ಬೆಂಗಳೂರು.26.ಏಪ್ರಿಲ್.25:- ದಲಿತರು ತಿರುಗಿಬಿದ್ದರೆ ಯಾರೂ ತಡೆಯಲು ಸಾಧ್ಯವಿಲ್ಲ. ನಾನಾ ಕಾರಣಗಳಿಗೆ ಅವರು ಸುಮ್ಮನಿದ್ದಾರೆ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ವಿರುದ್ಧ ಮಾತನಾಡುವುದನ್ನು ಸಹಿಸಲು ಸಾಧ್ಯವಿಲ್ಲ ಅಂಬೇಡ್ಕರ್ ಬಗ್ಗೆ ಹಗುರವಾದ ಮಾತುಗಳನ್ನು ಆಡುವುದನ್ನು ನಿಲ್ಲಿಸಿ. ದಲಿತರು ತಿರುಗಿ ಬಿದ್ದರೆ ತಡೆಯುವುದು ಕಷ್ಟ’ ಎಂದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಆನಂದ ಸೋಷಿಯಲ್ ಆ್ಯಂಡ್ ಎಜುಕೇಶನಲ್ ಟ್ರಸ್ಟ್, ಡಾ.ಬಿ.ಆರ್.ಅಂಬೇಡ್ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಪ್ರತಿಮೆಯನ್ನು ಅನಾವರಣಗೊಳಿಸಿ ಮತ್ತು ಒಳರೋಗಿಗಳ ಕಟ್ಟಡ ಮತ್ತು ಮಹಿಳಾ ವಸತಿನಿಲಯವನ್ನು ಉದ್ಘಾಟಿಸಿ ಅವರು ಶನಿವಾರ ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಮಾಡಿರುವ ಕೆಲಸವನ್ನು ಇನ್ನೂ ಕೆಲವರಿಗೆ ಮೆಚ್ಚಿಕೊಳ್ಳಲು ಆಗುತ್ತಿಲ್ಲ. ಅಂಬೇಡ್ಕರ್ ಒಬ್ಬರೇ ಸಂವಿಧಾನ ಮಾಡಿರೋದಾ ಎಂಬ ಧಾಟಿಯಲ್ಲಿ ಮಾತನಾಡುತ್ತಿದ್ದಾರೆ. ದಲಿತರು ತಿರುಗಿ ಬಿದ್ದರೆ ತಡೆಯುವುದು ಕಷ್ಟ. ಇನ್ನು ಮುಂದೆ ಆ ರೀತಿಯ ಮಾತುಗಳನ್ನು ಯಾರೂ ಆಡಬಾರದು’ ಎಂದರು.
‘ಸಂವಿಧಾನ ಕರಡು ರಚನಾ ಸಮಿತಿಯಲ್ಲಿ ಅಂಬೇಡ್ಕರ್ ಒಬ್ಬರೇ ಇದ್ದಿದ್ದಲ್ಲ, ನಮ್ಮ ಜನರೂ ಇದ್ದರು ಎಂದೆಲ್ಲ ಮಾತನಾಡಿದ್ದಾರೆ. ಸಂವಿಧಾನ ಜಾರಿಯಾಗುವ ತನಕ ಪ್ರತಿ ಹಂತದಲ್ಲೂ ಅಂಬೇಡ್ಕರ್ ಕೊಡುಗೆ ಅಪಾರವಾಗಿತ್ತು. ಪ್ರತಿ ಆರ್ಟಿಕಲ್ ರಚಿಸಲು, ಮಂಡಿಸಲು ಗಾಢ ಅಧ್ಯಯನ ನಡೆಸಿದ್ದರು’ ಎಂದರು.
‘ಕರಡು ರಚನೆಯಲ್ಲಿ ಉಳಿದವರ ಪಾತ್ರ ಏನು ಎಂಬುದು ಸಂವಿಧಾನ ಜಾರಿಗಿಂತ ಹಿಂದಿನ ಸಭೆಯ ಭಾಷಣಗಳನ್ನು ಓದಿ ತಿಳಿದುಕೊಳ್ಳಲಿ. ದಲಿತರು ನಾನಾ ಕಾರಣಗಳಿಂದ ಹಿಂದೆ ಉಳಿದಿರಬಹುದು. ಮಾತನಾಡದೇ ಇದ್ದಿರಬಹುದು. ಇನ್ನು ಸುಮ್ಮನಿರುವುದಿಲ್ಲ. ಕೇವಲವಾಗಿ ಮಾತನಾಡುವವರು ಇದನ್ನು ಗಮನಿಸಬೇಕು’ ಎಂದು ಹೇಳಿದರು.
ಕರ್ನಾಟಕ ಪ್ರಗತಿ ಪರ ರಾಜ್ಯ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ ಎಂದು ಶ್ಲಾಘಿಸಿದರು.
ಸಚಿವರಾದ ದಿನೇಶ್ ಗುಂಡೂರಾವ್, ಶರಣ ಪ್ರಕಾಶ ಪಾಟೀಲ, ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕರಾದ ಎ.ಸಿ. ಶ್ರೀನಿವಾಸ್, ಎ.ಆರ್. ಕೃಷ್ಣಮೂರ್ತಿ ಉಪಸ್ಥಿತರಿದ್ದರು.