ಬೆಂಗಳೂರು.17.ಮಾರ್ಚ್.26: ಉನ್ನತ ಶಿಕ್ಷಣ ಇಲಾಖೆ ರಾಜ್ಯಾದ್ಯಂತ ಬಿ.ಎಡ್ (B.ed) ಕಾಲೇಜುಗಳ ಶುಲ್ಕ ಪರಿಷ್ಕರಣೆ ಮಾಡಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್ ಮಾಹಿತಿ ನೀಡಿದರು.
ಇಂದು ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ನ ಮಧು ಜಿ ಮಾದೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದ ಬಿ.ಎಡ್ ಕಾಲೇಜುಗಳ ಶುಲ್ಕ ಪರಿಷ್ಕರಣೆ ಕ್ರಮ ತೆಗೆದುಕೊಳ್ತೀವಿ. ಅನೇಕ ವರ್ಷಗಳಿಂದ ಬಿ.ಎಡ್ ಕಾಲೇಜುಗಳ ಶುಲ್ಕ ಪರಿಷ್ಕರಣೆ ಮಾಡಿಲ್ಲ.
ಬೇರೆ ಬೇರೆ ರಾಜ್ಯದಲ್ಲಿ ಬಿ.ಎಡ್ ಕಾಲೇಜುಗಳ ಶುಲ್ಕ ಜಾಸ್ತಿ ಇದೆ. ಹೀಗಾಗಿ ರಾಜ್ಯದಲ್ಲೂ ಶುಲ್ಕ ಪರಿಷ್ಕರಣೆಗೆ ಸರ್ಕಾರ ನಿರ್ಧರಿಸಿದೆ ಎಂದಿದ್ದಾರೆ.
ಶುಲ್ಕ ಪರಿಷ್ಕರಣೆ ಸಂಬಂಧ ಉನ್ನತ ಶಿಕ್ಷಣ ಇಲಾಖೆ 6 ಸದಸ್ಯರನ್ನೊಳಗೊಂಡ ಸಮಿತಿ ರಚನೆ ಮಾಡಲಾಗಿದೆ. ವರದಿ ಬಂದ ಕೂಡಲೇ ಬಿ.ಎಡ್ ಕಾಲೇಜುಗಳ ಪರಿಷ್ಕರಣೆ ಮಾಡ್ತೀವಿ. ಈ ಶೈಕ್ಷಣಿಕ ವರ್ಷವೇ ಶುಲ್ಕ ಪರಿಷ್ಕರಣೆ ಕ್ರಮ ತೆಗೆದುಕೊಳ್ತೀವಿ ಎಂದು ಹೇಳಿದ್ದಾರೆ.
ಇದೇ ವೇಳೆ ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ರಮೇಶ್ ಬಾಬು ಪ್ರಶ್ನೆ ಕೇಳಿದ್ರು. ಉನ್ನತ ಶಿಕ್ಷಣ ಇಲಾಖೆಯಲ್ಲಿ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ (UUCMS) ಉತ್ತಮ ವ್ಯವಸ್ಥೆ. ಆದರೆ ಎಲ್ಲಾ ವಿವಿಯಲ್ಲಿ ಏಕರೂಪ ವೇಳಾಪಟ್ಟಿ ಜಾರಿ ಆಗುತ್ತಿಲ್ಲ. ರಾಜ್ಯದ ಎಲ್ಲಾ ವಿವಿಗಳು ಏಕರೂಪದ ವೇಳಾಪಟ್ಟಿಯಂತೆ ನಡೆಯಲು ಕ್ರಮ ಆಗಬೇಕು. ಖಾಸಗಿ ವಿವಿಗಳನ್ನು ಸರ್ಕಾರ ಏಕರೂಪ ವೇಳಾಪಟ್ಟಿ ಅಡಿ ತರಬೇಕು ಅಂತ ಒತ್ತಾಯಿಸಿದ್ದಾರೆ.
ಇದಕ್ಕೆ ಸಚಿವ ಡಾ.ಸುಧಾಕರ್ ಅವರು, 2021ರಲ್ಲಿ UUCMS ಜಾರಿ ಮಾಡಿದ್ದೇವೆ. ಇದರ ಅಡಿ ಎಲ್ಲಾ ವಿವಿಗೂ ಏಕರೂಪದ ವೇಳಾಪಟ್ಟಿ ಮಾಡುತ್ತಿದ್ದೇವೆ. ಕೋವಿಡ್ ಸಮಯದಲ್ಲಿ ಒಂದೊಂದು ವಿವಿಯಲ್ಲಿ ಒಂದೊಂದು ವ್ಯವಸ್ಥೆ ಇತ್ತು. ಹೀಗಾಗಿ UUCMS ವ್ಯವಸ್ಥೆ ಜಾರಿ ಮಾಡಿದ್ದೇವೆ. ಈಗಾಗಲೇ ಮುಂದಿನ 5 ವರ್ಷಗಳಿಗೆ ಏಕರೂಪ ವೇಳಾಪಟ್ಟಿ ಮಾಡಿದ್ದೇವೆ. ಎಲ್ಲಾ ವಿವಿಯೂ ಇದೇ ವೇಳಾಪಟ್ಟಿ ಅಡಿ ಕೆಲಸ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ UUCMS 2.0 ಜಾರಿ ಮಾಡುತ್ತಿದ್ದೇವೆ. ಇದರಲ್ಲಿ ಡೀಮ್ಡ್ ವಿವಿಗಳು, ಖಾಸಗಿ ವಿವಿಗಳಿಗೆ ಏಕರೂಪದ ವೇಳಾಪಟ್ಟಿ ತರುತ್ತೇವೆ. ರಾಜ್ಯಪಾಲರ ನೇತೃತ್ವದಲ್ಲಿ ವಿಸಿಗಳ ಸಮ್ಮೇಳನ ಮಾಡಿದೆವು. ಅಲ್ಲಿ ಸಮಗ್ರವಾಗಿ ಚರ್ಚೆ ಆಗಿದೆ. ಕೇಂದ್ರ SSC ಹುದ್ದೆಯಲ್ಲಿ ನಮ್ಮ ಮಕ್ಕಳಿಗೆ ಕೆಲಸ ಸಿಕ್ತಿಲ್ಲ. ಹೀಗಾಗಿ ಹೊಸ ಪಠ್ಯಕ್ಕೆ ಸಮಿತಿ ರಚನೆಗೆ ನಿರ್ಧಾರ ಮಾಡಲಾಗಿದೆ. UUCMS ವ್ಯವಸ್ಥೆಗೆ ಶಾಸಕರನ್ನ, ಸದಸ್ಯರನ್ನ ಮಾಡೋ ಬಗ್ಗೆ ಪರಿಶೀಲನೆ ಮಾಡುವುದಾಗಿ ಹೇಳಿದ್ದಾರೆ.






Any questions related to ಶೀಘ್ರವೇ ರಾಜ್ಯದ ಬಿ.ಎಡ್ ಕಾಲೇಜುಗಳ ಶುಲ್ಕ ಹೆಚ್ಚಳ: ಡಾ. ಸುಧಾಕರ್?