ಬೆಂಗಳೂರು.12.ಮಾರ್ಚ.25- ಇಂದು ವಿಧಾನ ಪರಿಷತ್ನಲ್ಲಿ ರಾಜ್ಯದ ಹಳೆ ವಿಶ್ವವಿದ್ಯಾಲಯಗಳ ಸ್ಥಿತಿಗತಿಯ ಬಗ್ಗೆ ಚರ್ಚೆ ನಡೆಸುವಾಗ ಮಂಗಳವಾರ ಪ್ರಕಟಿಸಿದ್ದ “ರಾಜ್ಯದ 32 ವಿಶ್ವವಿದ್ಯಾಲಯಗಳು ಮುಚ್ಚುವ ಸ್ಥಿತಿಯಲ್ಲಿ ವರದಿಯು ಪಕ್ಷಾತೀತವಾಗಿ ಉಲ್ಲೇಖಗೊಂಡಿತು.
ಕಾಂಗ್ರೆಸ್ನ ಸದಸ್ಯ ಐವನ್ ಡಿ’ಸೋಜಾ ಅವರು ಉದಯವಾಣಿ ವರದಿಯನ್ನು ಪ್ರದರ್ಶಿಸಿ, ಮಂಗಳೂರು ವಿಶ್ವಿದ್ಯಾನಿಲಯ ಸ್ಥಿತಿ ಚಿಂತಾಜನಕವಾಗಿದೆ. ಗ್ರಾಮ ಪಂಚಾಯತ್ನ ತೆರಿಗೆ ಕಟ್ಟಲು ಹಣ ಇಲ್ಲದಂತಾಗಿದೆ.
ಪಿಂಚಣಿಗೂ ಹಣವಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಇಂತಹ ಪರಿಸ್ಥಿತಿ ಇರಲಿಲ್ಲ. ವಿಶ್ವವಿದ್ಯಾಲಯಗಳ ಸ್ಥಿತಿಗತಿ ಉತ್ತಮ ಪಡಿಸಲು ಯೋಜನೆ ರೂಪಿಸಿ ಎಂದರು.
ಬಿಜೆಪಿಯ ಮುಖ್ಯ ಸಚೇತಕ ಎನ್. ರವಿಕುಮಾರ್ ಉದಯವಾಣಿ ವರದಿಯಲ್ಲಿನ ಅಂಕಿ ಅಂಶಗಳನ್ನು ಉಲ್ಲೇಖೀಸಿ, ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಶೇ.69 ಬೋಧಕೇತರ ಸಿಬಂದಿ, ಶೇ. 60 ಬೋಧಕ ಸಿಬಂದಿಯ ಕೊರತೆಯಿದೆ. ರಾಜ್ಯದ 32 ವಿ.ವಿ.ಗಳಲ್ಲಿಯೂ ಸಮಸ್ಯೆಯಿದೆ.
ಹಾಗಿದ್ದರೆ ಎಲ್ಲ ವಿ.ವಿ.ಗಳನ್ನು ಮುಚ್ಚುತ್ತೀರಾ ಎಂದು ಉನ್ನತ ಶಿಕ್ಷಣ ಸಚಿವರನ್ನು ಪ್ರಶ್ನಿಸಿದರು. ಸದಸ್ಯರಾದ ಭೋಜೇಗೌಡ, ಶಶೀಲ್ ನಮೋಶಿ, ಎಸ್.ವಿ. ಸಂಕನೂರು, ಹೇಮಲತಾ ನಾಯಕ್, ಡಾ. ಧನಂಜಯ್ ಸರ್ಜಿ ವಿಶ್ವವಿದ್ಯಾಲಯ ಮುಚ್ಚುವ ಪ್ರಸ್ತಾವನೆಯನ್ನು ವಿರೋಧಿಸಿದರು.