ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ
ಕೊಪ್ಪಳ.05.ಆಗಸ್ಟ್.25 ತಾಯಿ ಎದೆಹಾಲು ಮಗುವಿನ ಸರ್ವತೋಮಕ ಬೆಳವಣಿಗೆಗಾಗಿ ಮುಖ್ಯವಾಗಿದ್ದು, ತಾಯಿ ಎದೆಹಾಲು ಮಗುವಿಗೆ ನೀಡುವ ಮೊದಲ ಲಸಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರ ಹೇಳಿದರು.
ಅವರು ಶನಿವಾರ ಗಂಗಾವತಿ ನಗರ ಪ್ರದೇಶದ ಕಿಲ್ಲಾ ಏರಿಯಾದ 1ನೇ ಅಂಗನವಾಡಿ ಕೇಂದ್ರದಲ್ಲಿ ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಇಸ್ಲಾಂಪುರ-ಗಂಗಾವತಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತಾಶ್ರಯದಲ್ಲ್ಲಿ ಆಯೋಜಿಸಲಾಗಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿ ವರ್ಷ ಆಗಸ್ಟ್ ಮೊದಲನೇ ವಾರ (1-7ನೇ ದಿನ)ದಲ್ಲಿ “ವಿಶ್ವ ಸ್ತನ್ಯಪಾನ ಸಪ್ತಾಹ” ಜಾಗೃತಿ ಕಾರ್ಯಕ್ರಮ ಆಚರಿಸಲಾಗುತ್ತದೆ. ಇದರ ಉದ್ದೇಶ ತಾಯಿಯ ಎದೆಹಾಲು ಶಿಶುವಿಗೆ ನೀಡುವ ವಿಧಾನಗಳ ಬಗ್ಗೆ ಗರ್ಭಿಣಿ, ಬಾಣಂತಿಯರಿಗೆ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸುವುದಾಗಿದೆ. “ತಾಯಿಯ ಹಾಲು ನೀಡುವುದರಲ್ಲಿ ಹೂಡಿಕೆ ಮಾಡಿದರೆ ಮಕ್ಕಳ ಆರೋಗ್ಯಕರ ಭವಿಷ್ಯಕ್ಕಾಗಿ ಹೂಡಿಕೆ ಮಾಡಿದಂತೆ” ಎಂಬ ಈ ವರ್ಷದ ಘೋಷವಾಕ್ಯದೊಂದಿಗೆ ಕಾರ್ಯಕ್ರಮವನ್ನು ಆಚರಿಸಲಾಗುತ್ತದೆ. ಹೆರಿಗೆಯಾದ ಅರ್ಧ ಗಂಟೆಯಲ್ಲಿ ತಾಯಿಯ ಎದೆಹಾಲು ನೀಡಬೇಕು, ಹೆರಿಗೆಯಾದ ಮೂರು ದಿನದಲ್ಲಿ ಬರುವ ಹಳದಿ ಹಾಲಿನಲ್ಲಿ “ಕೊಲಸ್ಟಾçಂ” ಎಂಬ ರೋಗನಿರೋಧಕ ಶಕ್ತಿ ಹೆಚ್ಚಿರುತ್ತದೆ. ಆರು ತಿಂಗಳವರೆಗೆ ಕೇವಲ ತಾಯಿಯ ಎದೆಹಾಲನ್ನು ಮಾತ್ರ ನೀಡಬೇಕು, ಬೇರೇನೂ ನೀಡಬಾರದು ಎಂದರು.
ತಾಯಿ ಎದೆಹಾಲು ನೀಡುವುದುರಿಂದ ಮಗುವಿನ ಸರ್ವತೋಮಕ ಬೆಳವಣಿಗೆ ಹೊಂದಲು ಸಾಧ್ಯವಾಗುತ್ತದೆ. ಅದು ಮಗುವಿಗೆ ನೀಡುವ ಮೊದಲ ಲಸಿಕೆಯಾಗಿದೆ. ಎದೆಹಾಲು ಕುಡಿಸುವುದರಿಂದ ತಾಯಿ ಮತ್ತು ಮಗುವಿಗೆ ಬಹಳಷ್ಟು ಉಪಯುಕ್ತವಾಗುತ್ತದೆ. ತಾಯಿ ಮತ್ತು ಮಗುವಿನ ಬಾಂದವ್ಯ ಹೆಚ್ಚಾಗುತ್ತದೆ. ತಾಯಿಯ ಎದೆಹಾಲು ನೀಡುವುದರಿಂದ ಎದೆ ಕ್ಯಾನ್ಸರ್ ಬರುವುದಿಲ್ಲ. ಗರ್ಭದಾರಣೆ ಮುಂದೂಡುತ್ತದೆ. ಮಗುವಿಗೆ ಸರಳವಾಗಿ ಜೀರ್ಣವಾಗುತ್ತದೆ. ಎದೆಹಾಲು ಕಾಯಿಸುವ ಅಗತ್ಯವಿಲ್ಲ, ಮಗುವಿಗೆ ಬೇಕೆಂದಾಗ ಸಿಗುತ್ತದೆ. ಮಗುವಿಗೆ ಯಾವುದೇ ಕಾರಣಕ್ಕೂ ಬಾಟಲಿ ಹಾಲನ್ನು ನೀಡಬಾರದು. ಒಂದು ವೇಳೆ ಬಾಟಲಿ ಹಾಲನ್ನು ನೀಡಿದರೆ ಮಗುವಿಗೆ ಅತಿಸಾರ ಭೇದಿ ಉಂಟಾಗುವ ಸಾಧ್ಯತೆ ಇರುತ್ತದೆ. ಪ್ರತಿ ತಾಯಿಯು ತನ್ನ ಮಗುವಿಗೆ ದಿನಕ್ಕೆ 10 ರಿಂದ 12 ಬಾರಿ ಎದೆಹಾಲು ನೀಡಬೇಕು. ತಾಯಿಯ ಎದೆಹಾಲು ನೀಡುವುದರಿಂದ ಯಾವುದೇ ರೀತಿಯ ಅಪೌಷ್ಠಿಕತೆ, ನಿಮೋನಿಯಾ ಹಾಗೂ ಇತರೆ ಖಾಯಿಲೆಗಳು ಹರಡದಂತೆ ರಕ್ಷಣೆ ನೀಡುತ್ತದೆ. ಮಗುವಿನ ತೂಕವೂ ಹೆಚ್ಚಾಗುತ್ತದೆ. ಇದರಿಂದ ಅಪೌಷ್ಠಿಕ ಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಗಂಗಾವತಿ ಆರೋಗ್ಯ ನಿರೀಕ್ಷಣಾಧಿಕಾರಿ ಹನುಮೇಶ ಅವರು ಕ್ಷಯರೋಗ ನಿರ್ಮೂಲನೆ, ಕುಷ್ಠರೋಗ ನಿರ್ಮೂಲನೆ, ಸೋಂಕಿತ ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಹಾಗೂ ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು, ವಿವರವಾಗಿ ಮಾತನಾಡಿದರು.
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಸಾವಿತ್ರಿ ಅವರು ಕುಟುಂಬ ಕಲ್ಯಾಣ ಕಾರ್ಯಕ್ರಮ, ಬಾಲ್ಯವಿವಾಹ ನಿಷೇಧ, ಸಾವತ್ರಿಕ ಲಸಿಕಾ ಕಾರ್ಯಕ್ರಮ, ಆರ್.ಸಿ.ಹೆಚ್ ಕಾರ್ಯಕ್ರಮಗಳ ಬಗ್ಗೆ ಪ್ಲಿಫ್ಚಾರ್ಟ ಪುಸ್ತಕ ಬಳಸಿ, ಮಾಹಿತಿ ನೀಡಿದರು. ಕೊನೆಯಲ್ಲಿ ಸ್ತನ್ಯಪಾನ ಸಪ್ತಾಹ ಕುರಿತು ಪ್ರತಿಜ್ಞಾವಿಧಿ ಭೋದಿಸಲಾಯಿತು.
ಕಾರ್ಯಕ್ರಮದಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಾದ ಪುಷ್ಪಾ, ಅಶ್ವಿನಿ, ಅನ್ನಪೂರ್ಣ, ಸ್ತ್ರಿಶಕ್ತಿ ಸಂಘದ ಪದಾಧಿಕಾರಿಗಳಾದ ಶ್ರೀದೇವಿ, ಶರಣಮ್ಮ ಸೇರಿದಂತೆ ಗರ್ಭಿಣಿಯರು, ಭಾಣಂತಿಯರು, ಕಿಶೋರಿಯರು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.