ಕೊಪ್ಪಳ.13.ಜೂನ್.26: ಅಂಗನವಾಡಿ ಕೇಂದ್ರಗಳಲ್ಲಿ ಮೂರು ವರ್ಷ ಶಾಲಾ ಪೂರ್ವ ಶಿಕ್ಷಣ ಚಟುವಟಿಕೆಗಳನ್ನು ಕಲಿತು 2027-27ನೇ ಸಾಲಿನಲ್ಲಿ 1ನೇ ತರಗತಿಗೆ ದಾಖಲಾಗುತ್ತಿರುವ ಮಕ್ಕಳ ಶಾಲಾ ಪ್ರವೇಶೋತ್ಸವ ಕಾರ್ಯಕ್ರಮವನ್ನು ಕೊಪ್ಪಳ ಶಿಶು ಅಭಿವೃದ್ಧಿ ಯೋಜನೆಯ ಹೊಸಲಿಂಗಪುರ ಗ್ರಾಮದ 5 ಅಂಗನವಾಡಿ ಕೇಂದ್ರಗಳಲ್ಲಿ ಬುಧವಾರ (ಜೂ. 10ರಂದು) ನಡೆಯಿತು.
ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಅಮರೇಶ್ ಹಾವಿನ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು. ಬಳಿಕ ಮಾತನಾಡಿ, ಬುನಾದಿ ಹಂತದ ಶಿಕ್ಷಣ ಬಹಳ ಮುಖ್ಯ ಆದ್ದರಿಂದ ಮೂರರಿಂದ ಆರು ವಯಸ್ಸಿನ ಮಕ್ಕಳ ದೈಹಿಕ, ಬೌದ್ಧಿಕ, ಮಾನಸಿಕ, ಬೆಳವಣಿಗೆಗೆ ಶಾಲಾ ಪೂರ್ವ ಶಿಕ್ಷಣ ಕಲಿಕೆ ತುಂಬಾ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಲಬುರಗಿ, ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಕೊಪ್ಪಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕಲಿಕೆ ಟಾಟಾ ಟ್ರಸ್ಟ್ ಕೊಪ್ಪಳ ಇವರ ಸಹಭಾಗಿತ್ವದಲ್ಲಿ ಜಿಲ್ಲೆಯಲ್ಲಿ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲಾಗುತ್ತಿದೆ ಎಂದು ಹೇಳಿದರು.
ಅಂಗನವಾಡಿ ಕೇಂದ್ರಗಳಲ್ಲಿ ಮೂರು ವರ್ಷ ಶಾಲಾ ಪೂರ್ವ ಶಿಕ್ಷಣ ಚಟುವಟಿಕೆಗಳನ್ನು ಕಲಿತು ಶಾಲಾ ಸನ್ನದ್ಧತೆಯೊಂದಿಗೆ 2027-27ನೇ ಸಾಲಿನಲ್ಲಿ ಪ್ರಾರ್ಥಮಿಕ ಶಾಲೆಗಳಿಗೆ 1ನೇ ತರಗತಿಗೆ ದಾಖಲಾಗುತ್ತಿರುವ ಮಕ್ಕಳ ಶಾಲಾ ಪ್ರವೇಶೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಇದೇ ವೇಳೆ ಕೊಪ್ಪಳ ಶಿಶು ಅಭಿವೃದ್ಧಿ ಯೋಜನೆಯ ಹೊಸಲಿಂಗಪುರ ಗ್ರಾಮದ 5 ಅಂಗನವಾಡಿ ಕೇಂದ್ರಗಳಿಂದ ಒಟ್ಟು 20 ಮಕ್ಕಳು ಹೊಸಲಿಂಗಪುರದ ಸರ್ಕಾರಿ ಪ್ರಾಥಮಿಕ ಶಾಲೆಗೆ ದಾಖಲಾಗುವ ಮಕ್ಕಳಿಗೆ ಬೀಳ್ಕೊಡುಗೆ ಸಮಾರಂಭದ ಮೂಲಕ ಶಾಲೆಗೆ ಪ್ರವೇಶೋತ್ಸವವನ್ನು ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಕೊಪ್ಪಳ ಸಿಡಿಪಿಓ ರೋಹಿಣಿ ಕೊಟಗಾರ, ಪ್ರಾಥಮಿಕ ಶಾಲೆಯ ಮುಖ್ಯ ಉಪಾಧ್ಯಾಯರಾದ ನಾಗರತ್ನ, ಕಲಿಕೆ ಟಾಟಾ ಟ್ರಸ್ಟ್ ಕೊಪ್ಪಳ ಜಿಲ್ಲಾ ವ್ಯವಸ್ಥಾಪಕರಾದ ಅಶೋಕ್, ವಲಯ ಮೇಲ್ವಿಚಾರಕರಾದ ಸುಮಂಗಲ ಸಜ್ಜನ್ ಸೇರಿದಂತೆ ಹೊಸಲಿಂಗಪುರ ಗ್ರಾಮದ 5 ಅಂಗನವಾಡಿಗಳ ಕಾರ್ಯಕರ್ತೆಯರು, ಮಕ್ಕಳ ಪೋಷಕರು ಹಾಗೂ ಮಕ್ಕಳು ಭಾಗವಹಿಸಿದ್ದರು.






Any questions related to ಹೊಸಲಿಂಗಪುರದಲ್ಲಿ ಅಂಗನವಾಡಿ ಮಕ್ಕಳ ಶಾಲಾ ಪ್ರವೇಶೋತ್ಸವ?