ಬೆಂಗಳೂರು.12.ಮಾರ್ಚ.25:- ಇಂದು ವಿಧಾನ ಸೌಧದಲ್ಲಿ ಪರಿಶಿಷ್ಟ ಜಾತಿ ಒಳಮೀಸಲಾತಿ ತೀರ್ಮಾನ ಆಗುವವರೆಗೆ ನೇರ ನೇಮಕಾತಿ ಅಧಿಸೂಚನೆ ಹೊರಡಿಸಬಾರದು ಎಂಬುದು ಬ್ಯಾಕ್ಲಾಗ್ ಹುದ್ದೆಗಳಿಗೆ ಅನ್ವಯ ಆಗುವುದಿಲ್ಲ. ಈ ಸಂಬಂಧ ವಿನಾಯತಿ ಕೋರಲು ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳುತ್ತೇವೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ಕಾಂಗ್ರೆಸ್ನ ಅಬ್ಬಯ್ಯ ಪ್ರಸಾದ್ ಪ್ರಶ್ನೆಗೆ ಉತ್ತರಿಸಿದ ಅವರು, ವಿವಿಧ ಇಲಾಖೆ, ನಿಗಮ, ಮಂಡಳಿ, ವಿಶ್ವವಿದ್ಯಾಲಯ, ಸಹಕಾರಿ ಸಂಸ್ಥೆಗಳು, ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ 2001ರ ನಂತರ ಪರಿಶಿಷ್ಟ ಜಾತಿಯ 16,413, ಪರಿಶಿಷ್ಟ ಪಂಗಡದ 4,963 ಸೇರಿ ಒಟ್ಟು 21,376 ಹುದ್ದೆಗಳನ್ನು ಬ್ಯಾಕ್ಲಾಗ್ ಎಂದು ಗುರುತಿಸಲಾಗಿದೆ. ಈ ಪೈಕಿ 15,286 ಎಸ್ಸಿ ಮತ್ತು 4,379 ಎಸ್ಟಿ ಸೇರಿ ಒಟ್ಟು 19,665 ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಬಿಟ್ಟು ಹೋದ ಹುದ್ದೆಗಳನ್ನು ಹುಡುಕಲು 5 ತಂಡ ಸಹ ರಚಿಸಿದ್ದೇವೆ ಎಂದರು.
ಕೆಲವು ಇಲಾಖೆ ಅಥವಾ ಸಂಸ್ಥೆಗಳು ಆರ್ಥಿಕ ಮುಗ್ಗಟ್ಟಿನಿಂದ ಮತ್ತು ಮುಚ್ಚಿರುವ ಕಾರಣ ಒಟ್ಟು 795 ಹುದ್ದೆಗಳನ್ನು ಭರ್ತಿ ಮಾಡಲು ವಿನಾಯಿತಿ ಕೋರಿವೆ. ಉಳಿದ 916 ಹುದ್ದೆಗಳನ್ನು ಭರ್ತಿ ಮಾಡಲು ಬಾಕಿಯಿದೆ. ಈ ಪೈಕಿ ಉನ್ನತ ಶಿಕ್ಷಣ ಇಲಾಖೆಯಲ್ಲಿ 530, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ 185 ಮತ್ತು ಜಲಸಂಪನ್ಮೂಲ ಇಲಾಖೆಯಲ್ಲಿ 112 ಹುದ್ದೆಗಳು ಸೇರಿ ಒಟ್ಟು 827 ಹುದ್ದೆಗಳಿವೆ.
ಉಳಿದ ಇಲಾಖೆಗಳಲ್ಲಿ 89 ಹುದ್ದೆಗಳಿವೆ. ಉನ್ನತ ಶಿಕ್ಷಣ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗಳು ಮತ್ತು ಅವುಗಳ ಅಧೀನದಲ್ಲಿರುವ ಅನುದಾನಿತ ಶಾಲಾ ಕಾಲೇಜುಗಳಲ್ಲಿ ನಿಗದಿತ ಕಾರ್ಯಭಾರವಿಲ್ಲದಿರುವುದು ಹಾಗೂ ಕೆಲವು ಸಂಸ್ಥೆಗಳು ಮುಚ್ಚಿರುತ್ತವೆ ಎಂಬ ಕಾರಣಗಳಿಂದ ಭರ್ತಿ ಮಾಡಲು ವಿಳಂಬವಾಗುತ್ತಿದೆ.
ಜಲ ಸಂಪನ್ಮೂಲ ಇಲಾಖೆಯಲ್ಲಿ ಅಭ್ಯರ್ಥಿಗಳ ಶೈಕ್ಷಣಿಕ ದಾಖಲಾತಿ ಪ್ರಮಾಣ ಪತ್ರಗಳ ಸಿಂಧುತ್ವ ಮತ್ತು ಪೊಲೀಸ್ ವರದಿ ಪಡೆಯಲು ಕ್ರಮವಹಿಸಲಾಗುತ್ತಿದೆ. ಶೀಘ್ರದಲ್ಲಿಯೇ ಭರ್ತಿ ಮಾಡುವ ಪ್ರಕ್ರಿಯೆ ಮುಕ್ತಾಯವಾಗಲಿದೆ ಎಂದು ವಿವರಿಸಿದರು.