ಕಲ್ಯಾಣ ಕರ್ನಾಟಕ ಭಾಗದ ಹೊಸ ಕಂದಾಯ ತಾಲ್ಲೂಕುಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆರಂಭಿಸುವಂತೆಯೇ ಗುರುಮಠಕಲ್ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಶಾಲಾ ಮತ್ತು ಸಾಕ್ಷರತಾ ಶಿಕ್ಷಣ ಇಲಾಖೆ ಸಚಿವ ಮಧು ಬಂಗಾರಪ್ಪ ಅವರಿಗೆ ಭೇಟಿ.
ಬೆಂಗಳೂರಿನಲ್ಲಿ ಶನಿವಾರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿರುವ ಶಾಸಕರು, ಕಲ್ಯಾಣ ಭಾಗದ ಶೈಕ್ಷಣಿಕ ಗುಣಮಟ್ಟ ಕುಸಿಯಲು ಹಲವಾರು ಕಾರಣಗಳಲ್ಲಿ ಪ್ರಮುಖವಾಗಿ ಶಿಕ್ಷಕರ ಕೊರತೆಯೂ ಒಂದು.
ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಪ್ರೌಢ ಶಾಲೆಗಳಿಗೆ ಮಂಜೂರು ಆಗಿರುವ 11,793 ಹುದ್ದೆಗಳಲ್ಲಿ 4,107 ಹುದ್ದೆಗಳು ಖಾಲಿ ಇವೆ. ಅಲ್ಲದೆ, ಈ ಏಳು ಜಿಲ್ಲೆಗಳ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮಂಜುರಾಗಿರುವ 45,431 ಹುದ್ದೆಗಳಲ್ಲಿ 17,274 ಹುದ್ದೆಗಳು ಅಂದರೇ ಶೇ 40 ರಷ್ಟು ಹುದ್ದೆಗಳು ಖಾಲಿ ಇವೆ. ಯಾದಗಿರಿ ಜಿಲ್ಲೆಯಲ್ಲಿಯೇ ಶೇ 50ರಷ್ಟು ಹುದ್ದೆಗಳು ಖಾಲಿ ಇವೆ. ಹೀಗಾದರೇ ಗುಣಮಟ್ಟದ ಶಿಕ್ಷಣ ಮತ್ತು ಉತ್ತಮ ಫಲಿತಾಂಶ ನಿರೀಕ್ಷಿಸುವುದು ಮರಳು ಗಾಡಿನಲ್ಲಿ ನೀರು ಬಯಸಿದಂತೆಯೇ ಸರಿ ಎಂದು ಅವರು ಮನವಿಯಲ್ಲಿ ವಿವರಿಸಿದ್ದಾರೆ.
ಈ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಇಲಾಖೆ ಹೆಚ್ಚುವರಿ ಆಯುಕ್ತರು ಕೆಕೆಆರ್ಡಿಬಿಯಿಂದ ವಿವಿಧ ಕಾರ್ಯಕ್ರಮಗಳು ಹಮ್ಮಿಕೊಳ್ಳುವ ಸುಧಾರಣೆಗೆ ಯತ್ನಿಸಿದ್ದಾರೆ. ಈ ಭಾಗವಾಗಿ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಲ್ಲಿ ಬಡ್ತಿಗಾಗಿ ಮೀಸಲಿರುವ ಹುದ್ದೆಗಳನ್ನು ಅರ್ಹ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಂದ ಭರ್ತಿ ಮಾಡಲು ವಿಭಾಗದ ಎಲ್ಲ ಉಪನಿರ್ದೇಶಕರಿಗೆ ಪತ್ರ ಬರೆದು ಕ್ರಮವಹಿಸಲು ಸೂಚಿಸಿದ್ದರು. ಆದರೆ, ಇಲಾಖೆ ಆಯುಕ್ತರು ಕಳೆದ ಏ.16 ರಂದು ಬರೆದ ಪತ್ರದಲ್ಲಿ ಬಡ್ತಿ ವಿಷಯ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇರುವುದರಿಂದ ತಡೆಹಿಡಿಯುವಂತೆಯೇ ಹೆಚ್ಚುವರಿ ಆಯುಕ್ತರಿಗೆ ನಿರ್ದೇಶಿಸಿದ್ದಾರೆ. ಕೆಕೆ ಭಾಗದಲ್ಲಿ 371(ಜೆ) ಕಲಂ ಜಾರಿಯಲ್ಲಿರುವುದರಿಂದ ಇದು ವಿಶೇಷ ಪ್ರಕರಣವೆಂದು ಭಾವಿಸಿ ಬಡ್ತಿ ಪ್ರಕ್ರಿಯೆಯನ್ನು ಮುಂದುವರೆಸಲು ಅನುಮತಿ ನೀಡುವಂತೆಯೇ ಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕೆಂದು ಶಾಸಕರು ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ಸುದೀರ್ಘವಾಗಿ ವಿವರಿಸಿದ್ದಾರೆ.
ನೇರ ನೇಮಕಾತಿ ಮೂಲಕ ಭರ್ತಿ ಮಾಡಬೇಕಾದ 3,313 ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ಕೋರಿ ಈಗಾಗಲೇ ಹೆಚ್ಚುವರಿ ಆಯುಕ್ತರು ಕಳೆದ ಮಾ.14 ರಂದು ಸರ್ಕಾರಕ್ಕೆ ಪತ್ರ ಬರೆದಿದ್ದು, ಅದನ್ನ ಇತ್ಯರ್ಥಗೊಳಿಸಬೇಕೆಂದು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡುವಂತೆಯೇ ಸಚಿವರನ್ನು ಶಾಸಕ ಕಂದಕೂರು ಒತ್ತಾಯಿಸಿದ್ದಾರೆ.
ಶೈಕ್ಣಣಿಕ ಕಾರ್ಯ ಚಟುವಟಿಕೆಗಳು ಸರಳವಾಗಿ ಮತ್ತು ತ್ವರಿತ ಗತಿಯಲ್ಲಿ ನಡೆಯಲು ಗುರುಮಠಕಲ್ ಹೊಸ ಕಂದಾಯ ತಾಲ್ಲೂಕಿನಲ್ಲಿ ನೂತನ ಬಿಇಒ ಕಚೇರಿ ಪ್ರಾರಂಭಿಸಲು ಸಂಬಂಧಪಟ್ಟ ಉನ್ನತ ಅಧಿಕಾರಿಗಳಿಗೆ ಸೂಚಿಸಬೇಕೆಂದು ಶಾಸಕರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
‘ಕೆಕೆ ಭಾಗದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಒತ್ತು ನೀಡಲಿ’ ಜಿಲ್ಲೆಯಲ್ಲಿ ಕಳೆದ ಅನೇಕ ವರ್ಷಗಳಿಂದ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ. ಇದಕ್ಕೆ ಹಲವಾರು ಕಾರಣಗಳು ಇವೆ. ಇದರಿಂದಾಗಿ ಫಲಿತಾಂಶದಲ್ಲಿ ನಾವು ಕೊನೆ ಸ್ಥಾನದಲ್ಲಿ ಇದ್ದೇವೆ. ಇದಕ್ಕೆ ನಿಖರ ಕಾರಣ ಹುಡುಕಿ ಅಗತ್ಯ ಸೌಲಭ್ಯಗಳು ನೀಡಬೇಕೆಂಬ ನಿಟ್ಟಿನಲ್ಲಿ ಶಿಕ್ಷಣ ಸಚಿವರಿಗೆ ಭೇಟಿ ಮಾಡಿ ಮನವಿ ಸಲ್ಲಿಸಿರುವೆ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು ಹೇಳಿದ್ದಾರೆ.