10/06/2025 4:08 AM

Translate Language

Home » ಲೈವ್ ನ್ಯೂಸ್ » ವಿಶ್ವ ಮಹಾಮಾನವ್, ಭಾರತ ರತ್ನ, ಸಂವಿಧಾನಶಿಲ್ಪಿ ಡಾ| ಅಂಬೇಡ್ಕರ್‌ ಪುಸ್ತಕ ಪ್ರೇಮ

ವಿಶ್ವ ಮಹಾಮಾನವ್, ಭಾರತ ರತ್ನ, ಸಂವಿಧಾನಶಿಲ್ಪಿ ಡಾ| ಅಂಬೇಡ್ಕರ್‌ ಪುಸ್ತಕ ಪ್ರೇಮ

Facebook
X
WhatsApp
Telegram

ಭಾರತದ ಸಂವಿಧಾನ ರಚನಾ ಸಮಯ. ಈ ಮಹತ್ವದ ಕಾರ್ಯದಲ್ಲಿ ಅಂಬೇಡ್ಕರ್‌ ತಮ್ಮನ್ನು ತೊಡಗಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಅಂಬೇಡ್ಕರ್‌ ಅವರು “ನಾನು ನನ್ನ ಕರ್ತವ್ಯವನ್ನು ನಿರ್ವಹಿಸುತ್ತಾ ಈ ಮಣ್ಣಿನ ಋಣವನ್ನು ತೀರಿಸುತ್ತಿದ್ದೇನೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳು ತ್ತಿದ್ದರೆಂದು ಡಾ| ಸವಿತಾ ಭೀಮರಾವ್‌ ಅಂಬೇಡ್ಕರ್‌ ತಮ್ಮ ಆತ್ಮಕಥನದಲ್ಲಿ ನೆನಪಿಸಿಕೊಂಡಿದ್ದಾರೆ.

ಪ್ರತಿದಿನ 16-18 ಗಂಟೆಗಳಷ್ಟು ಕಾಲ ಸಂವಿಧಾನ ರಚನಾ ಸಂಬಂಧ ಅಧ್ಯಯನ ಮತ್ತು ಕರ್ತವ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು.

ದೇಶದ ಅತ್ಯಂತ ಶ್ರೀಮಂತ ಖಾಸಗಿ ಗ್ರಂಥಾಲಯ:
ಡಾ| ಅಂಬೇಡ್ಕರ್‌ ಅವರು 1934ರಲ್ಲಿ ಮುಂಬಯಿಯ ದಾದರ್‌ನಲ್ಲಿ ನೂತನವಾಗಿ ಮನೆಯೊಂದನ್ನು ಕಟ್ಟಿಸಿದರು. ಅದಕ್ಕೆ ಅವರೇ ಇಟ್ಟ ಹೆಸರು ರಾಜಗೃಹ. ಇದು ಬೌದ್ಧ ರಾಜ ಬಿಂಬಿಸಾರನ ರಾಜಧಾನಿಯ ಹೆಸರು.

ಈ ಮನೆಯ ಒಂದು ವೈಶಿಷ್ಟ್ಯ ಅವರ ಆಸಕ್ತಿಯ ಪುಸ್ತಕಗಳ ಸಂಗ್ರಹದ ಗ್ರಂಥಾಲಯ. ಡಾ| ಎಚ್‌.ಎಸ್‌. ಅನುಪಮಾ ಅವರು ಡಾ| ಅಂಬೇಡ್ಕರ್‌ ಅವರ ಬದುಕು ಹಾಗೂ ಸಾಧನೆಯ ಕುರಿತು ಬರೆದ ಕೃತಿಯಲ್ಲಿ ಅವರ ಗ್ರಂಥಾಲಯವನ್ನು ದೇಶದ ಅತ್ಯಂತ ಶ್ರೀಮಂತ ಖಾಸಗಿ ಗ್ರಂಥಾಲಯ ಎಂದು ವರ್ಣಿ ಸುತ್ತಾರೆ.

1938ರಲ್ಲಿ ಅಮೆರಿಕದ ಲೇಖಕ ಜಾನ್‌ ಗುಂಥರ್‌ ರಾಜಗೃಹಕ್ಕೆ ಭೇಟಿ ನೀಡಿ ಅಲ್ಲಿನ ಪುಸ್ತಕಗಳ ಸಂಗ್ರಹ ವನ್ನು ಕಂಡು ಬೆರಗಾಗಿದ್ದರು. ಮುಂಬಯಿಯ ಥ್ಯಾಕರ್ಸ್‌ ಆಯಂಡ್‌ ಕಂಪೆನಿ ಲಿಮಿಟೆಡ್‌ ಅವರ ಪುಸ್ತಕಗಳ ಪ್ರಕಾಶಕರು. ಅಲ್ಲಿರುವ ಪುಸ್ತಕದಂಗಡಿಗೆ ಅಂಬೇಡ್ಕರ್‌ ಆಗಾಗ ಭೇಟಿ ನೀಡುತ್ತಿದ್ದರು.

ಅಂಬೇಡ್ಕರ್‌ ಬರುತ್ತಿರುವ ವಿಚಾರ ತಿಳಿಯುತ್ತಲೇ ಅವರಿಗಾಗಿ ಒಂದು ಆರಾಮ ಕುರ್ಚಿಯನ್ನು ವ್ಯವಸ್ಥೆ ಮಾಡುತ್ತಿದ್ದರು. ಅದರ ಮುಂದೆ ಒಂದು ಮೇಜು. ಅದರ ಮೇಲೆ ಹೊಸಪುಸ್ತಕಗಳು. ಅಂಬೇಡ್ಕರ್‌ ಅಂಗಡಿಗೆ ಬಂದು ಕುಳಿತು ಹೊಸಪುಸ್ತಕಗಳತ್ತ ಗಮನ ಹರಿಸುತ್ತಿದ್ದರು. ತನಗೆ ಇಷ್ಟವಾದ ಪುಸ್ತಕಗಳನ್ನು ಕೊಂಡುಕೊಳ್ಳು ತ್ತಿದ್ದರು.

ಅಂಬೇಡ್ಕರ್‌ ದಿಲ್ಲಿಯಲ್ಲಿ ಸಚಿವರಾಗಿದ್ದ ಸಮಯ. ದೇವಿ ದಯಾಳ ಅವರ ಗ್ರಂಥಾಲಯದ ಸಹಾಯಕ. ಅಲ್ಲಿನ ಗ್ರಂಥಗಳ ಸಂಗ್ರಹದ ಕುರಿತು ದಯಾಳರು ನೀಡುವ ವಿವರಣೆಯನ್ನು ಡಾ| ಎಚ್‌.ಎಸ್‌. ಅನುಪಮಾ ತಮ್ಮ ಕೃತಿಯಲ್ಲಿ ಉಲ್ಲೇಖಿಸುತ್ತಾರೆ. ಅಂಬೇಡ್ಕರ್‌ ಮಲಗುವ ಕೋಣೆಯ ಅಳತೆ 12 ಚದರ ಗಜ. ಅದಕ್ಕೆ ನಾಲ್ಕು ಬಾಗಿಲುಗಳಿದ್ದವು. ಒಂದನ್ನು ಬಿಟ್ಟು ಉಳಿದ ಮೂರು ಬಾಗಿಲುಗಳನ್ನು ಮುಚ್ಚಿ ಆ ಸ್ಥಳದಲ್ಲಿ ಪುಸ್ತಕಗಳಿಂದ ತುಂಬಿದ ಕಪಾಟುಗಳನ್ನು ಇಡ ಲಾಗಿತ್ತು. ಅಂಬೇಡ್ಕರ್‌ ಅವರ ಆಪ್ತ, ಕೃಷಿವಿಜ್ಞಾನಿ ನಾಮದೇವ ನಿಮಾಡೆ ಒಂದು ಕಡೆ ನೆನಪಿಸಿಕೊಳ್ಳುವಂತೆ ಅಂಬೇಡ್ಕರ್‌ ಅವರ ಬಳಿ ಸುಮಾರು ಐದು ಲಕ್ಷ ರೂ. ಮೌಲ್ಯದ ಪುಸ್ತಕಗಳಿದ್ದುವಂತೆ.


ಅಂಬೇಡ್ಕರ್‌ ಅವರ ಪುಸ್ತಕ ಪ್ರೇಮ ಅನೇಕರಿಗೆ ಅಚ್ಚರಿ ಮೂಡಿಸಿತ್ತು. ಹಲವರ ಕುತೂಹಲಕ್ಕೂ ಕಾರಣವಾಗಿತ್ತು. ಪುಸ್ತಕಪ್ರಿಯರಿಗೆ ಅವರೊಂದು ಕಿವಿಮಾತು ಹೇಳುತ್ತಿದ್ದರು. ನಿಮ್ಮ ದುಡಿಮೆಯ ಕನಿಷ್ಠ ಶೇ.10 ರಷ್ಟನ್ನಾದರೂ ಪುಸ್ತಕ ಖರೀದಿಗೆ ಉಪಯೋಗಿಸಿ. ಒಮ್ಮೆ ಥ್ಯಾಕರ್ಸ್‌ ಆಯಂಡ್‌ ಕಂಪೆನಿ ಲಿಮಿಟೆಡ್‌ನ‌ ಪ್ರಕಟನ ಸಲಹೆಗಾರರಾಗಿದ್ದ ಯು.ಆರ್‌. ರಾವ್‌ ಅವರು ಅಂಬೇಡ್ಕರರನ್ನು ತಾವು ಇಷ್ಟು ಪುಸ್ತಕಗಳನ್ನು ಹೇಗೆ ಓದುತ್ತೀರಿ? ಎಂದು ಕೇಳಿದಾಗ ಅಂಬೇಡ್ಕರ್‌ ಮೊದಲ ಪುಟದಿಂದ ಕೊನೆಯ ತನಕ ಓದುವುದೇ ನಿಜವಾದ ಓದು ಅಲ್ಲ. ನನ್ನ ಓದಿನ ವಿಧಾನವೇ ಬೇರೆ. ಕೆಲವು ಪುಸ್ತಕಗಳು ಮಾತ್ರ ಆಳವಾದ ಅಧ್ಯಯನಕ್ಕೆ ಅಗತ್ಯವಾದ ಅರ್ಹತೆಗಳನ್ನು ಹೊಂದಿರುತ್ತವೆ.

ಇನ್ನು ಕೆಲವು ಪುಸ್ತಕಗಳ ಮುನ್ನುಡಿ, ಬೆನ್ನುಡಿ, ಪರಿವಿಡಿಗಳನ್ನು ಮೊದಲು ಗಮನಿಸುತ್ತೇನೆ. ಅದರಲ್ಲಿರುವ ಅಧ್ಯಾಯಗಳಲ್ಲಿ ನಮ್ಮನ್ನು ಚಿಂತನೆಗೆ ಹಚ್ಚುವ ಹೊಸ ವಿಷಯಗಳಿವೆಯೇ? ಎಂಬುದನ್ನು ನೋಡಿಕೊಂಡು ಅಂಥ ಹೊಸ ವಿಚಾರಗಳಿದ್ದರೆ ಅವುಗಳನ್ನು ಆಸಕ್ತಿಯಿಂದ ಓದುತ್ತೇನೆ ಎಂದು ಉತ್ತರಿಸುತ್ತಿದ್ದರು. ಇಷ್ಟು ವಿಶಾಲವಾದ ಓದಿನ ನಡುವೆ ರಿಲಾಕ್ಸ್‌ () ಆಗುವುದು ಹೇಗೆ? ಇದು ಅಂಬೇಡ್ಕರ್‌ ಅವರ ಬಿಡುವಿಲ್ಲದ ಓದನ್ನು ಗಮನಿಸಿದ ಕೆಲವರಲ್ಲಿ ಮೂಡಿದ ಕುತೂಹಲ.

ಈ ಬಗ್ಗೆ ಅವರನ್ನು ಕೇಳಿದಾಗ ಒಂದು ವಿಷಯದಿಂದ ಸಂಪೂರ್ಣ ಬೇರೆಯಾದ ಇನ್ನೊಂದು ವಿಷಯದತ್ತ ಓದಿನ ದಿಕ್ಕನ್ನು ಬದಲಾಯಿಸುವುದೇ ಓದಿನ ನಡುವೆ ನಾನು ಕಂಡುಕೊಂಡ ರಿಲಾಕ್ಸ್‌ ಎನ್ನುತ್ತಿದ್ದರು. ಒಮ್ಮೆ ಐಸಿಎಸ್‌ ಅಧಿಕಾರಿ ಕರ್ತಾರ್‌ಸಿಂಗ್‌ ಇಷ್ಟು ವಿಶಾಲವಾದ ಓದನ್ನು ನೀವು ಹೇಗೆ ಅರಗಿಸಿ ಕೊಳ್ಳುತ್ತೀರಿ? ಎಂದು ಕೇಳಿದಾಗ ಯಾವುದು ಅಗತ್ಯವೋ ಅದನ್ನು ಮನಸ್ಸಿನಲ್ಲಿ ನೆನಪಿಟ್ಟು ಕೊಳ್ಳುವ ಕಲೆ ನನಗೆ ಕರಗತವಾಗಿದೆ.

ಅಗತ್ಯ ವಾದುದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಬೇಡದ ವಿಚಾರಗಳಿದ್ದರೆ ಬಿಟ್ಟು ಬಿಡುತ್ತೇನೆ. ಓದಿದ ವಿಚಾರಗಳನ್ನು ಮನಸ್ಸಿನಲ್ಲಿ ಹಿಡಿದಿಟ್ಟುಕೊಳ್ಳುವ ಮತ್ತು ಸಂದರ್ಭಕ್ಕೆ ಸರಿಯಾಗಿ ಅದನ್ನು ಉಲ್ಲೇಖಿಸುವ ಕಲೆ ಅವರಿಗೊಲಿದಿತ್ತು. ತಮ್ಮ ಗ್ರಂಥಾಲಯದಲ್ಲಿ ಯಾವ ಪುಸ್ತಕವು ಯಾವ ಕಪಾಟಿನಲ್ಲಿ ಇದೆ ಎಂಬ ಖಚಿತತೆ ಅವರಲ್ಲಿತ್ತು. ಅವರ ಗ್ರಂಥಾಲಯಕ್ಕೆ ಭೇಟಿ ನೀಡುವ ಪುಸ್ತಕಪ್ರೇಮಿಗಳಿಗೆ ಅವರದೊಂದು ಸೂಚನೆ ಇತ್ತು.

ಪುಸ್ತಕಗಳನ್ನು ಅಲ್ಲಿಯೇ ಓದಿ ಎಲ್ಲಿಂದ ತೆಗೆದರೋ ಅಲ್ಲೇ ಇಟ್ಟು ಹೋಗಬೇಕು. ಡಾ| ಅಂಬೇಡ್ಕರ್‌ ಉತ್ತಮ ಓದುಗರಷ್ಟೇ ಆಗಿರಲಿಲ್ಲ. ಉತ್ತಮ ಬರಹಗಾರರೂ ಆಗಿದ್ದರು. ಸ್ವಾತಂತ್ರ್ಯ , ಸಮಾನತೆ, ಭಾತೃತ್ವ ಹಾಗೂ ಸಾಮಾಜಿಕ ನ್ಯಾಯಗಳನ್ನೊಳಗೊಂಡ ಸಂವಿಧಾನವನ್ನು ದೇಶಕ್ಕೆ ನೀಡುವುದರ ಮೂಲಕ ಸಂವಿಧಾನಶಿಲ್ಪಿ ಎಂಬ ಗೌರವಕ್ಕೆ ಪಾತ್ರರಾದ ಅಂಬೇಡ್ಕರ್‌ ಅವರ ಬದುಕು ಹಾಗೂ ಸಾಧನೆ ಸದಾ ಸ್ಮರಣೀಯ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!