ಬೆಂಗಳೂರು.13.ಮಾರ್ಚ.25:- ರಾಜ್ಯದಲ್ಲಿ ಉನ್ನತ ಶಿಕ್ಷಣ ಇಲಾಖೆ ಅಧೀನದಲ್ಲಿ ಇರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಜೂರಾಗಿರುವ 412 ಮತ್ತು ಪ್ರಾಂಶುಪಾಲರ ಹುದ್ದೆಗಳು 412. ಪ್ರಾಂಶುಪಾಲರ ಸಂಪೂರ್ಣ ಹುದ್ದೆಗಳು ಖಾಲಿ ಇವೆ ಎಂದು ವಿಧಾನ ಸೌಧದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ವಿಜಯನಗರ ಕ್ಷೇತ್ರದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪ್ರಶ್ನೆ ಕೇಳಿ, ಪ್ರಾಂಶುಪಾಲ ಹುದ್ದೆಗಳ ಕೊರತೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಅರೆಕಾಲಿಕ ಮತ್ತು ಅತಿಥಿ ಉಪನ್ಯಾಸಕರುಗಳಿಂದ ಸರ್ಕಾರಿ ಕಾಲೇಜುಗಳನ್ನು ನಡೆಸಲಾಗುತ್ತಿದೆ. ಶಿಕ್ಷಣದ ಗುಣಮಟ್ಟ ತಗ್ಗುತ್ತಿದೆ. ಸರ್ಕಾರ ಮದರಸಾಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದು, ಔಪಚಾರಿಕ ಶಿಕ್ಷಣವನ್ನು ನಿರ್ಲಕ್ಷಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉತ್ತರ ನೀಡಿದ ಸಚಿವ ಎಂ.ಸಿ.ಸುಧಾಕರ್, ಉನ್ನತ ಶಿಕ್ಷಣ ಇಲಾಖೆಗೆ 440 ಸರ್ಕಾರಿ ಪದವಿ ಕಾಲೇಜುಗಳು ಬರುತ್ತವೆ. ಅವುಗಳಲ್ಲಿ 412 ಪ್ರಾಂಶುಪಾಲರ ಹುದ್ದೆಗಳು ಮಂಜೂರಾಗಿವೆ. ಅವು ಪೂರ್ತಿ ಖಾಲಿ ಉಳಿದಿವೆ ಎಂದರು.
2022ರಲ್ಲಿ 310 ಪ್ರಾಂಶುಪಾಲರ ಹುದ್ದೆಗಳಿಗೆ ಸ್ಪರ್ಧಾತಕ ಪರೀಕ್ಷೆ ನಡೆಸಿ ನಿಯಮಾನುಸಾರ ಅರ್ಹ ಅಭ್ಯರ್ಥಿಗಳ ಮೆರಿಟ್ ಪಟ್ಟಿಯನ್ನು ಸಲ್ಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸಲಾಗಿತ್ತು. ಆದರೆ ಕೆನೆಪದರ ಪದ್ಧತಿಯಲ್ಲಿನ ಗೊಂದಲದಿಂದಾಗಿ ಮತ್ತು ಕಂದಾಯ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯಿಂದ ದಾಖಲಾತಿಗಳನ್ನು ಒದಗಿಸುವ ಗೊಂದಲದಿಂದ ನೇಮಕಾತಿ ಪ್ರಕ್ರಿಯೆ ನೆನೆಗುದಿಯಲ್ಲಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಮಂಡಿಸಿದ ಬಜೆಟ್ನಲ್ಲಿ 2000 ಬೋಧಕರ ಹುದ್ದೆಗಳ ನೇಮಕಾತಿಗೆ ಅನುಮೋದನೆ ನೀಡಿದ್ದಾರೆ. ಅವುಗಳಿಗೆ ಶೀಘ್ರವೇ ನೇಮಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಉನ್ನತ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಬೋಧಕರನ್ನು ಬೇರೆಬೇರೆ ಹುದ್ದೆಗಳಿಗೆ ನಿಯೋಜನೆ ಮೇಲೆ ಕಳುಹಿಸಲು ನನ್ನ ಮೇಲೆ ಭಾರೀ ಒತ್ತಡವಿದೆ. ಅದಕ್ಕೆ ನಾನು ಅವಕಾಶ ನೀಡುತ್ತಿಲ್ಲ. ಇದಕ್ಕಾಗಿ ಬಹಳಷ್ಟು ಮಂದಿ ಶಾಸಕರು, ಸಂಸದರು ನನ್ನ ವಿರುದ್ಧ ಅಸಮಾಧಾನಗೊಂಡಿದ್ದಾರೆ ಎಂದು ಸಚಿವರು ತಿಳಿಸಿದರು.
ಶಾಸಕ ಜಿ.ಟಿ.ದೇವೇಗೌಡ, ತಾವು ಸಚಿವರಿದ್ದಾಗ 396 ಹುದ್ದೆಗಳಿಗೆ ಪ್ರಾಂಶುಪಾಲರನ್ನು ನೇಮಿಸಲು ಅನುಮೋದನೆ ನೀಡಲಾಗಿತ್ತು. ಅವುಗಳನ್ನು ಶೀಘ್ರವೇ ಆಯ್ಕೆ ಮಾಡಿ ಎಂದು ತಿಳಿಸಿದರು.
1292 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಒಂದೇ ದಿನ ಕೌನ್ಸಿಲಿಂಗ್ ನಡೆಸಿ ನೇಮಕಾತಿ ಮಾಡಿಕೊಳ್ಳಲಾಗಿದೆ. ರಾಜ್ಯಸರ್ಕಾರ ಸರ್ಕಾರಿ ಕಾಲೇಜುಗಳಲ್ಲಿ ಸಿಬ್ಬಂದಿಗಳ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಿದೆ ಎಂದರು.