ಹೊಸ ದೆಹಲಿ.26.ಏಪ್ರಿಲ್.25:- ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ, ಭಾರತವು ಪಾಕಿಸ್ತಾನದ ವಿರುದ್ಧ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ. ಇನ್ನೂ ಈ ಎರಡೂ ದೇಶಗಳ ಮಧ್ಯೆ ಇದೇ ರೀತಿಯ ಕಾಳಗ ಮುಂದುವರೆದರೆ ವ್ಯಾಪಾರ ಸಂಬಂಧ ಕಡಿತಗೊಳ್ಳುವ ಸಾಧ್ಯತೆ ಇದೆ.
ಹಾಗೇನಾದರೂ ಆದರೆ ಕಲ್ಲು ಉಪ್ಪು, ಒಣ ಹಣ್ಣುಗಳು (dry fruits) ಮತ್ತು ಆಪ್ಟಿಕಲ್ ಲೆನ್ಸ್ಗಳಂತಹ ವಸ್ತುಗಳು ಭಾರತದಲ್ಲಿ ಸದ್ಯಕ್ಕೆ ದುಬಾರಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಈಗಾಗಲೇ ಎರಡೂ ದೇಶಗಳ ನಡುವಿನ ಪ್ರಮುಖ ವ್ಯಾಪಾರ ಮಾರ್ಗಗಳಾದ ಅಟ್ಟಾರಿ ಮತ್ತು ವಾಘಾ ಗಡಿಗಳನ್ನ ಮುಚ್ಚಲಾಗಿದೆ. ಪಾಕಿಸ್ತಾನದೊಂದಿಗಿನ ವ್ಯಾಪಾರ ಸಂಪೂರ್ಣವಾಗಿ ನಿಂತುಹೋದರೆ ಭಾರತದಲ್ಲಿ ಕೆಲವು ವಸ್ತುಗಳು ದುಬಾರಿಯಾಗುವ ಸಾಧ್ಯತೆ ಇದೆ. ಹಾಗಾದ್ರೆ ಆ ಯಾವ್ಯಾವ ವಸ್ತುಗಳು ಭಾರತದಲ್ಲಿ ದುಬಾರಿಯಾಗಲಿವೆ ಎಂಬುದನ್ನು ತಿಳಿಯೋಣ.
ಆಪ್ಟಿಕಲ್ ಲೆನ್ಸ್ಗಳು
ಇವುಗಳನ್ನು ಕಣ್ಣಿಗೆ ಧರಿಸುವ ಕನ್ನಡಕಗಳಲ್ಲಿ ಬಳಸಲಾಗುತ್ತದೆ. ಭಾರತವು ಅವುಗಳಲ್ಲಿ ಕೆಲ ಲೆನ್ಸ್ಗಳನ್ನು ಪಾಕಿಸ್ತಾನದಿಂದ ಆಮದು ಮಾಡಿಕೊಳ್ಳುತ್ತದೆ. ವ್ಯಾಪಾರ ಕಡಿತಗೊಂಡರೆ ಅವುಗಳ ಬೆಲೆಗಳು ಸ್ವಲ್ಪ ಸಮಯದವರೆಗೆ ಹೆಚ್ಚಾಗಬಹುದು.
ಕಲ್ಲು ಉಪ್ಪು
ಭಾರತವು ಪಾಕಿಸ್ತಾನದಿಂದ ಮಾತ್ರ ಕಲ್ಲು ಉಪ್ಪನ್ನು ಖರೀದಿಸುತ್ತದೆ. ಈ ಉಪ್ಪನ್ನು ಹೆಚ್ಚಾಗಿ ಉಪವಾಸ ಮತ್ತು ಧಾರ್ಮಿಕ ಹಬ್ಬಗಳ ಸಮಯದಲ್ಲಿ ಬಳಸಲಾಗುತ್ತದೆ. ಹಾಗಾಗಿ ಪಾಕಿಸ್ತಾನದೊಂದಿಗಿನ ವ್ಯಾಪಾರ ನಿಂತರೆ, ಈ ಉಪ್ಪು ಭಾರತದಲ್ಲಿ ದುಬಾರಿಯಾಗಬಹುದು.
ಒಣ ಹಣ್ಣುಗಳು (Dry fruits)
ಭಾರತವು ಪಾಕಿಸ್ತಾನದಿಂದ ಬಹಳಷ್ಟು ಒಣ ಹಣ್ಣುಗಳನ್ನು ಆಮದು ಮಾಡಿಕೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ ವ್ಯಾಪಾರ ನಿಂತು ಹೋದರೆ ಬಾದಾಮಿ, ಪಿಸ್ತಾ ಮತ್ತು ಏಪ್ರಿಕಾಟ್ಗಳಂತಹ ಒಣ ಹಣ್ಣುಗಳ ಬೆಲೆಯಲ್ಲಿ ದುಬಾರಿಯಾಗುವ ಸಾಧ್ಯತೆ ಇದೆ. ಆದರೆ ಭಾರತವು ಈ ಒಣ ಹಣ್ಣುಗಳನ್ನು ಬೇರೆ ದೇಶಗಳಿಂದಲೂ ಆಮದು ಮಾಡಿಕೊಳ್ಳುತ್ತದೆ. ಹಾಗಾಗಿ ಭಾರತದ ಮೇಲೆ ಇದರ ಪರಿಣಾಮ ಕಡಿಮೆ ಬೀರಬಹುದು ಎಂದೂ ಸಹ ಹೇಳಲಾಗಿದೆ.
ಇತರ ಆಮದು ವಸ್ತುಗಳು
ಭಾರತವು ಪಾಕಿಸ್ತಾನದಿಂದ ಸಿಮೆಂಟ್, ಕಲ್ಲುಗಳು, ಸುಣ್ಣ, ಹತ್ತಿ, ಉಕ್ಕು, ಸಾವಯವ ರಾಸಾಯನಿಕಗಳು ಮತ್ತು ಚರ್ಮದ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತದೆ.
ಸಂಕಷ್ಟದ ಸುಳಿಯಲ್ಲಿ ಪಾಕಿಸ್ತಾನ
ಏನಾದರೂ ಎರಡೂ ದೇಶಗಳ ನಡುವೆ ವ್ಯಾಪಾರ ಸ್ಥಗಿತಗೊಂಡರೆ ಭಾರತಕ್ಕಿಂತ ಪಾಕಿಸ್ತಾನಕ್ಕೆ ಹೆಚ್ಚು ಹಾನಿಯಾಗುತ್ತದೆ.
ಪಾಕಿಸ್ತಾನ ಈಗಾಗಲೇ ದುರ್ಬಲ ಆರ್ಥಿಕತೆಯನ್ನು ಹೊಂದಿದೆ. ಔಷಧಿಗಳು, ಸಾವಯವ ರಾಸಾಯನಿಕಗಳು, ಪ್ಲಾಸ್ಟಿಕ್ ಉತ್ಪನ್ನಗಳು, ಹತ್ತಿ, ಹಣ್ಣುಗಳು, ತರಕಾರಿಗಳು, ಮಸಾಲೆಗಳು, ಸಕ್ಕರೆ, ಎಣ್ಣೆಕಾಳುಗಳು, ಡೈರಿ ವಸ್ತುಗಳು, ಚಹಾ, ಕಾಫಿ, ಮತ್ತು ಪಶು ಆಹಾರದಂತಹ ಇನ್ನೂ ಕೆಲವು ವಸ್ತುಗಳನ್ನು ಭಾರತ ಪಾಕಿಸ್ತಾನಕ್ಕೆ ರಫ್ತು ಮಾಡುತ್ತದೆ.
ಒಂದು ವೇಳೆ ಭಾರತ ಈ ರಫ್ತನ್ನು ನಿಲ್ಲಿಸಿದರೆ ಪಾಕಿಸ್ತಾನ ಸಂಕಷ್ಟದ ಸುಳಿಯಲ್ಲಿ ಸಿಲುಕುವುದು ಪಕ್ಕಾ.
(ಏಜೆನ್ಸೀಸ್)