09/06/2025 12:42 AM

Translate Language

Home » ಲೈವ್ ನ್ಯೂಸ್ » ಒಳಮೀಸಲಾತಿ ಜಾರಿಗೆ ಗೋರ್‌ ಸೇನಾ ವಿರೋಧ.!

ಒಳಮೀಸಲಾತಿ ಜಾರಿಗೆ ಗೋರ್‌ ಸೇನಾ ವಿರೋಧ.!

Facebook
X
WhatsApp
Telegram

ಬೀದರ.28.ಜನವರಿ.25:- ರಾಜ್ಯದಲ್ಲಿ ಸದಾಶಿವ ಆಯೋಗ ವರದಿ ಪ್ರಕಾರ ಜಾತಿ ಜನಗಣತಿ ನಡೆಸದೇ ಒಳಮೀಸಲಾತಿ ಜಾರಿಗೊಳಿಸುವುದು ಸರಿಯಲ್ಲ. ಒಂದುವೇಳೆ ಒಳಮೀಸಲಾತಿ ಜಾರಿಗೆ ತಂದರೆ ಅದನ್ನು ವಿರೋಧಿಸಿ ಹೋರಾಟ ನಡೆಸಲಾಗುವುದು’ ಎಂದು ಗೋರ್‌ ಸೇನಾ ಸಂಘಟನೆಯ ಜಿಲ್ಲಾಧ್ಯಕ್ಷ ರಮೇಶಕುಮಾರ ಜಾಧವ ತಿಳಿಸಿದರು.

ಬಂಜಾರಾ ಸಮುದಾಯದವರು ದುಃಸ್ಥಿತಿಯಲ್ಲಿದ್ದಾರೆ.

ಸರ್ಕಾರದ ಸೌಲಭ್ಯಗಳು ಕಡಿಮೆ ಇವೆ. ಒಳಮೀಸಲಾತಿಯಿಂದ ನಮಗೆ ಹೊರಗಿಡುವ ಹುನ್ನಾರ ನಡೆಯುತ್ತಿದೆ ಎಂದು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಸರ್ಕಾರದ ಬಳಿ ದನಕರುಗಳ ದತ್ತಾಂಶ ಇದೆ. ಆದರೆ, ನಮ್ಮ ಬಂಜಾರ ಸಮುದಾಯದ ದತ್ತಾಂಶ ಇಟ್ಟಿಲ್ಲ. ತಹಶೀಲ್ದಾರ್ ಅವರಿಗೆ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೇಳಿದರೆ ನಿಮ್ಮ ತಾಂಡಾಗಳ ಜನಸಂಖ್ಯೆಯ ಸರಿಯಾದ ಮಾಹಿತಿ ನಮಗಿಲ್ಲ ಎಂದು ಹಾರಿಕೆ ಹಿಂಬರಹ ನೀಡುತ್ತಾರೆ ಎಂದರು.

ಸರಿಯಾಗಿ ಬಂಜಾರ ಸಮಾಜದ ಕುರಿತು ಅಧ್ಯಯನ ಮಾಡಿ, ಜಾತಿ ಜನಗಣತಿ ಮಾಡಿ ಒಳಮೀಸಲಾತಿ ಜಾರಿಗೊಳಿಸಬೇಕು. ಯಾವುದೇ ಪೂರ್ವಾಪರ ಮಾಹಿತಿ ಇಲ್ಲದೆ ಅವೈಜ್ಞಾನಿಕವಾಗಿ ಒಳಮೀಸಲಾತಿ ಜಾರಿ ಮಾಡಿದರೆ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ಬಂಜಾರಾ ಸಮಾಜದ ಗೋರ್‌ ಸಿಕವಾಡಿ ಸಂಘಟನೆಯ ಹಿರಿಯ ಮುಖಂಡ ಗೋವರ್ಧನ ರಾಠೋಡ್ ಮಾತನಾಡಿ, ಬಂಜಾರ ಸಮಾಜದವರು ಇಲ್ಲದಿದ್ದರೆ ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆಗಳು ನಡೆಯುತ್ತಿರಲಿಲ್ಲ. 2011ರಲ್ಲಿ ನಡೆಸಿದ ಜಾತಿ ಜನಗಣತಿ ಸಂದರ್ಭದಲ್ಲಿ ಅಧಿಕಾರಿಗಳು ತಾಂಡಾಗಳಿಗೆ ಭೇಟಿಯೇ ನೀಡಿಲ್ಲ.

ಮೇಲಾಗಿ ನಮ್ಮ ನಿಖರವಾದ ದತ್ತಾಂಶ ಸರ್ಕಾರದ ಹತ್ತಿರ ಇಲ್ಲ ಎಂದರು.

ನಿಖರ ಮಾಹಿತಿ ಇಲ್ಲದೆ ಒಳಮೀಸಲಾತಿ ಜಾರಿ ಮಾಡಿದರೆ ನಮಗೆ ಘೋರ ಅನ್ಯಾಯವಾಗುತ್ತದೆ. ನಮ್ಮ ಇಡೀ ಸಮಾಜಕ್ಕೆ ತೊಂದರೆಯಾಗುತ್ತದೆ. ವೈಜ್ಞಾನಿಕವಾಗಿ ಜಾತಿ ಜನಗಣತಿ ನಡೆಸಿ, ಒಳಮೀಸಲಾತಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ಗೋರ್‌ ಸೇನಾ ಸಂಘಟನೆಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸವಿತಾಬಾಯಿ ರಾಠೋಡ್ ಮಾತನಾಡಿ, 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ 11 ಲಕ್ಷ ಬಂಜಾರ ಸಮಾಜದ ಜನಸಂಖ್ಯೆ ತೋರಿಸಲಾಗಿದೆ. ಇದು ಸರಿಯಾದ ಅಂಕಿ ಸಂಖ್ಯೆಯಲ್ಲ ಎಂದರು.

ಸಂಘಟನೆಯ ಕಾರ್ಯಾಧ್ಯಕ್ಷ ಬಾಬುರಾವ ಜಾಧವ್, ಉಪಾಧ್ಯಕ್ಷ ನೀಲಕಂಠ ರಾಠೋಡ್, ಸಂತೋಷ ಬಾನೋದ್, ಶಶಿಕಲಾ ಮತ್ತು ಇತರರು ಉಪಸ್ಥಿತರಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!