ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಅನುದಾನಿತ ಶಿಕ್ಷಣ ಸಂಸ್ಥೆಗಳು ನಡೆಸುವ ಮಹಾವಿದ್ಯಾಲಯಗಳಲ್ಲಿ ಸಾವಿರಕ್ಕೂ ಹೆಚ್ಚು ಬ್ಯಾಕ್ಲಾಗ್ ಹುದ್ದೆಗಳು ಖಾಲಿ ಉಳಿದಿವೆ. ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯ ಕಾಲೇಜು ಶಿಕ್ಷಣ ಇಲಾಖೆ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆ ಅಧೀನದ ಅನುದಾನಿತ ಕಾಲೇಜುಗಳಲ್ಲಿ ನಿವೃತ್ತಿ, ನಿಧನ, ರಾಜೀನಾಮೆ ಕಾರಣಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಬೋಧಕ ಮತ್ತು ಬೋಧಕೇತರ ಹುದ್ದೆಗಳು ಖಾಲಿ ಇವೆ.
ಈ ಹುದ್ದೆಗಳ ಭರ್ತಿಗೆ 2002 ಮತ್ತು 2012ರಲ್ಲಿ ಅನುಮತಿ ನೀಡಿ, ನೇಮಕಾತಿ ಆದೇಶ ನೀಡಿದ್ದ ಉನ್ನತ ಶಿಕ್ಷಣ ಇಲಾಖೆ, ಈಗ 2001ರ ನಿಯಮ ಅನ್ವಯಿಸಿ 2019-2020ನೇ ಸಾಲಿನ ನೇಮಕಾತಿ ಪ್ರಕ್ರಿಯೆ ತಡೆಹಿಡಿದೆ. ಐದು ವರ್ಷಗಳಿಂದ ಹುದ್ದೆಗಳ ಭರ್ತಿ ನಡೆಯೆತಿದೆ ಬಿದ್ದಿದೆ. 2018-2019ನೇ ಸಾಲಿನ ನಂತರ ಇದುವರೆಗೂ ಶಿಕ್ಷಣ ಸಂಸ್ಥೆಗಳಲ್ಲಿನ ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿ ಮಾಡಿಲ್ಲ.
ರಾಜ್ಯದಲ್ಲಿ ಅನುದಾನಿತ ತಾಂತ್ರಿಕ (ಎಂಜಿನಿಯರಿಂಗ್) ಹಾಗೂ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಖಾಲಿ ಇದ್ದ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು 2019-2020ನೇ ಸಾಲಿನಲ್ಲಿ ಸರ್ಕಾರ ನೀಡಿದ್ದ ಅನುಮತಿಯೂ ಪೂರ್ಣಗೊಂಡಿಲ್ಲ.ಸರ್ಕಾರದ ಅನುಮತಿ ದೊರೆತ ನಂತರ ಬೆಂಗಳೂರಿನ ಡಾ.ಅಂಬೇಡ್ಕರ್ ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯ, ಬಿಎಂಎಸ್ ಎಂಜಿನಿಯರಿಂಗ್ ಕಾಲೇಜು, ಬಿಎಂಎಸ್ (ಸಂಜೆ) ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯ, ಹಾಸನದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯ, ಮಂಡ್ಯದ ಪಿಇಎಸ್ ಎಂಜಿನಿಯರಿಂಗ್ ಕಾಲೇಜು, ಮೈಸೂರಿನ ನ್ಯಾಷನಲ್ ಎಂಜಿನಿಯರಿಂಗ್ ಶಿಕ್ಷಣ ಸಂಸ್ಥೆ, ಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜು, ಕಲಬುರಗಿಯ ದೊಡ್ಡಪ್ಪ ಅಪ್ಪ ತಾಂತ್ರಿಕ ಮಹಾವಿದ್ಯಾಲಯ, ಬಾಗಲಕೋಟೆಯ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜು, ಹುಬ್ಬಳ್ಳಿಯ ಬಿ.ವಿ. ಭೂಮರಡ್ಡಿ ಎಂಜನಿಯರಿಂಗ್ ಕಾಲೇಜುಗಳಲ್ಲಿ ಖಾಲಿ ಇದ್ದ ಬೋಧಕ ಹಾಗೂ ಬೋಧಕೇತರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿತ್ತು.
ನಿಯಮದಂತೆ ವಯೋಮಿತಿ ಮತ್ತು ಅಂಕಗಳ ಅರ್ಹತೆಯ ಆಧಾರದಲ್ಲಿ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದ ಆಯಾ ಕಾಲೇಜುಗಳ ಆಡಳಿತ ಮಂಡಳಿಗಳು ಕಡತವನ್ನು ತಾಂತ್ರಿಕ ಶಿಕ್ಷಣ ಇಲಾಖೆಗೆ ಸಲ್ಲಿಸಿದ್ದವು. ಆದರೆ, ವರ್ಷಗಳಾದರೂ ನೇಮಕಾತಿ ಪ್ರಕ್ರಿಯೆ ಮಾತ್ರ ಪೂರ್ಣಗೊಳ್ಳಲಿಲ್ಲ.ಐದು ವರ್ಷಗಳ ನಂತರ ಪ್ರತಿಕ್ರಿಯೆ: ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅನುಮತಿ ನೀಡಿ, ಪ್ರಕ್ರಿಯೆಗಳು ಪೂರ್ಣಗೊಂಡರೂ, ನೇಮಕಾತಿ ಆದೇಶ ನೀಡಲು ಉನ್ನತ ಶಿಕ್ಷಣ ಇಲಾಖೆ ನಾಲ್ಕು ವರ್ಷ ಸತಾಯಿಸಿತ್ತು. ಈಚೆಗೆ ಸ್ಪಷ್ಟನೆ ನೀಡಿರುವ ಇಲಾಖೆ, ‘2003ರಲ್ಲಿ ಪ್ರಕಟಿಸಲಾದ ಕರ್ನಾಟಕ ಶಿಕ್ಷಣ ಸಂಸ್ಥೆಗಳ ನಿಯಮ 2001ರ ಪ್ರಕಾರ ಖಾಲಿಯಾದ ಬೋಧಕೇತರ ಹುದ್ದೆಗಳನ್ನು ವೇತನಾನುದಾನಕ್ಕೆ ಒಳಪಡಿಸಲು ಅವಕಾಶ ಇಲ್ಲ. ಒಂದೇ ಕಡತದಲ್ಲಿ ಬೋಧಕ ಹಾಗೂ ಬೋಧಕೇತರ ಹುದ್ದೆಗಳಿಗೆ ಅನುಮೋದನೆ ಕೋರಲಾಗಿದೆ. ಎರಡನ್ನೂ ಪ್ರತ್ಯೇಕಿಸಿ, ಮರುಕಡತ ಮಂಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ.
ಉನ್ನತ ಶಿಕ್ಷಣ ಇಲಾಖೆಯ ಈ ವಾದವನ್ನು ಒಪ್ಪದ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳು, ವಿವಿಧ ಸಂಘಟನೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಬ್ಯಾಕ್ಲಾಗ್ ಹುದ್ದೆಗಳಿಗೂ 2001ರ ಕರ್ನಾಟಕ ಶಿಕ್ಷಣ ಸಂಸ್ಥೆಗಳ ನಿಯಮಕ್ಕೂ ಸಂಬಂಧವಿಲ್ಲ. ಹುದ್ದೆ ಭರ್ತಿಗೆ ಅನುಮತಿ ನೀಡಿ, ಎಲ್ಲ ಪ್ರಕ್ರಿಯೆ ಪೂರ್ಣಗೊಂಡ ನಂತರ ಇಂತಹ ಧೋರಣೆ ಸರಿಯಲ್ಲ. ಬ್ಯಾಕ್ಲಾಗ್ ವಿಶೇಷ ನೇಮಕಾತಿ ನಿಯಮಗಳ ಅನ್ವಯ ನೇಮಕಾತಿ ಆದೇಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.ಕೃಷ್ಣದಾಸ್, ಪ್ರಧಾನ ಕಾರ್ಯದರ್ಶಿ, ಪರಿಶಿಷ್ಟ ಜಾತಿ, ವರ್ಗಗಳ ಪದವೀಧರರ ಒಕ್ಕೂಟಬ್ಯಾಕ್ಲಾಗ್ ಹುದ್ದೆಗಳ ಭರ್ತಿಗೆ ಅನುಮತಿ ನೀಡಿದ ಐದು ವರ್ಷಗಳ ನಂತರ ಉನ್ನತ ಶಿಕ್ಷಣ ಇಲಾಖೆ 2001ರ ನಿಯಮ ಉಲ್ಲೇಖಿಸಿದೆ. 2002, 2012ರಲ್ಲಿ ಬ್ಯಾಕ್ಲಾಗ್ ಭರ್ತಿ ಮಾಡಿದಾಗ ನಿಯಮ ಇರಲಿಲ್ಲವೇ? ಈಗ ಏಕೆ ಇಂತಹ ದ್ವಿಮುಖ ನೀತಿ? ಡಾ.ಎಂ.ಸಿ. ಸುಧಾಕರ್, ಉನ್ನತ ಶಿಕ್ಷಣ ಸಚಿವ ಹಿಂದಿನ ಸರ್ಕಾರ 2023ರವರೆಗೂ ಕ್ರಮಕೈಗೊಳ್ಳದೆ ವಿಳಂಬ ಮಾಡಿತ್ತು. ತಾಂತ್ರಿಕ ಶಿಕ್ಷಣದಲ್ಲಿ ಬೋಧಕೇತರ ಹುದ್ದೆಗಳೂ ಅಗತ್ಯವಿರುವ ಕಾರಣ ಅನುಮತಿ ಕೋರಿ ಆರ್ಥಿಕ ಇಲಾಖೆಗೆ ಹೊಸದಾಗಿ ಪ್ರಸ್ತಾವ ಸಲ್ಲಿಸಿದ್ದೇವೆ. ಶೀಘ್ರ ಸಮಸ್ಯೆ ಬಗೆಹರಿಸುತ್ತೇವೆಸಂಪುಟ ಉಪ ಸಮಿತಿಗೂ ಇಲ್ಲ ಮನ್ನಣೆ
ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಖಾಲಿ ಇದ್ದ ಬ್ಯಾಕ್ಲಾಗ್ ಹುದ್ದೆಗಳ ನೇಮಕಾತಿ ಪಟ್ಟಿಗೆ 2021ರಲ್ಲೇ ಆರ್ಥಿಕ ಇಲಾಖೆ ಅನುಮೋದನೆ ನೀಡಿತ್ತು. ಆದರೆ, ಉನ್ನತ ಶಿಕ್ಷಣ ಇಲಾಖೆ ಕಡತವನ್ನು ಮತ್ತೆ ಹಿಂದಿರುಗಿಸಿತ್ತು.ನೇಮಕಾತಿ ವಿಳಂಬದ ವಿಚಾರವಾಗಿ ಜನವರಿ 2022ರಲ್ಲಿ ಮಧ್ಯ ಪ್ರವೇಶ ಮಾಡಿದ್ದ ಬ್ಯಾಕ್ಲಾಗ್ ಕುರಿತ ಸಚಿವ ಸಂಪುಟ ಉಪ ಸಮಿತಿ ಸಭೆ ಪ್ರಕರಣವನ್ನು ಪರಿಶೀಲಿಸಿ, ಮೂರು ತಿಂಗಳ ಒಳಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸ ಬೇಕು. ಸಮಾಜ ಕಲ್ಯಾಣ ಇಲಾಖೆಗೆ ವರದಿ ನೀಡುವಂತೆ ತಾಕೀತು ಮಾಡಿತ್ತು. ಅದಾಗಿ ಮೂರು ವರ್ಷಗಳಾದರೂ ನೇಮಕಾತಿ ಆದೇಶ ದೊರೆತಿಲ್ಲ. ಈ ಕುರಿತು ಸಮಾಜ ಕಲ್ಯಾಣ ಇಲಾಖೆ ಹಲವು ಬಾರಿ ಉನ್ನತ ಶಿಕ್ಷಣ ಇಲಾಖೆಗೆ ಪತ್ರ ಬರೆದಿದೆ.
ಸರ್ಕಾರ ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಅಥವಾ ಅನುದಾನಿತ ಕಾಲೇಜುಗಳಲ್ಲಿ ಬಹಳಷ್ಟು ಬ್ಯಾಕ್ಲಾಗ್ ಹುದ್ದೆಗಳು ಭರ್ತಿಗಾಗಿ ಪ್ರಕ್ರಿಯೆ ಪ್ರಾರಂಭ ಮಾಡುತ್ತಿದೆ.