ಕ್ಷೇತ್ರ ಬಿಟ್ಟರೆ ಎಂಎಸ್ಎಂಇ ಹೆಚ್ಚು ಉದ್ಯೋಗ ಕೊಡಿಸಿದೆ. ರಾಜ್ಯದಲ್ಲಿರುವ 7 ಕೋಟಿ ಜನರಿಗೆ ಶಕ್ತಿ ತುಂಬಬೇಕು. ಅರ್ಹತೆ ಇರುವವರಿಗೆ ಕೆಲಸ ಕೊಡಬೇಕು. ಜಾತಿ ನೋಡಿ ಉದ್ಯೋಗ ಕೊಡಲು ಆಗುವುದಿಲ್ಲ. ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಉದ್ಯೋಗದಲ್ಲಿ ತರಬೇತಿ ಕೊಡಬೇಕು ಎಂದು ತಿಳಿಸಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಶರಣಬಸಪ್ಪ ದರ್ಶನಾಪುರ, ವಿಧಾನ ಪರಿಷತ್ತು ಸದಸ್ಯ ನಜೀರ್ ಅಹ್ಮದ್, ಕಾಸಿಯಾ ಅಧ್ಯಕ್ಷ ಎಂ.ಜಿ.ರಾಜಗೋಪಾಲ್, ಉಪಾಧ್ಯಕ್ಷ ಗಣೇಶ್ ಎಸ್.ರಾವ್ ಮತ್ತಿತರರು ಭಾಗವಹಿಸಿದ್ದರು.
ನಮ್ಮ ತೆರಿಗೆಯ ಶೇ.50 ಕೇಂದ್ರ ನಮಗೆ ಕೊಡಲಿ: ಸಿದ್ದು
ಕರ್ನಾಟಕದಿಂದ 4.50 ಲಕ್ಷ ಕೋಟಿ ರೂ. ತೆರಿಗೆ ಕೇಂದ್ರಕ್ಕೆ ಹೋಗುತ್ತದೆ. ನಮಗೆ ವಾಪಸು ಬರುವುದು ಕೇವಲ 60-70 ಸಾವಿರ ಕೋಟಿ ರೂ. ಅಷ್ಟೇ. ಹೀಗಾದರೆ ಕರ್ನಾಟಕ ಅಭಿವೃದ್ದಿ ಹೇಗೆ ಸಾಧ್ಯ. ನಾವು ಪಾವತಿಸುವ ತೆರಿಗೆಯಲ್ಲಿ ಕನಿಷ್ಠ ಶೇ.50ರಷ್ಟಾದರೂ ನಮಗೆ ವಾಪಸ್ ಕೊಡಿ ಎಂದು ಕೇಳಿಕೊಳ್ಳುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.