ಬೀದರ.18.ಮಾರ್ಚ.25:-ಹತ್ತು ಮತ್ತು ಹತ್ತಕ್ಕಿಂತ ಹೆಚ್ಚು ಜನರು ಕರ್ತವ್ಯ ನಿರ್ವಹಿಸುವ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಯಲು ಬೀದರ ಜಿಲ್ಲೆಯ ಎಲ್ಲ ಸರಕಾರಿ ಹಾಗೂ ಖಾಸಗಿ ಕಚೇರಿಗಳು ಇದೇ ಮಾರ್ಚ.25 ರೊಳಗಾಗಿ ಆಂತರಿಕ ದೂರು ನಿರ್ವಹಣಾ ಸಮಿತಿ ರಚಿಸಿ ವರದಿಯ ಪ್ರತಿಯನ್ನು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇವರಿಗೆ ಸಲ್ಲಿಸಬೇಕೆಂದು ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಗೆ ಆಂತರಿಕ ವಿಚಾರಣಾ ಸಮಿತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಜರುಗಿದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಾ, ಜಿಲ್ಲೆಯಲ್ಲಿ ಒಟ್ಟು 5221 ವಿವಿಧ ಇಲಾಖೆ/ಕ್ಷೇತ್ರಗಳ ಘಟಕಗಳಿವೆ. ಹತ್ತು ಮತ್ತು ಹತ್ತಕ್ಕಿಂತ ಹೆಚ್ಚು ಜನರು ಕೆಲಸ ಮಾಡುವ ಸ್ಥಳದಲ್ಲಿ ಕಡ್ಡಾಯವಾಗಿ ಸಮಿತಿ ರಚಿಸಿ ಇದೇ ಮಾರ್ಚ.25 ರೊಳಗಾಗಿ ವರದಿ ಸಲ್ಲಿಸಬೇಕು. ಇಲ್ಲವಾದಲ್ಲಿ ಸಂಬAಧಪಟ್ಟ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಮಟ್ಟದಲ್ಲಿ, ತಾಲ್ಲೂಕಾ ಮಟ್ಟದಲ್ಲಿ ಹಾಗೂ ಗ್ರಾಮ ಪಂಚಾಯತ ಮಟ್ಟದಲ್ಲಿಯೂ ಸಹ ಸಮಿತಿಗಳನ್ನು ರಚಿಸತಕ್ಕದ್ದು. ಈ ತನಕ ಜಿಲ್ಲಾ ಮಟ್ಟದಲ್ಲಿ 36 ಇಲಾಖೆಗಳು, ತಾಲ್ಲೂಕಾ ಮಟ್ಟದಲ್ಲಿ 57 ಹಾಗೂ ಗ್ರಾಮ ಪಂಚಾಯತ ಮಟ್ಟದಲ್ಲಿ 82 ಸಮಿತಿಗಳು ರಚನೆ ಆಗಿದ್ದು ಉಳಿದೆಲ್ಲ ಇಲಾಖೆಗಳು ತಕ್ಷಣವೇ ಸಮಿತಿ ರಚಿಸಿ ವರದಿ ಒಪ್ಪಿಸುವಂತೆ ಸೂಚಿಸಿದರು. ಮಾರ್ಚ.30 ರಂದು ಕೇಂದ್ರ ಸರಕಾರಕ್ಕೆ ವರದಿ ಕಳುಹಿಸುವ ಅಗತ್ಯವಿದೆಯೆಂದು ಶೀಲವಂತ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಶ್ರೀಧರ ಎಸ್.ಎಂ. ಮಾತನಾಡಿ, ಶಿಕ್ಷಣ, ಆರೋಗ್ಯ, ಕೈಗಾರಿಕೆ ಕ್ಷೇತ್ರಗಳಲ್ಲಿ ಹೆಚ್ಚಿನ ಘಟಕಗಳಿದ್ದು, ಸಂಬAಧಿಸಿದ ಅಧಿಕಾರಿಗಳು ಕಾರ್ಯೋನ್ಮುಖರಾಗುವಂತೆ ತಿಳಿಸಿದರು. 10 ಕ್ಕಿಂತ ಕಡಿಮೆ ಇರುವ ಘಟಕಗಳು ವರದಿ ಸಲ್ಲಿಸುವ ಅಗತ್ಯವಿಲ್ಲವೆಂದರು.
ಹಿರಿಯ ವಕೀಲರಾದ ಬಿ.ಎಸ್.ಪಾಟೀಲ ಅವರು ಲೈಂಗಿಕ ಕಿರುಕುಳ ಅಧಿನಿಯಮ 2013 ರ ಕುರಿತು ವಿವರಿಸಿದರು. ಈ ಅಧಿನಿಯಮ ಅನ್ವಯ 10 ಮತ್ತು 10 ಕ್ಕಿಂತ ಹೆಚ್ಚು ಜನರು ಕೆಲಸ ಮಾಡುವ ಖಾಸಗಿ, ಸರಕಾರಿ, ನಿಗಮ, ಮಂಡಳಿ ಸಾರ್ವಜನಿಕ ಉದ್ಯಮಗಳು, ಫ್ಯಾಕ್ಟರಿಗಳು ಎಲ್ಲ ಕಚೇರಿಗಳಲ್ಲಿ ಆಂತರಿಕ ದೂರು ಸಮಿತಿ ರಚಿಸತಕ್ಕದ್ದು, ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸ್ಥಳೀಯ ದೂರು ಸಮಿತಿ ರಚಿಸಲಾಗಿರುತ್ತದೆ ಎಂದರು.
ಆಂತರಿಕ ದೂರು ಸಮಿತಿಯಲ್ಲಿ ಕೆಲಸದ ಸ್ಥಳದ ಹಿರಿಯ ಶ್ರೇಣಿಯ ಉದ್ಯೋಗಸ್ಥ ಮಹಿಳೆಯು ಅಧ್ಯಕ್ಷರಾಗಿರುತ್ತಾರೆ. ಸಮಾಜ ಕಲ್ಯಾಣ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಕಾನೂನು ಜ್ಞಾನ ಹೊಂದಿರುವ ಇಬ್ಬರು ಸದಸ್ಯರು ಮತ್ತು ಮಹಿಳೆಯರ ಉನ್ನತಿಗೆ ಕಾಯನಿರ್ವಹಿಸುವ ಸಂಘ-ಸAಸ್ಥೆ ಸದಸ್ಯರಾಗಿರುತ್ತಾರೆಂದು ತಿಳಿಸಿದರು.
ಪ್ರತಿ 3 ವರ್ಷಗಳಿಗೊಮ್ಮೆ ಆಂತರಿಕ ದೂರು ಸಮಿತಿಯನ್ನು ಪುನರ್ ರಚಿಸಬೇಕೆಂದು ಪಾಟೀಲ ತಿಳಿಸಿದರು.
ಈ ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.