ಬೆಂಗಳೂರು.28.ಏಪ್ರಿಲ್.25:- “ಪ್ರಜಾಪ್ರಭುತ್ವ” ಆಶಯಕ್ಕೆ ನೈಜ ಅರ್ಥ ಕೊಡುವುದು ಪಂಚಾಯತ್ ರಾಜ್ ವ್ಯವಸ್ಥೆ. ಜನತೆ ತಮ್ಮನ್ನು ತಾವೇ ಆಳಿಕೊಳ್ಳುವ ಸ್ಥಳೀಯ ಸರ್ಕಾರದ ವ್ಯವಸ್ಥೆಯ ಕನಸು ಕಂಡವರು ಮಾಜಿ ಪ್ರಧಾನಿ ಶ್ರೀ ರಾಜೀವ್ ಗಾಂಧಿಯವರು, ಸಂವಿಧಾನದ 73ನೇ ತಿದ್ದುಪಡಿಯಾಗಿ ಈ ಐತಿಹಾಸಿಕ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಯಾಗಿದ್ದು ದೇಶದ ಕ್ರಾಂತಿಕಾರಿ ನಿರ್ಧಾರಗಳಲ್ಲೊಂದು.
ಪಂಚಾಯತ್ ರಾಜ್ ವ್ಯವಸ್ಥೆಯ ವಿಷಯ ಬಂದಾಗ ಕರ್ನಾಟಕವು ಹೆಮ್ಮೆಯಿಂದ ಹೇಳಿಕೊಳ್ಳಲು ಹಲವು ಸಂಗತಿಗಳಿವೆ,
ಸಮಗ್ರ ಪಂಚಾಯತ್ ರಾಜ್ ಕಾಯ್ದೆಯನ್ನು ಜಾರಿಗೊಳಿಸುವಲ್ಲಿ ಮುಂಚೂಣಿಯಲ್ಲಿ ನಿಂತ ಕರ್ನಾಟಕವು ಅಧಿಕಾರ ವಿಕೇಂದ್ರೀಕರಣಕ್ಕೆ ಹೊಸ ಭಾಷ್ಯ ಬರೆಯಿತು, ಅಲ್ಲಿಂದ ಇಲ್ಲಿಯವರೆಗೆ ರಾಜ್ಯದ ಪಂಚಾಯತ್ ರಾಜ್ ವ್ಯವಸ್ಥೆ ಬಲಗೊಳ್ಳುತ್ತಲೇ ಇದೆ. ಕೆಲ ದಿನಗಳ ಹಿಂದೆ ಕರ್ನಾಟಕವು ಪಂಚಾಯತ್ ವಿಕೇಂದ್ರೀಕರಣದಲ್ಲಿ ಅಗ್ರ ಸ್ಥಾನದಲ್ಲಿ ಹೊರಹೊಮ್ಮಿರುವುದು ಇದಕ್ಕೆ ಉದಾಹರಣೆ.
ಪ್ರಸಕ್ತ ಸಾಲಿನಲ್ಲಿ ಅತಿ ಹೆಚ್ಚು ತೆರಿಗೆ ಸಂಗ್ರಹಿಸುವ ಮೂಲಕ ಸ್ಥಳೀಯ ಸರ್ಕಾರಗಳು ಆರ್ಥಿಕವಾಗಿಯೂ ಬಲಿಷ್ಠಗೊಳ್ಳುವತ್ತ ದಾಪುಗಾಲು ಇಡುತ್ತಿವೆ, ಯೋಜನೆಗಳ ಅನುಷ್ಠಾನದಲ್ಲಿಯೂ ಪಂಚಾಯಿತಿಗಳು ಮುಂಚೂಣಿಯಲ್ಲಿವೆ. ಇದಲ್ಲದೆ, ಪ್ರಗತಿ ಪಥ, ಹಸಿರು ಪಥ, ರೈತ ಪಥ ಎಂಬ ಮಹತ್ವದ ಯೋಜನೆಗಳು ಗ್ರಾಮೀಣ ಕರ್ನಾಟಕದ ಚಿತ್ರಣವನ್ನೇ ಬದಲಿಸಲಿವೆ. ಅರಿವು ಕೇಂದ್ರಗಳು, ಕೂಸಿನ ಮನೆಗಳು ಗ್ರಾಮೀಣಾಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿವೆ.
ಗ್ರಾಮ ಸಭೆಗಳೇ ಗ್ರಾಮದ ಸಂಸತ್ತು, ಗ್ರಾಮ ಪಂಚಾಯಿತಿಗಳೇ ಗ್ರಾಮ ಸರ್ಕಾರಗಳು, ಈ ಗ್ರಾಮ ಸರ್ಕಾರಗಳ ಧ್ವನಿಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸ್ಪಷ್ಟ ನಿರ್ದೇಶನಗಳೊಂದಿಗೆ ಗ್ರಾಮ ಸಭೆಗಳನ್ನು ನಡೆಸಲು ಸೂಚನೆ ನೀಡಲಾಗಿತ್ತು, ಅಂತೆಯೇ ರಾಜ್ಯಾದ್ಯಂತ ಯಶಸ್ವಿಯಾಗಿ ಗ್ರಾಮಸಭೆಗಳು ಜರುಗಿವೆ, ಮಕ್ಕಳ ಗ್ರಾಮ ಸಭೆ, ಮಹಿಳೆಯರ ಗ್ರಾಮಸಭೆಗಳು ವಿಶೇಷವಾಗಿ ಜರುಗಿದವು.
ಈ ಪಂಚಾಯತ್ ರಾಜ್ ವ್ಯವಸ್ಥೆ ಗ್ರಾಮೀಣ ಬದುಕನ್ನು ಹಸನಾಗಿಸುವುದರ ಜೊತೆಗೆ ಉತ್ತಮ ನಾಯಕರನ್ನೂ ತಯಾರು ಮಾಡುವ ವೇದಿಕೆಯಾಗಿದೆ, ಹಲವು ರಾಷ್ಟ್ರ, ರಾಜ್ಯ ಮಟ್ಟದ ನಾಯಕರು ತಯಾರಾಗಿದ್ದು ಈ ಪಂಚಾಯತ್ ರಾಜ್ ವ್ಯವಸ್ಥೆಯಿಂದಲೇ.
ಕರ್ನಾಟಕದ ಮಟ್ಟಿಗೆ ಪಂಚಾಯತ್ ರಾಜ್ ದಿನಾಚರಣೆಯನ್ನು ಸಂಭ್ರಮಿಸಲು ಅನೇಕ ಸಾಧನೆಗಳಿವೆ. ಮುಂದಿನ ದಿನಗಳಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಗೆ ಮತ್ತಷ್ಟು ಬಲ ತುಂಬಲು ನಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮುಂದುವರಿಸಲಿದೆ.
“ಸ್ಥಳೀಯ ಸರ್ಕಾರ – ಏಳಿಗೆಗೆ ಸಹಕಾರ”
