ಔರಾದ.19.ಜನವರಿ.25:- ಸಮಾನ ಮನಸ್ಕರು, ಅನ್ಯಾಯ, ಅವ್ಯವಸ್ಥೆಯ ವಿರುದ್ಧ ಧ್ವನಿ ಎತ್ತುವವರು ಒಗ್ಗಟ್ಟಾಗಿ ಸಮ ಸಮಾಜ ನಿರ್ಮಾಣಕ್ಕಾಗಿ ಹೋರಾಟ ಮಾಡುತ್ತಿದ್ದೇವೆ’ ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಹೇಳಿದರು.
ಪಟ್ಟಣದ ಕನ್ನಡ ಭವನದಲ್ಲಿ ಭಾನುವಾರ ಸಮಾನ ಮನಸ್ಕರ ಜೊತೆಗಿನ ಸಂವಾದ ಕಾರ್ಯಕ್ರದಲ್ಲಿ ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್, ಪೆರಿಯಾರ್ ಹಾಗೂ ಕಾನ್ಸಿರಾಮ್ ಬಿಟ್ಟರೆ ಸಮ ಸಮಾಜ ಕಟ್ಟಲು ಯಾರೂ ಮುಂದೆ ಬರಲಿಲ್ಲ. ರಾಜಕಾರಣಿಗಳು ಅಧಿಕಾರದಾಸೆ ಇಟ್ಟುಕೊಂಡು ಬರುತ್ತಾರೆ. ಸಮ ಸಮಾಜ ಕಟ್ಟುವ ಇಚ್ಛಾಶಕ್ತಿ ಅವರಲ್ಲಿಲ್ಲ. ಪರ್ಯಾಯ ರಾಜಕಾರಣದಿಂದ ಮಾತ್ರ ಸಮ ಸಮಾಜ ಕಟ್ಟಲು ಸಾಧ್ಯ’ ಎಂದರು.
‘ರಾಜ್ಯದ ವಿವಿಧ ಮತಕ್ಷೇತ್ರಗಳಲ್ಲಿ ಜನಪರ ಸಂಘಟನೆಗಳ ಪ್ರಮುಖರೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಿದ್ದೇವೆ. ನಮಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕ, ಮುಖ್ಯಮಂತ್ರಿ ಆಗಬೇಕೆಂಬ ಕನಸು ಇಲ್ಲ. ಆದರೆ ಸಿದ್ಧಾಂತ ಮುನ್ನಡೆಸುವ ಜವಾಬ್ದಾರಿ ಮಾತ್ರ ನಮ್ಮದು’ ಎಂದು ಹೇಳಿದರು.
‘ಇಂದಿನ ರಾಜಕಾರಣ ಅಧಿಕಾರ ಪಡೆಯುವ ಏಕೈಕ ಗುರಿ ಹೊಂದಿದೆ. ಹೀಗಾಗಿ ಪಕ್ಷಗಳು ಜಾತಿಗಳೊಂದಿಗೆ ಕೈಜೋಡಿಸಿ ಓಲೈಸುತ್ತಿವೆ. ದಲಿತ, ಒಬಿಸಿ, ಆದಿವಾಸಿ ಹಾಗೂ ಬಹುಜನರಿಗೆ ಆಗಿರುವ ಅನ್ಯಾಯ ಸರಿಪಡಿಸುವ ಆಲೋಚನೆ ಇಂದಿನ ಪಕ್ಷಗಳಿಗೆ ಇಲ್ಲ. ಅಧಿಕಾರ ಹಿಡಿಯಲು ಏನು ಬೇಕಾದರೂ ಮಾಡುತ್ತಾರೆ. ಅಧಿಕಾರ ಸಿಕ್ಕ ನಂತರ ಏನು ಮಾಡಬೇಕು ಎಂಬುದನ್ನು ಮರೆಯುತ್ತಾರೆ. ಹೀಗಾಗಿ ರಾಜ್ಯಕ್ಕೆ ಬುದ್ಧ, ಬಸವ, ಅಂಬೇಡ್ಕರ್, ಪೆರಿಯಾರ್ ಹಾಗೂ ಕುವೆಂಪು ಅವರ ಆದರ್ಶ ಅಗತ್ಯವಿದೆ. ಈ ನಿಟ್ಟಿನಲ್ಲಿ ನಾವು ಹೋರಾಡುತ್ತಿದ್ದೇವೆ’ ಎಂದು ಹೇಳಿದರು.
ಸಂವಾದದಲ್ಲಿ ಸಂಯೋಜಕ ಸುಭಾಷ ಲಾಧಾ, ಸುಧಾಕರ್ ಕೊಳ್ಳೂರ್, ಗಣಪತಿ ವಾಸುದೇವ, ಶಿವು ಕಾಂಬಳೆ, ನಂದಾದೀಪ ಬೋರಾಳೆ, ಮನ್ಮಥ ಡೋಳೆ, ಕಪಿಲ್ ಗೋಡಬೋಲೆ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.