ಪೌರಾಡಳಿತ ಹಾಗೂ ಹಜ್ ಸಚಿವರಾದ ರಹೀಮ್ ಖಾನ್ ಜಿ ಅವರು ಜನವರಿ 16ರಂದು ಬೀದರ್ನಲ್ಲಿ ಎಸ್ಬಿಐ ಬ್ಯಾಂಕ್ ಎಟಿಎಂಗಳಿಗೆ ಸಾಗಿಸುತ್ತಿದ್ದ ಹಣ ದೋಚಿ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಗಂಭೀರವಾಗಿ ಗಾಯಗೊಂಡು ಹೈದರಾಬಾದ್ನ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿಬ್ಬಂದಿ ಶಿವಕುಮಾರ್ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಗುರುವಾರ ಬೆಳಗ್ಗೆ ಸುಮಾರು 10:00 ಗಂಟೆಗೆ ಬೆಂಗಳೂರಿನಿಂದ ಹೈದರಾಬಾದ್ಗೆ ಆಗಮಿಸಿದ ಅವರು ಶಿವಕುಮಾರ ಅವರ ಕುಟುಂಬ ಸದಸ್ಯರನ್ನು ಮತ್ತು ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವಕುಮಾರ್ ಅವರನ್ನು ಭೇಟಿ ಮಾಡಿ ಧೈರ್ಯ ತುಂಬಿದರು ಮತ್ತು ಆರ್ಥಿಕ ಸಹಾಯವನ್ನು ಸಚಿವ ರಹೀಮ್ ಖಾನ್ ಮಾಡಿದರು.
ಶಿವಕುಮಾರ್ ಈಗ ಅಪಾಯದಿಂದ ಪಾರಾಗಿದ್ದು, ಚಿಕಿತ್ಸಾ ವೆಚ್ಚದ ಬಗ್ಗೆ ಚಿಂತಿಸಬೇಡಿ ಎಂದು ಭರವಸೆ ನೀಡಿದ ಸಚಿವರು, ಶಿವಕುಮಾರ್ ಅವರಿಗೆ ಉತ್ತಮ ಚಿಕಿತ್ಸೆ ನೀಡುವಂತೆ ವೈದ್ಯರಲ್ಲಿ ವಿನಂತಿಸಿದರಲ್ಲದೆ ಅವರ ಆರೋಗ್ಯದ ಬಗ್ಗೆ ವಿವರವಾಗಿ ವಿಚಾರಿಸಿದರು.
ಗಾಯಾಳು ಶಿವಕುಮಾರ್ ಶೀಘ್ರ ಗುಣಮುಖರಾಗುವ ಭರವಸೆಯನ್ನು ವೈದ್ಯರು ನೀಡಿದ್ದಾರೆ. ದುರಂತಕ್ಕೆ ಕಾರಣರಾದ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕುಟುಂಬ ಸದಸ್ಯರಿಗೆ ಭರವಸೆ ನೀಡಿದರು.
ಗಾಯಗೊಂಡವರು ಮತ್ತು ಮೃತರ ಕುಟುಂಬಗಳಿಗೆ ಸಕಾಲದಲ್ಲಿ ನೆರವು ನೀಡಲು ಸರ್ಕಾರ ಬದ್ಧವಾಗಿದೆ ಎಂದೂ ಸಚಿವ ರಹೀಮ್ ಖಾನ್ ತಿಳಿಸಿದರು.
