ಮುಂಬೈ.07.ಜನವರಿ.26:ಮಹಾರಾಷ್ಟ್ರದಲ್ಲಿ ಇದೀಗ ಮಾಜಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಬಣ ಈಗ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳಬೇಕಾಗಿದೆ. ಕಾಂಗ್ರೆಸ್- ಬಿಜೆಪಿ ಮೈತ್ರಿ ಬೆಳವಣಿಗೆ ಮಹಾರಾಷ್ಟ್ರದ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಮೈತ್ರಿ ಅನಿರೀಕ್ಷಿತವಾಗಿದ್ದು, ರಾಜ್ಯದ ಮಹಾಯುತಿ ಮೈತ್ರಿಕೂಟದಲ್ಲಿ ಬಿರುಕು ಮೂಡಿಸಿದೆ. ಅಂಬರ್ನಾಥ್ ಪುರಸಭೆಯಲ್ಲಿ ಬಿಜೆಪಿ-ಕಾಂಗ್ರೆಸ್ ಮೈತ್ರಿಕೂಟವು ಶಿಂಧೆ ಬಣಕ್ಕೆ ದೊಡ್ಡ ಆಘಾತ ನೀಡಿದೆ. ಈ ಮೈತ್ರಿಯಿಂದ ಬಿಜೆಪಿಯ ತೇಜಶ್ರೀ ಕಾರಂಜುಲೆ ಅವರು ಮೇಯರ್ ಸ್ಥಾನ ಗೆದ್ದಿದ್ದಾರೆ.
ಅಂಬರ್ನಾಥ್ ಪುರಸಭೆಯಲ್ಲಿ 32 ಕೌನ್ಸಿಲರ್ಗಳ ಒಕ್ಕೂಟವು ಬಿಜೆಪಿಗೆ ಸ್ಪಷ್ಟ ಬಹುಮತ ನೀಡಿದೆ. ಇದರಲ್ಲಿ ಬಿಜೆಪಿಯ 14, ಕಾಂಗ್ರೆಸ್ನ 12 ಮತ್ತು ಅಜಿತ್ ಪವಾರ್ ಗುಂಪಿನ ಎನ್ಸಿಪಿಯ 4 ಸದಸ್ಯರು ಸೇರಿದ್ದಾರೆ. ಈ ಮೈತ್ರಿಕೂಟವನ್ನು ಅಂಬರ್ನಾಥ್ ವಿಕಾಸ್ ಅಘಾಡಿ ಎಂದು ಹೆಸರಿಸಲಾಗಿದೆ. ಈ ಮೈತ್ರಿಯಿಂದಾಗಿ ಶಿಂಧೆ ಬಣದ ಶಿವಸೇನೆ ಅಧಿಕಾರ ಕಳೆದುಕೊಂಡಿದೆ ಮತ್ತು ವಿರೋಧ ಪಕ್ಷದ ಸ್ಥಾನಕ್ಕೆ ಇಳಿದಿದೆ.
ಇನ್ನೂ ಈ ರೀತಿ ಮೈತ್ರಿಗಳು ಸ್ಥಳೀಯ ಚುನಾವಣೆಗಳಲ್ಲಿ ನಡೆಯುವುದು ಸಾಮಾನ್ಯವಾಗಿದೆ. ಇದರಿಂದ ಸ್ಥಳೀಯ ಕಾರ್ಯಕರ್ತರಿಗೆ ದಿಗ್ಭ್ರಮೆಯಾಗಬಹುದು. ಆದರೆ ಇದು ರಾಷ್ಟ್ರಮಟ್ಟದಲ್ಲಿ ಬೆಳವಣಿಗೆಯಾಗಿರುವುದಿಲ್ಲ. ಈ ಹಿಂದೆ ಕೂಡ ಹಲವು ಕಡೆ ಈ ರೀತಿ ಮೈತ್ರಿ ಕಾರ್ಯಾಚರಣೆ ನಡೆದಿರುವ ಉದಾಹರಣೆಗಳು ಕೂಡ ಇದೆ.
ಮೈತ್ರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶಿಂಧೆ ಬಣ
ಶಿಂಧೆ ಬಣದ ನಾಯಕರು ಈ ಮೈತ್ರಿಗೆ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಶಿಂಧೆ ಬಣದ ಶಾಸಕ ಡಾ. ಬಾಲಾಜಿ ಕಿನಿಕರ್, ಕಾಂಗ್ರೆಸ್ ಮುಕ್ತ ಭಾರತದ ಘೋಷಣೆ ಮಾಡುವ ಬಿಜೆಪಿಯೇಇದೀಗ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಶಿವಸೇನೆ ಮೇಲೆ ದಾಳಿ ಮಾಡುತ್ತಿದೆ. ಇದು ಬೆನ್ನಿಗೆ ಚೂರಿ ಹಾಕಿದಂತೆ ಎಂದು ಆರೋಪಿಸಿದ್ದಾರೆ.
ಶಿಂಧೆ ಅವರ ಪುತ್ರ ಶ್ರೀಕಾಂತ್ ಶಿಂಧೆ, ಅಂಬರ್ನಾಥ್ನಲ್ಲಿ ಬಿಜೆಪಿ-ಕಾಂಗ್ರೆಸ್ ಮೈತ್ರಿ ನಮ್ಮ ಮಿತ್ರಪಕ್ಷ ಬಿಜೆಪಿಗೆ ಪ್ರಶ್ನೆಯಾಗಿದೆ. ಬಿಜೆಪಿ ನಾಯಕರು ಇದಕ್ಕೆ ಉತ್ತರಿಸಬೇಕು. ಹಲವು ವರ್ಷಗಳಿಂದ ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಮಾಡಿಕೊಂಡಿವೆ.
ಈ ಮೈತ್ರಿ ಮುರಿಯಬಾರದು. ಶಿವಸೇನೆ ಅಭಿವೃದ್ಧಿ ಕಾರ್ಯಗಳು ಮಾಡಿದೆ, ಅದನ್ನು ಮರೆಯಬಾರದು ಎಂದು ಹೇಳಿದ್ದಾರೆ.
ಬಿಜೆಪಿ ಈ ಆರೋಪಗಳನ್ನು ತಿರಸ್ಕರಿಸಿದೆ. ಬಿಜೆಪಿ ಉಪಾಧ್ಯಕ್ಷ ಗುಲಾಬ್ರಾವ್ ಕಾರಂಜುಲೆ ಪಾಟೀಲ್,’ಕಳೆದ 25 ವರ್ಷಗಳಿಂದ ಭ್ರಷ್ಟಾಚಾರದಲ್ಲಿ ಮುಳುಗಿರುವ ಶಿಂಧೆ ಬಣದೊಂದಿಗೆ ಮೈತ್ರಿ ಮಾಡಿಕೊಂಡರೆ ಅದು ಅನುಚಿತ. ಅಂಬರ್ನಾಥ್ನಲ್ಲಿ ಮಹಾಮೈತ್ರಿಕೂಟಕ್ಕಾಗಿ ಹಲವು ಬಾರಿ ಪ್ರಯತ್ನಿಸಿದ್ದೆವು, ಆದರೆ ಶಿಂಧೆ ಬಣದ ನಾಯಕರು ಪ್ರತಿಕ್ರಿಯೆ ನೀಡಲಿಲ್ಲ. ನಾವು ಅಭಿವೃದ್ಧಿಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ’ ಎಂದು ಹೇಳಿದ್ದಾರೆ.






Any questions related to ಕಾಂಗ್ರೆಸ್ ಬಿಜೆಪಿ ಮೈತ್ರಿ: ಶಿಂಧೆ ಬಣಕ್ಕೆ ಶಾಕ್!?