ಕೊಪ್ಪಳ.23.ಜೂನ್.25:- ರಾಜ್ಯದಲ್ಲಿ ಖಾಲಿಯಿರುವ 8,000 ಪೊಲೀಸ್ ಕಾನ್ಸ್ಟೆಬಲ್ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಭಾನುವಾರ ಕೋಪಳ್ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಹಿಂದಿನ ಸರ್ಕಾರ ಅವಧಿಯಲ್ಲಿ ಯಾವುದೇ ನೇಮಕಾತಿಗಳೂ ನಡೆದಿಲ್ಲ.
ನಮ್ಮ ಸರ್ಕಾರ ಎಲ್ಲವನ್ನೂ ಸರಿಪಡಿಸಿದ್ದು, ಶೀಘ್ರದಲ್ಲೇ 8 ಸಾವಿರ ಕಾನ್ಸ್ಟೆಬಲ್ಗಳು, 500 ಸಬ್-ಇನ್ಸ್ಪೆಕ್ಟರ್ಗಳನ್ನು ನೇಮಕ ಮಾಡಲಾಗುತ್ತದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಬಗ್ಗೆ ಯಾವುದೇ ಮಾಹಿತಿ ತನಗೆ ತಿಳಿದಿಲ್ಲ ಎಂದು ಹೇಳಿದರು.
ಕರ್ನಾಟಕ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್ ಒಳಗೊಂಡ ಆಡಿಯೋ ಕ್ಲಿಪ್ ಕುರಿತ ವಿಚಾರ ಕುರಿತ ಪ್ರಶ್ನೆಗೆ ಉತ್ತರಿಸಿ, ‘ಅವರು ಮಾಡಿರುವುದು ಗಂಭೀರ ಆರೋಪ ಅಲ್ಲ. ಸಂಬಂಧಿಸಿದ ಸಚಿವರ ಜೊತೆ ಮಾತನಾಡುವಂತೆ ಅವರಿಗೆ ಹೇಳಿದ್ದೇನೆ. ಪೊಲೀಸರಿಗೆ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದ ಕುರಿತ ಪ್ರಶ್ನೆಗೆ ಉತ್ತರಿಸಿ, ಗಣಿ ಅಕ್ರಮದಲ್ಲಿ 1.5 ಲಕ್ಷ ಕೋಟಿ ರೂ. ದುರುಪಯೋಗವಾಗಿದೆ. ಇದರ ಬಗ್ಗೆ ಕ್ರಮ ಕೈಗೊಳ್ಳಲು ಹೇಳಿದ್ದಾರೆ. ಲೂಟಿ ಮಾಡಿದ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಲಹೆ ನೀಡಿ ಈ ಪತ್ರ ಬರೆದಿದ್ದಾರೆ. ನಾವು ಕೂಡ ಇದರ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ಪೊಲೀಸರಿಗೆ ಮುಕ್ತವಾಗಿ ಕೆಲಸ ಮಾಡಲು ಹೇಳಿದ್ದೇವೆ, ನಾನು ಎಂದಿಗೂ ಯಾರ ಮೇಲೂ ಉತ್ತಡ ಹೇರಿಲ್ಲ. ಕರ್ನಾಟಕವನ್ನು ಡ್ರಗ್ಸ್ ಮುಕ್ತ ರಾಜ್ಯ ಮಾಡಲು ಹೊರಟಿದ್ದೇವೆ. ಆನೆಗೊಂದಿ ಭಾಗದಲ್ಲಿ ಡ್ರಗ್ಸ್ ತಡೆಯುವುದಕ್ಕೆ ಕ್ರಮ ಕೈಗೊಳ್ಳಲಾಗುವುದು ಮತ್ತು ಆನೆಗೊಂದಿ ಭಾಗದಲ್ಲಿ ಅವಶ್ಯಕತೆ ಇದ್ದರೆ, ಪೊಲೀಸ್ ಸ್ಟೆಷನ್ ಸ್ಥಾಪಿಸುತ್ತೇವೆ ಎಂದು ತಿಳಿಸಿದರು.