ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳಿಗೆ ಬಳಸಿರುವ ಎಸ್ಸಿಎಸ್ಪಿ/ಟಿಎಸ್ಪಿ ಹಣವನ್ನು ಕೂಡಲೇ ದಲಿತರ ಅಭಿವೃದ್ಧಿಗೆ ಹಿಂದಿರುಗಿಸಬೇಕು ಎಂದು ದಲಿತ ಸಂಘರ್ಷ ಸಮಿತಿಗಳ ಒಕ್ಕೂಟವು ಕರ್ನಾಟಕ ಸರ್ಕಾರವನ್ನು ಆಗ್ರಹಿಸಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ದಸಂಸ ಒಕ್ಕೂಟ, ಗ್ಯಾರಂಟಿಗೆ ಬಳಸಿರುವ ಹಣ ಹಿಂತಿರುಗಿಸುವ ಜತೆಗೆ,ಕಾಯ್ದೆಯ ‘7ಡಿ’ ಸೆಕ್ಷನ್ ರದ್ದುಪಡಿಸಿದಂತೆ ‘7ಸಿ’ಯನ್ನೂ ರದ್ದುಪಡಿಸಬೇಕು ಎಂಬ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದೆ.
ಸಂವಿಧಾನ ವಿಧಿ 46ರ ಆಶಯವನ್ನು ಪಾಲಿಸಬೇಕು” ಎಂದು ಒತ್ತಾಯಿಸಿರುವ ಒಕ್ಕೂಟ, “ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಬಾಕಿ ಉಳಿದಿರುವ 5 ಲಕ್ಷ ಅರ್ಜಿಗಳನ್ನು ಸೂಕ್ತ ನೆರವು ನೀಡಿ, ಕೂಡಲೇ ಇತ್ಯರ್ಥಗೊಳಿಸಬೇಕು ಎಂದು ಒತ್ತಾಯಿಸಿದೆ.
2013 ರಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವೇ ಜಾರಿಗೆ ತಂದ ಎಸ್ಸಿಎಸ್ಪಿ/ಟಿಎಸ್ಪಿ ಯೋಜನೆಯ ಕಾಯ್ದೆಯು ತನ್ನ ಪರಿಭಾಷೆಯಲ್ಲಿ ಎಸ್ಸಿಎಸ್ಪಿ/ಟಿಎಸ್ಪಿ ಎಂಬುದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಯಲ್ಲಿನ ಅಂತರವನ್ನು ತುಂಬಲು ಅನುಮೋದಿಸಿರುವ ಯೋಜನೆ ಎನ್ನುತ್ತದೆ. ಅದರಲ್ಲಿಯೇ ‘ಅಭಿವೃದ್ಧಿಯ ಅ೦ತರ’ ಎಂದರೆ, ಮಾನವ ಮತ್ತು ಆರ್ಥಿಕ ಅಭಿವೃದ್ಧಿಗೆ ಸಂಬಂಧಪಟ್ಟಂತೆ.
ನಿರ್ದಿಷ್ಟವಾಗಿ ಗೊತ್ತುಪಡಿಸಬಹುದಾದಂತೆ ರಾಜ್ಯ ಸರಾಸರಿಗೆ ಹೋಲಿಸಿದಾಗ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಸೂಚಕಗಳಲ್ಲಿರುವ ವ್ಯತ್ಯಾಸಗಳು ಎ೦ದು ವ್ಯಾಖ್ಯಾನಿಸುತ್ತದೆ” ಎಂದು ಒಕ್ಕೂಟ ವಿವರಿಸಿದೆ.
“ಸಾರಾಂಶದಲ್ಲಿ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರು (ದಲಿತರು) ಮತ್ತು ಇತರ ಸಮುದಾಯಗಳ ನಡುವಿನ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಯ ಅಂತರವನ್ನು ಕಡಿಮೆ ಮಾಡುವುದೇ ಈ ಯೋಜನೆಯ ಮೂಲ ಉದ್ದೇಶ.
2023-24ನೇ ಸಾಲಿನಿಂದಲೂ ಎಸ್ಸಿಎಸ್ಪಿ/ಟಿಎಸ್ಪಿ ಹಣದಲ್ಲಿ ಸುಮಾರು ₹25000 ಕೋಟಿಯನ್ನು ಗ್ಯಾರ೦ಟಿಗಳಿಗೂ, ₹15000 ಕೋಟಿಯನ್ನು ಅನ್ಯ ಉದ್ದೇಶಕ್ಕೂ ಬಳಸಿರುವುದು ಕಾಯ್ದೆಯನ್ನು ಉಲ್ಲಂಘಫಿಸಿದಂತೆ ಆಗುತ್ತದೆ” ಎಂದು ಆರೋಪಿಸಿದೆ.
ಅಷ್ಟೇ ಅಲ್ಲ, ಕಳೆದ ಬಿಜೆಪಿ ಸರ್ಕಾರ ಮಾಡಿದ ಕೆಲಸವನ್ನೇ ಕಾಂಗ್ರೆಸ್ ಮಾಡಿದಂತಾಗಿದೆ. ಅದಷ್ಟೇ ಅಲ್ಲದೆ ಸರ್ಕಾರದ ಸಮಾಜ ಕಲ್ಮಾಣ ಸಚಿವರೂ ಸೇರಿದಂತೆ ಈ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಿರುವುದು ಶೋಚನೀಯ.
ದಲಿತರ ಒಗ್ಗಟ್ಟಿನ ಓಟುಗಳಿ೦ದ ಸರ್ಕಾರ ರಚಿಸಿದ ಕಾಂಗ್ರೆಸ್, ಈಗ ದಲಿತರ ಅಭಿವೃದ್ಧಿಗೆ ಮೀಸಲಿರಿಸಿದ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸುತ್ತಿರುವುದು ಸಮುದಾಯದಲ್ಲಿ ಅಸಮಾಧಾನವನ್ನು ಉಂಟು ಮಾಡಿದೆ ಎಂದು ಒಕ್ಕೂಟದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಗ್ಯಾರಂಟಿ ಯೋಜನೆಗಳು ಉತ್ತಮ ಯೋಜನೆಗಳೇ; ಆದರೆ ಅವುಗಳ ಉದ್ದೇಶವೇ ಬೇರೆ, ಎಸ್ಸಿಎಸ್ಪಿ/ಟಿಎಸ್ಪಿ ಕಾಯ್ದೆಯ ಉದ್ದೇಶವೇ ಬೇರೆ. ಕರ್ನಾಟಕ ಮಾನವ ಅಭಿವೃದ್ಧಿ ವರದಿ- 2015ರ ಪ್ರಕಾರ, ಇತರೆ ಸಮುದಾಯಗಳಿಗೆ ಹೋಲಿಸಿಕೊ೦ಡರೆ ದಲಿತರು ಅತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದಾರೆ.
ಹೀಗಿರುವಾಗ ಸಚಿವರು ಮತ್ತು ಮುಖ್ಯಮಂತ್ರಿಗಳು ಹೇಳುತ್ತಿರವಂತೆ, ದಲಿತರಿಗೆ ಮೀಸಲಿಟ್ಟ ಹಣವನ್ನು ಎಸ್ಸಿಪಿ-ಟಿಎಸ್ಪಿಯ ಹೊರತಾದ ಅಭಿವೃದ್ಧಿ ಯೋಜನೆಗಳಿಗೆ ಬಳಸುವುದೂ ಬಡತನ ನಿರ್ಮೂಲನೆಯ ಉದ್ದೇಶವನ್ನೇ ಹೊಂದಿದೆ ಎಂಬ ಸಮರ್ಥನೆ ಒಪ್ಪತಕ್ಕುದಲ್ಲ ಹಾಗೇನಾದರೂ ಅವರ ಮಾತು ನಿಜವಾಗಿದ್ದರೆ ಕಳೆದ 2014ರಿ೦ದ ಇದೇ ದಲಿತರಿಗಾಗಿ ಮೀಸಲಿಟ್ಟ ₹29,5687 ಕೋಟಿ ಹಣವನ್ನು ಯಾವುದಕ್ಕೆಲ್ಲಾ ಖರ್ಚು ಮಾಡಲಾಗಿದೆ ಎಷ್ಟು ಕುಟುಂಬಗಳು ಬಡತನ ರೇಖೆಗಿ೦ತ ಮೇಲೆ ಬಂದಿವೆ ಎ೦ಬ ಅಂಕಿ ಅಂಶಗಳನ್ನು ಸರ್ಕಾರ ಬಿಡಗಡೆ ಮಾಡಬೇಕಿದೆ” ಎಂದು ದಸಂಸ ಒಕ್ಕೂಟ ಆಗ್ರಹಿಸಿದೆ.
“ಉನ್ನತ ಮಟ್ಟದ ಸಮಿತಿಯೊಂದನ್ನು ನೇಮಿಸಿ ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಹಣ ಎಲ್ಲಿಗೆ ಹೋಗುತ್ತಿದೆ; ಎಷ್ಟು ಅಭಿವೃದ್ಧಿ ಆಗಿದೆ ಎಂಬುದನ್ನು ಅಧ್ಯಯನ ಮಾಡಿ ವರದಿ ಬಿಡುಗಡೆ ಮಾಡಬೇಕಿದೆ” ಎಂದು ಒತ್ತಾಯಿಸಿಸಲಾಗಿದೆ.
ಒಕ್ಕೂಟದ ಪರವಾಗಿ ಎನ್.ವೆಂಕಟೇಶ್, ಮಾವಳ್ಳಿ ಶಂಕರ್, ಗುರುಪ್ರಸಾದ್ ಕೆರಗೋಡು, ವಿ ನಾಗರಾಜ, ಇಂದೂಧರ ಹೊನ್ನಾಪುರ, ಎನ್.ಮುನಿಸ್ವಾಮಿ ಹಾಗೂ ಜೀವನಹಳ್ಳಿ ವೆಂಕಟೇಶ್ ಸಹಿ ಮಾಡಿದ್ದಾರೆ.
ಗ್ಯಾರಂಟಿಗೆ ಬಳಸಿರುವ sc St ಹಣ ತಕ್ಷಣವೇ ಹಿಂತಿರುಗಿಸುವ ತಯ್ಯಾರಿ ಮಾಡ್ಬೇಕು.
Source:Nanugouri