Home » ಲೈವ್ ನ್ಯೂಸ್ » 2026ರ ಜೂನ್ ಒಳಗಡೆ ತಂಗಭದ್ರಾ ಡ್ಯಾಮಗೆ ಹೊಸ ಕ್ರಸ್ಟ್ ಗೇಟ್ ಅಳವಡಿಸುತ್ತೇವೆ: ಸಿಎಂ ಸಿದ್ದರಾಮಯ್ಯ

2026ರ ಜೂನ್ ಒಳಗಡೆ ತಂಗಭದ್ರಾ ಡ್ಯಾಮಗೆ ಹೊಸ ಕ್ರಸ್ಟ್ ಗೇಟ್ ಅಳವಡಿಸುತ್ತೇವೆ: ಸಿಎಂ ಸಿದ್ದರಾಮಯ್ಯ

Facebook
X
WhatsApp
Telegram

* ರೈತರಿಗೆ ಸಿಹಿ ಸುದ್ದಿ ನೀಡಿದ ಮುಖ್ಯಮಂತ್ರಿಗಳು
* ಬಸ್ ಸೌಕರ್ಯ ಕಲ್ಪಿಸಿದ್ದಕ್ಕೆ ಶಾಸಕ ಬಾದರ್ಲಿ ಅವರಿಗೆ      ಅಭಿನಂದನೆ
* ಶ್ರೀ ಅಂಬಾಮಠದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧ:ಸಿಎಂ
* ಅಂಬಾದೇವಿಯ ದರ್ಶನ ಪಡೆದಿರುವುದು ನನ್ನ ಪುಣ್ಯ:ಸಿಎಂ

ರಾಯಚೂರು.05.ಜನವರಿ.26: ಏನೇ ತೊಂದರೆಯಾದರೂ, ಎಷ್ಟೇ ಖರ್ಚಾದರು ಸಹ ತುಂಗಭದ್ರಾ ಡ್ಯಾಮಗೆ ಬರುವ ಜೂನ್ ಒಳಗಡೆ ಹೊಸ ಕ್ರಸ್ಟ್ ಗೇಟ್ ಅಳವಡಿಸಿ, ಮುಂದಿನ ಮುಂಗಾರು ಬೆಳೆಗೆ ನೀರು ಹರಿಸಿ ರೈತರಿಗೆ ನೀಡಿದ ಮಾತು ಉಳಿಸಿಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಹೇಳಿದರು.

ತಾಲೂಕಾಡಳಿತ, ತಾಲೂಕು ಪಂಚಾಯತ್ ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಅಂಬಾದೇವಿ ವ್ಯವಸ್ಥಾಪನಾ ಸಮಿತಿಯ ಆಶ್ರಯದಲ್ಲಿ ಸಿಂಧನೂರ ತಾಲೂಕಿನ ಅಂಬಾಮಠದ ಆವರಣದಲ್ಲಿ ಜನವರಿ 3ರಂದು ನಡೆದ ಅಂಬಾದೇವಿ ಮಹಾರಥೋತ್ಸವ ಮತ್ತು ಜಂಬೂ ಸವಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ ಮುಖ್ಯಮಂತ್ರಿಗಳು, 431 ಕೋಟಿ ರೂ ವೆಚ್ಚದಲ್ಲಿ ಪಾಪಯ್ಯ ಟನೇಲ್ ಕಾರ್ಯ ಮತ್ತು 33 ಗೇಟ್ ಅಳವಡಿಸುವ ಕಾರ್ಯ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಸಿಂಧನೂರ ಕ್ಷೇತ್ರದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ನೀಡಿದ ಅನುದಾನವನ್ನು ಶಾಸಕರಾದ ಹಂಪನಗೌಡ ಬಾದರ್ಲಿ ಅವರು ಸದ್ಬಳಕೆ ಮಾಡುತ್ತಿರುವುದು ಸಂತಷದ ಸಂಗತಿಯಾಗಿದೆ. ಸಿಂಧನೂರ ಕ್ಷೇತ್ರದ ಕುಡಿಯುವ ನೀರಿನ ಕೆರೆಗಳ ನಿರ್ಮಾಣ ಅಭಿವೃದ್ಧಿಗೆ 13.42 ಕೋಟಿ ರೂ., ಸಾಲಗುಂದ ಏತ ನೀರಾವರಿ ಯೋಜನೆಗೆ 71 ಕೋಟಿ ರೂ., ಒಳಬಳ್ಳಾರಿ ಏತ ನೀರಾವರಿ ಯೋಜನೆಗೆ 43.10 ಕೋಟಿ ರೂ., ಮುಳ್ಳೂರ ಗ್ರಾಮದ ಹತ್ತಿರ ಬ್ರಿಜ್ ಕಂ ಬ್ಯಾರೇಜ್ ಯೋಜನೆಗೆ 29 ಕೋಟಿ ರೂ ವೆಚ್ಚ ಮಾಡಿ ಈ ಭಾಗದ ಅನ್ನದಾತರಿಗೆ ಅನುಕೂಲ ಕಲ್ಪಿಸುತ್ತಿದ್ದೇವೆ ಎಂದು ತಿಳಿಸಿದರು.

42 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರು ಹರಿಸುವ ಪ್ರಯತ್ನದಲ್ಲಿ ಈಗಾಗಲೇ 30 ಲಕ್ಷ ಪ್ರದೇಶಕ್ಕೆ ನೀರು ಕೊಟ್ಟಿದ್ದೇವೆ. ಉಳಿದ 12 ಲಕ್ಷ ಹೆಕ್ಟೇರ ಪ್ರದೇಶಕ್ಕೆ ಸಹ ನೀರು ಹರಿಸುವ ಕಾರ್ಯ ನಡೆಯುತ್ತಿದೆ ಎಂದರು.

ರಾಜ್ಯ ಸರ್ಕಾರದ ಖಜಾನೆಯಲ್ಲಿ ಹಣ ಇಲ್ಲ ಎನ್ನುವುದು ಅಪ್ಪಟ ಸುಳ್ಳು. ನಾವು ಹಿಂದೆ ಬಿದ್ದಿಲ್ಲ. ಅಭಿವೃದ್ಧಿ ಕಾರ್ಯಗಳು ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಕಾರ್ಯ ಎರಡೂ ನಡೆಯುತ್ತಿವೆ. ಅನ್ನಭಾಗ್ಯ, ಗೃಹ ಲಕ್ಷ್ಮಿ, ಗೃಹ ಜ್ಯೋತಿ, ಶಕ್ತಿ, ಯುವನಿಧಿ ಪಂಚ ಗ್ಯಾರಂಟಿ ಯೋಜನೆಗಳಿಗೆ ಇದುವರೆಗೆ ರಾಜ್ಯ ಸರ್ಕಾರವು 1,12,000 ಕೋಟಿ ರೂ ಖರ್ಚು ಮಾಡಿದ್ದೇವೆ. ಪ್ರಸಕ್ತ 2026ನೇ ಸಾಲಿನಲ್ಲೂ ಸಹ ಮತ್ತೆ 52 ಸಾವಿರ ಕೋಟಿ ರೂ ಖರ್ಚು ಮಾಡುತ್ತಿದ್ದೇವೆ. ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ ಬಳಿಕ ತಲಾ ಆದಾಯದಲ್ಲಿ ಕರ್ನಾಟಕ ರಾಜ್ಯವು ಇಡಿ ದೇಶದಲ್ಲೇ ನಂಬರ್ 1 ಸ್ಥಾನದಲ್ಲಿದೆ. ನಾವು ನುಡಿದಂತೆ ನಡೆಯುತ್ತೇವೆ. ಹೇಳಿದಂತೆ ಕೆಲಸ ಮಾಡತ್ತೇವೆ. ರಾಯಚೂರು ಜಿಲ್ಲೆಯಲ್ಲಿ ಕೊನೆಯ ಭಾಗದ ರೈತರಿಗೆ ನೀರು ಕೊಡಲು ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದರು.

ರಾಜಸ್ಥಾನ ರಾಜ್ಯ ಬಿಟ್ಟರೆ ಕರ್ನಾಟಕ ರಾಜ್ಯವು ಹೆಚ್ಚು ಒಣಭೂಮಿ ಇರುವ ಎರಡನೇ ರಾಜ್ಯವಾಗಿದೆ. ಇದು ನಮ್ಮ ಗಮನಕ್ಕಿದೆ. ಈ ಕಾರಣದಿಂದಾಗಿ ಸಿಂಧನೂರ, ರಾಯಚೂರು ಸೇರಿದಂತೆ ಎಲ್ಲಾ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಒತ್ತು ನೀಡಿ ನೀರಾವರಿ ಪ್ರದೇಶದ ವಿಸ್ತೀರ್ಣಕ್ಕೆ, ಹಸೀರಿಕರಣಕ್ಕೆ ಒತ್ತು ಕೊಡುವ ಉದ್ದೇಶ ಹೊಂದಿದ್ದೇವೆ ಹೊಂದಿದ್ದೇವೆ ಎಂದರು.

ಕೃಷ್ಣ ಮೇಲ್ಡಂಡೆ ಮೂರನೇ ಹಂತದ ಯೋಜನೆಯ ಅನುಷ್ಠಾನಕ್ಕೆ ಕೇಂದ್ರ ಸರ್ಕಾರವು ಇದುವರೆಗೆ ಗೆಜೆಟ್ ನೊಟಿಪಿಕೇಶನ್ ಮಾಡುತ್ತಿಲ್ಲ. 172 ಟಿಎಂಸಿ ನೀರು ಬಳಸಿಕೊಳ್ಳಲು ಯಾವುದೇ ಅಭ್ಯಂತರ ಇಲ್ಲ ಎಂಬುದಾಗಿ
2013ರಲ್ಲಿಯೇ ನ್ಯಾಯ ನಮ್ಮ ಪರವಾಗಿದೆ ಎಂದು ತಿಳಿಸಿದರು.

ಬಾಕಿ ಅನುದಾನ ಬಿಡುಗಡೆ: ಶ್ರೀ ಸೋಮಲಾಪುರದ ಅಂಬಾಮಠದ ದೇವಸ್ಥಾನಕ್ಕೆ ನಿಗದಿಪಡಿಸಿದ 6.30 ಕೋಟಿ ರೂ ಪೈಕಿ ಇದುವರೆಗೆ 2 ಕೋಟಿ ರೂ ವೆಚ್ಚ ಮಾಡಲಾಗಿದೆ. ಬಾಕಿ ಅನುದಾನವನ್ನು ಸಹ ಬಿಡುಗಡೆ ಮಾಡಿ ಅಂಬಾಮಠದ ಸಮಗ್ರ ಅಭಿವೃದ್ಧಿಗೆ ನಾವು ಬದ್ದರಾಗಿದ್ದೇವೆ ಎಂದು ತಿಳಿಸಿದರು.

ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸ್ವರೂಪವನ್ನು ಕೇಂದ್ರ ಸರ್ಕಾರವು ಸಂಪೂರ್ಣ ಬದಲಿಸಿ, ಜನ ಸಾಮಾನ್ಯರಿಗೆ ಅನ್ಯಾಯ ಮಾಡುತ್ತಿದೆ ಎಂದು ಮುಖ್ಯಮಂತ್ರಿಗಳು ಅಸಮಧಾನ ವ್ಯಕ್ತಪಡಿಸಿದರು.

ಶಾಸಕರಿಗೆ ಅಭಿನಂದನೆ: ಸಿಂಧನೂರು ತಾಲೂಕಿನ ಸಮಸ್ತ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಯೋಚಿಸಿ, ಕೆಕೆಆರ್ ಡಿಬಿಯಿಂದ 14 ಬಸ್ ಗಳ ಸೌಕರ್ಯ ಕಲ್ಪಿಸುವಲ್ಲಿ ಶ್ರಮಿಸಿದ ಸಿಂಧನೂರ ಶಾಸಕರಾದ ಹಂಪನಗೌಡ ಬಾದರ್ಲಿ ಅವರಿಗೆ ವಿದ್ಯಾರ್ಥಿಗಳ ಪರವಾಗಿ ಅಭಿನಂದನೆ ತಿಳಿಸುತ್ತೇನೆ ಎಂದು ಮುಖ್ಯಮಂತ್ರಿಗಳು ಸಂತಷ ವ್ಯಕ್ತಪಡಿಸಿದರು.

ಅಂಬಾದೇವಿ ದರ್ಶನದಿಂದ ಸಂತಷ: ಸೋಮಲಾಪುರದ ಸಿದ್ಧಪರ್ವತಕ್ಕೆ ಆಗಮಿಸಿ ಶ್ರೀ ಅಂಬಾದೇವಿ ಮಹೋತ್ಸವ ಮತ್ತು ಜಂಬೂ ಸವಾರಿಗೆ ಸಂತೋಷದಿoದ ಚಾಲನೆ ನೀಡಿದ್ದೇನೆ. ಶ್ರೀ ಅಂಬಾದೇವಿಯ ದರ್ಶನ ಪಡೆದಿರುವುದು ನನ್ನ ಪುಣ್ಯ ಎಂದೇ ಭಾವಿಸಿದ್ದೇನೆ ಎಂದು ತಿಳಿಸಿದ ಮುಖ್ಯಮಂತ್ರಿಗಳು, ನೆರೆದಿದ್ದ ಎಲ್ಲ ಜನತೆಗೆ ಎಲ್ಲ ಭಕ್ತರಿಗೆ ತಾಯಿ ಅಂಬಾದೇವಿ ಒಳ್ಳೆಯದು ಮಾಡಲಿ ಎಂದು ತಾವು ಪ್ರಾರ್ಥಿಸುವುದಾಗಿ ತಿಳಿಸಿದರು.

ಕರ್ನಾಟಕ ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ಶಾಸಕರಾದ ಹಂಪನಗೌಡ ಬಾದರ್ಲಿ ಅವರು ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದಲ್ಲಿ ಸಚಿವರಾದ ಸತೀಶ ಜಾರಕಿಹೊಳಿ, ರಾಮಲಿಂಗಾರೆಡ್ಡಿ, ಡಾ.ಶರಣಪ್ರಕಾಶ ಪಾಟೀಲ, ಶಿವರಾಜ ತಂಗಡಗಿ, ಸಾರಿಗೆ ಸಂಸ್ಥೆಯ ಅಧ್ಯಕ್ಷರಾದ ಅರುಣಕುಮಾರ ಪಾಟೀಲ, ಸಂಸದರಾದ ರಾಜಶೇಖರ ಹಿಟ್ನಾಳ, ಶಾಸಕರಾದ ಬಸನಗೌಡ ತುರವಿಹಾಳ, ಬಸನಗೌಡ ದದ್ದಲ್, ಬಿ.ಎಂ ನಾಗರಾಜ, ವಿಧಾನ ಪರಿಷತ್ ಶಾಸಕರಾದ ಎ ವಸಂತಕುಮಾರ, ಬಸವನಗೌಡ ಬಾದರ್ಲಿ, ಪ್ರಾದೇಶಿಕ ಆಯುಕ್ತರಾದ ಜಹೀರಾ ನಸೀಮ್, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ., ಎಸ್ಪಿ ಅರುಣಾಂಕ್ಷು ಗಿರಿ, ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಬಿ ಸುಶೀಲಾ, ಸಹಾಯಕ ಆಯುಕ್ತರಾದ ಬಸವಣೆಪ್ಪ ಕಲಶೆಟ್ಟಿ, ಸಿಂಧನೂರ ತಹಸೀಲ್ದಾರ ಅರುಣ ದೇಸಾಯಿ, ತಾಲೂಕು ಪಂಚಾಯತ್ ಇಓ ಚಂದ್ರಶೇಖರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ವೆಂಕನಗೌಡ ಬಾದರ್ಲಿ, ಶ್ರೀ ಅಂಬಾದೇವಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರಂಗನಗೌಡ, ಸೋಮಲಾಪುರ ಗ್ರಾಮ ಪಂಚಾಯತಿ ಅಧ್ಯಕ್ಷೆ ರೇಣುಕಮ್ಮ ಹುಸೇನಪ್ಪ ಮನ್ನಾಪುರ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಎಂ ದೊಡ್ಡಬಸವರಾಜ, ಟಿಎಪಿಸಿಎಂಎಸ್ ಅಧ್ಯಕ್ಷ ಶರಣಪ್ಪ ರಡ್ಡೇರ್, ಸಿಂಧನೂರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಅನಿಲಕುಮಾರ ವೈ ಹಾಗೂ ಇನ್ನೀತರ ಗಣ್ಯರು ಉಪಸ್ಥಿತರಿದ್ದರು.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology