09/06/2025 2:32 AM

Translate Language

Home » ಲೈವ್ ನ್ಯೂಸ್ » ಕುಲಪತಿ ಹುದ್ದೆ: ಪದವಿ ಕಾಲೇಜು ಅಧ್ಯಾಪಕರ ಕಡೆಗಣನೆ

ಕುಲಪತಿ ಹುದ್ದೆ: ಪದವಿ ಕಾಲೇಜು ಅಧ್ಯಾಪಕರ ಕಡೆಗಣನೆ

Facebook
X
WhatsApp
Telegram

ಬೆಂಗಳೂರು.17.ಮೇ.25:- ಸರ್ಕಾರಿ ವಿಶ್ವವಿದ್ಯಾಲಯಗಳ ಕುಲಪತಿ ಸ್ಥಾನಕ್ಕೆ ತಮ್ಮನ್ನು ಪರಿಗಣಿಸದ ಸರ್ಕಾರ ಹಾಗೂ ಶೋಧನಾ ಸಮಿತಿಗಳ ವಿರುದ್ಧ ಆಂದೋಲನ ರೂಪಿಸಲು ಪದವಿ ಕಾಲೇಜುಗಳ ಅಧ್ಯಾಪಕ ವೃಂದ ಮುಂದಾಗಿದೆ.

ರಾಯಚೂರು, ಗುಲ್ಬರ್ಗಾ, ಧಾರವಾಡದ ಕರ್ನಾಟಕ ವಿಶ್ವವಿದ್ಯಾ ಲಯ, ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ಮೈಸೂರಿನ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯಗಳ ಕುಲಪತಿ ನೇಮಕಕ್ಕೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ರಚಿಸಲಾಗಿದ್ದ ಶೋಧನಾ ಸಮಿತಿಗಳು ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರನ್ನಷ್ಟೇ ಪರಿಗಣಿಸಿ, ರಾಜ್ಯದ ಪ್ರಥಮ ದರ್ಜೆ ಕಾಲೇಜುಗಳ ಪ್ರಾಧ್ಯಾಪಕರ ಅರ್ಜಿಗಳನ್ನು ತಿರಸ್ಕರಿಸಿರು ವುದು ವಿವಾದಕ್ಕೆ ನಾಂದಿ ಹಾಡಿದೆ.

ರಾಜ್ಯದಲ್ಲಿ 41 ಸರ್ಕಾರಿ ವಿಶ್ವವಿದ್ಯಾ ಲಯಗಳಿವೆ. ಕುಲಪತಿಗಳ ಅಧಿಕಾರದ ಅವಧಿ ನಾಲ್ಕು ವರ್ಷಗಳಿದ್ದು, ಆಯಾ ವಿಶ್ವವಿದ್ಯಾಲಯಗಳಿಗೆ ನೇಮಕವಾದ ಕುಲಪತಿಗಳ ಅವಧಿ ಮುಗಿಯುವ ಮೂರು ತಿಂಗಳ ಮೊದಲು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ-2000 ಪ್ರಕಾರ ಕುಲಪತಿಗಳ ನೇಮಕಾತಿಗೆ ಮೂವರು ಸದಸ್ಯರನ್ನು ಒಳಗೊಂಡ ಶೋಧನಾ ಸಮಿತಿಯನ್ನು ರಾಜ್ಯ ಸರ್ಕಾರ ರಚಿಸುತ್ತದೆ.

ಆಯಾ ವಿಶ್ವವಿದ್ಯಾಲಯದ ಸಿಂಡಿಕೇಟ್, ವಿಶ್ವವಿದ್ಯಾಲಯ ಅನುದಾನ ಆಯೋಗ ಹಾಗೂ ರಾಜ್ಯಪಾಲರು ತಲಾ ಒಬ್ಬರನ್ನು ಶೋಧನಾ ಸಮಿತಿಗೆ ನೇಮಕ ಮಾಡುವ ಅಧಿಕಾರ ಹೊಂದಿದ್ದಾರೆ. ರಾಜ್ಯ ಸರ್ಕಾರ ನಾಮನಿರ್ದೇಶನ ಮಾಡುವ ಸದಸ್ಯ ಸಮಿತಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಾರೆ.
ಶೋಧನಾ ಸಮಿತಿ ಅಂತಿಮಗೊಳಿಸಿದ ಮೂವರ ಪಟ್ಟಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸುತ್ತದೆ. ನಂತರ ಪಟ್ಟಿಯನ್ನು ಸರ್ಕಾರ ರಾಜ್ಯಪಾಲರಿಗೆ ಕಳುಹಿಸುತ್ತದೆ.

ರಾಜ್ಯಪಾಲರು ಸರ್ಕಾರದ ಮುಖ್ಯಸ್ಥರ ಜತೆ ಚರ್ಚಿಸಿ, ಒಬ್ಬರನ್ನು ನೇಮಕ ಮಾಡುತ್ತಾರೆ. ಐದು ವಿಶ್ವವಿದ್ಯಾಲಯ ಗಳಿಗೆ ನೇಮಕ ಮಾಡಿದ ಶೋಧನಾ ಸಮಿತಿಗಳು ವಿಶ್ವವಿದ್ಯಾಲಯಗಳಲ್ಲಿ 10 ವರ್ಷ ಹಾಗೂ ಅದಕ್ಕಿಂತ ಹೆಚ್ಚು ಕೆಲಸ ಮಾಡಿದ ಅನುಭವ ಇರುವ ತಲಾ ಮೂವರು ಪ್ರಾಧ್ಯಾಪಕರ ಹೆಸರನ್ನು ಅಂತಿಮಗೊಳಿಸಿ, ಸರ್ಕಾರಕ್ಕೆ ಸಲ್ಲಿಸಿವೆ.

‘ನಿಯಮಗಳು ಎಲ್ಲ ವಿಶ್ವವಿದ್ಯಾಲಯ ಗಳಿಗೂ, ಎಲ್ಲರಿಗೂ ಒಂದೇ ಇರಬೇಕು. ಆದರೆ, ಶೋಧನಾ ಸಮಿತಿಗಳು ತಮಗೆ ಬೇಕಾದ ಹಾಗೆ ನಿಯಮಗಳನ್ನು ಬಳಸಿಕೊಂಡು ಕುಲಪತಿ ಅಭ್ಯರ್ಥಿ
ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿವೆ’ ಎಂದು ಪ್ರಶ್ನಿಸುತ್ತಾರೆ ಕುಲಪತಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದ ಆಕಾಂಕ್ಷಿಗಳು

‘ಕರ್ನಾಟಕ ವಿಶ್ವವಿದ್ಯಾಲಯಗಳ ಕಾಯ್ದೆಯಲ್ಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರನ್ನೇ ಪರಿಗಣಿಸಬೇಕು ಎಂಬ ನಿಯಮವೇ ಇಲ್ಲ. ಯುಜಿಸಿಯಲ್ಲೂ ಅದೊಂದೇ ಅಂಶ ಅಡಕವಾಗಿಲ್ಲ. ಬೆಂಗಳೂರು ವಿಶ್ವವಿದ್ಯಾಲಯದ ಈಗಿನ ಕುಲಪತಿ ಎಂ.ಎಸ್. ಜಯಕರ್ ಅವರು ಖಾಸಗಿ ದಂತವೈದ್ಯಕೀಯ ಕಾಲೇಜು
ಪ್ರಾಂಶುಪಾಲರಾಗಿದ್ದರು. ಕೆಂಪೇಗೌಡ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಾಧ್ಯಾಪಕ ಡಾ.ಬಿ.ಸಿ. ಭಗವಾನ್‌ ಅವರನ್ನು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಿಸಲಾಗಿದೆ.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಎಸ್‌. ವಿದ್ಯಾಶಂಕರ್‌, ನೃಪತುಂಗ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಶ್ರೀನಿವಾಸ ಬಳ್ಳಿ ಅವರು ಖಾಸಗಿ ಎಂಜಿನಿಯರಿಂಗ್‌ ಕಾಲೇಜು ಅಧ್ಯಾಪಕ ರಾಗಿದ್ದರು. ಹೀಗೆ ಹಲವು ವಿಶ್ವವಿದ್ಯಾಲಯಗಳಿಗೆ ಆಯ್ಕೆ ಮಾಡುವಾಗ ಇದ್ದ ನಿಯಮ, ಸರ್ಕಾರಿ ಪದವಿ ಕಾಲೇಜುಗಳ ಅಧ್ಯಾಪಕರನ್ನು ಪರಿಗಣಿಸುವಾಗ ಹೇಗೆ ಬದಲಾಯಿತು’ ಎಂದು ಪ್ರಶ್ನಿಸುತ್ತಾರೆ ಕುಲಪತಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದ ಆಕಾಂಕ್ಷಿಗಳು.

ವಿವಾದದ ನಂತರ ಅರ್ಜಿ ಬದಲಾವಣೆ

ಕರ್ನಾಟಕ ವಿಶ್ವವಿದ್ಯಾಲಯ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಸೇರಿದಂತೆ ಐದು ವಿಶ್ವವಿದ್ಯಾಲಯಗಳ ಕುಲಪತಿ ಹುದ್ದೆಗೆ ಅರ್ಜಿ ಆಹ್ವಾನಿಸಿದಾಗ ಮೂರು ಅರ್ಹತೆ ನಗದಿ
ಮಾಡಲಾಗಿತ್ತು.

‘ಶಿಕ್ಷಣ ತಜ್ಞರಾಗಿರಬೇಕು. ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕನಿಷ್ಠ ಹತ್ತು ವರ್ಷಗಳ ಬೋಧನೆ, ಸಂಶೋಧನಾ ಅನುಭವ ಇರಬೇಕು. ಯಾವುದೇ ಶೈಕ್ಷಣಿಕ ಆಡಳಿತ ಸಂಸ್ಥೆಯಲ್ಲಿ ಹತ್ತು ವರ್ಷಗಳ ಅನುಭವ ಹಾಗೂ ಶೈಕ್ಷಣಿಕ ನಾಯಕತ್ವ ವಹಿಸಿದವರು ಅರ್ಜಿ ಸಲ್ಲಿಸಬಹುದು’ ಎಂದು ಅಧಿಸೂಚನೆಯಲ್ಲಿ ಹೇಳಲಾಗಿತ್ತು. ಆದರೆ, ಶೋಧನಾ ಸಮಿತಿಗಳು ವಿಶ್ವವಿದ್ಯಾಲಯದ ಪ್ರಾಧ್ಯಾಪಕರನ್ನು ಮಾತ್ರ ಪರಿಗಣಿಸಿದ್ದು ವಿವಾದವಾಗುತ್ತಿದ್ದಂತೆಯೇ ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಆಹ್ವಾನಿಸಿದ ಅರ್ಜಿಯಲ್ಲಿ ಈ ನಿಯಮಗಳನ್ನು ಬದಲಾಯಿಸಿ, ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ ಕೆಲಸ
ಮಾಡಿದ ಅನುಭವವನ್ನು ಕಡ್ಡಾಯಗೊಳಿಸಲಾಗಿದೆ.

ಮುಚ್ಚಲೂ ಇಲ್ಲ, ಕುಲಪತಿ ನೇಮಿಸಲೂ ಇಲ್ಲ

ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನದಡಿ ಸಂಶೋಧನಾ ಚಟುವಟಿಕೆಗಳಿಗಾಗಿ ಅಸ್ತಿತ್ವಕ್ಕೆ ಬಂದ ಮಹಾರಾಣಿ ಕ್ಲಸ್ಟರ್‌ ಹಾಗೂ ನೃಪತುಂಗ ವಿಶ್ವವಿದ್ಯಾಲಯಗಳ ಪ್ರಥಮ ಕುಲಪತಿಗಳ ಅವಧಿ ಮುಗಿದು ಆರು ತಿಂಗಳಾದರೂ ಸರ್ಕಾರ ಶೋಧನಾ ಸಮಿತಿ ರಚನೆ ಮಾಡಿಲ್ಲ.ಈ ಎರಡೂ ವಿಶ್ವವಿದ್ಯಾಲಯ
ಗಳನ್ನು ಮುಚ್ಚುವ ಕುರಿತು ಸರ್ಕಾರದ ಹಂತದಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅಧ್ಯಕ್ಷತೆಯಲ್ಲಿ ರಚನೆಯಾದ ಸಂಪುಟ ಉಪಸಮಿತಿಯೂ ಈ ಕುರಿತು ಚರ್ಚೆ ನಡೆಸಿದೆ. ಆದರೆ, ಮುಚ್ಚುವ ಅಥವಾ ಕುಲಪತಿ ನೇಮಿಸುವ ಕುರಿತು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!