09/06/2025 7:07 PM

Translate Language

Home » ಲೈವ್ ನ್ಯೂಸ್ » ವೈಚಾರಿಕ ಗಂಗೆ ಎಂದಿಗೂ ಕಲುಷಿತವಾಗುವುದಿಲ್ಲ’ ಎಂದು ಚಿಂತಕ ಅರವಿಂದ ಮಾಲಗತ್ತಿ.!

ವೈಚಾರಿಕ ಗಂಗೆ ಎಂದಿಗೂ ಕಲುಷಿತವಾಗುವುದಿಲ್ಲ’ ಎಂದು ಚಿಂತಕ ಅರವಿಂದ ಮಾಲಗತ್ತಿ.!

Facebook
X
WhatsApp
Telegram

ಬೆಂಗಳೂರು.16.ಫೆ.25:- ಈಗ ನೀವು ಅಂಬೇಡ್ಕರ್‌ ಚಿಂತನೆಯ ಗಂಗೆಯಲ್ಲಿ ಮೀಯಿರಿ. ವೈಚಾರಿಕ ಗಂಗೆ ಎಂದಿಗೂ ಕಲುಷಿತವಾಗುವುದಿಲ್ಲ’ ಎಂದು ಚಿಂತಕ ಅರವಿಂದ ಮಾಲಗತ್ತಿ ತಿಳಿಸಿದರು.

ಭಾರತೀಯ ವಿದ್ಯಾರ್ಥಿ ಸಂಘ ಭಾನುವಾರ ಹಮ್ಮಿಕೊಂಡಿದ್ದ ಬಿವಿಎಸ್‌ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಮಮಂದಿರ ಉದ್ಘಾಟನೆಯಾದಾಗ ಭಾರತಕ್ಕೆ ಸ್ವಾತಂತ್ರ್ಯ ಬಂತು ಎಂದು ಕೆಲವರು ಹೇಳುತ್ತಾರೆ. ಅಂಬೇಡ್ಕರ್‌ ಬದುಕು ಮತ್ತು ಬರಹಗಳ ಸಂಪುಟವನ್ನು ಮಹಾರಾಷ್ಟ್ರ ಸರ್ಕಾರ ಮೊದಲ ಬಾರಿಗೆ ಪ್ರಕಟಿಸಿದಾಗ ಭಾರತ ಬೆಳಗಿತು ಎಂದು ಹೇಳಿದರು.

1970ರ ದಶಕದಲ್ಲಿ ಡಿಎಸ್‌ಎಸ್‌ ಮುಕ್ತ ವಿಶ್ವವಿದ್ಯಾಲಯದಂತೆ ಕೆಲಸ ಮಾಡಿತ್ತು. ಆಗ ರಾಜ್ಯದಲ್ಲಿದ್ದ 37 ವಿಶ್ವವಿದ್ಯಾಲಯಗಳು ಬೋಧನೆ ಮಾಡಲು ಆಗದ್ದನ್ನು ಡಿಎಸ್‌ಎಸ್‌ ಕಲಿಸಿಕೊಟ್ಟಿತ್ತು. 2000ನೇ ಇಸವಿಯಲ್ಲಿ ಹುಟ್ಟಿಕೊಂಡ ಬಿವಿಎಸ್‌ ಚಿಂತನೆಯ ಪಥವನ್ನೇ ಬದಲಾಯಿಸಿಬಿಟ್ಟಿತು ಎಂದು ಎಂದು ವಿಶ್ಲೇಷಿಸಿದರು.

ಕಾರ್ಲ್‌ಮಾರ್ಕ್ಸ್‌, ಮಹಾತ್ಮ ಗಾಂಧೀಜಿ, ರಾಮಮನೋಹರ ಲೋಹಿಯಾ ಮತ್ತು ಅಂಬೇಡ್ಕರ್‌ ಈ ನಾಲ್ವರ ಚಿಂತನೆಗಳನ್ನು ಡಿಎಸ್‌ಎಸ್‌ ರಥದ ನಾಲ್ಕು ಗಾಲಿಗಳಂತೆ ಇಟ್ಟುಕೊಂಡಿತ್ತು. ಬಿವಿಎಸ್‌ ಈ ಕ್ರಮವನ್ನೇ ಹೊಡೆದುಹಾಕಿತು.

ಅಂಬೇಡ್ಕರ್‌ ಅವರನ್ನೇ ಪ್ರಧಾನವಾಗಿ ಇಟ್ಟುಕೊಂಡು ಬುದ್ಧ, ಬಸವಣ್ಣ, ಫುಲೆ ದಂಪತಿ, ಶಾಹು ಮಹಾರಾಜ, ನಾಲ್ವಡಿ ಕೃಷ್ಣರಾಜ ಒಡೆಯರ್‌ ಇನ್ನಿತರ ಸಮಾಜ ಸುಧಾರಕರು ಮುನ್ನೆಲೆಗೆ ಬಂದರು ಎಂದು ತಿಳಿಸಿದರು.

ಸಿದ್ಧಾಂತ ಹೇಳುವವರನ್ನು ಬದಿಗೆ ಸರಿಸಿ ಸಿದ್ಧಾಂತಗಳನ್ನು ಪ್ರಯೋಗವಾಗಿ ಮಾಡಿಕೊಂಡು ಸುಧಾರಣೆಗೆ ಇಳಿದವರನ್ನು ಮುಂದಿಡುವ ಬದಲಾವಣೆಯನ್ನು ಬಿವಿಎಸ್‌ ಮಾಡಿತ್ತು. ದಲಿತೇತರನ್ನು ಪ್ರಶ್ನಿಸುವ ಜೊತೆಗೆ ದಲಿತ ನಾಯಕರನ್ನೂ ಪ್ರಶ್ನಿಸುವ ಕಾರ್ಯ ಆರಂಭಿಸಿತ್ತು. ದಲಿತ ಸಂಘರ್ಷ ಸಮಿತಿಯ ವೇಗದಲ್ಲಿ ಬಿವಿಎಸ್‌ ಬೆಳೆಯದೇ ಹೋಗಿರುವುದು ಮಾತ್ರ ಬೇಸರದ ಸಂಗತಿ ಎಂದರು.

ಆದಾಯ ತೆರಿಗೆ ಆಯುಕ್ತ ಎಂ.ಎಸ್‌. ನೇತ್ರಪಾಲ್‌ ಮಾತನಾಡಿ, ‘ದಲಿತರು, ಹಿಂದುಳಿದ ವರ್ಗದವರು ಯಾವುದೇ ಹುದ್ದೆಗೆ ಹೋದ ಕೂಡಲೇ ಅವರನ್ನು ಅರ್ಹತೆ ಇಲ್ಲದೇ ಬಂದವರು ಎಂದು ಹೀಯಾಳಿಸಲಾಗುತ್ತಿದೆ.

ಕೊಳೆಗೇರಿಯಲ್ಲಿ ಇದ್ದಾಗ, ‘ಡಿ’ ದರ್ಜೆ ನೌಕರರಾದಾಗ ಸಮಸ್ಯೆ ಇರುವುದಿಲ್ಲ. ‘ಎ’ ಗುಂಪಿನ ನೌಕರರಾದಾಗ ಸ್ಥಾಪಿತ ಹಿತಾಸಕ್ತಿಗಳಿಗೆ ನೋವು ತಡೆದುಕೊಳ್ಳಲಾಗುವುದಿಲ್ಲ. ಅಪಪ್ರಚಾರ ಶುರು ಮಾಡುತ್ತಾರೆ’ ಎಂದು ಹೇಳಿದರು.

ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ನೋಡಿದರೆ ಸಾಮಾನ್ಯ ವರ್ಗದಿಂದ ಬಂದವರಿಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಡಗಳ ಮೀಸಲಾತಿ ವರ್ಗದಲ್ಲಿ ಆಯ್ಕೆಯಾದವರಿಗೂ ಶೇ 2ರಷ್ಟು ಅಂಕವಷ್ಟೇ ವ್ಯತ್ಯಾಸ ಇದೆ.

ಆದರೆ, ಸಾಮಾನ್ಯ ವರ್ಗದವರು ಶೇ 80ಕ್ಕೂ ಅಧಿಕ ಅಂಕ ತೆಗೆದರೂ ಆಯ್ಕೆಯಾಗುವುದಿಲ್ಲ. ಶೇ 40 ಅಂಕ ಪಡೆದವರು ಮೀಸಲಾತಿ ಮೂಲಕ ಆಯ್ಕೆಯಾಗುತ್ತಿದ್ದಾರೆ ಎಂಬ ಸಂಕಥನವನ್ನು ಹರಿಯಬಿಡುತ್ತಿದ್ದಾರೆ ಎಂದು ಎಚ್ಚರಿಸಿದರು.

ಅಕ್ಕ ಐಎಎಸ್‌ ಅಕಾಡೆಮಿ ಮುಖ್ಯಸ್ಥ ಶಿವಕುಮಾರ ಅಧ್ಯಕ್ಷತೆ ವಹಿಸಿದ್ದರು. ಟಿ. ನರಸೀಪುರ ನಳಂದ ಬುದ್ಧ ವಿಹಾರದ ಭಂತೆ ಬೋಧಿರತ್ನ ಸಾನ್ನಿಧ್ಯ ವಹಿಸಿದ್ದರು.

‘ಪರಿವರ್ತನೆಯ ಸಾರಥಿ ಬಿವಿಎಸ್‌’, ‘ಪ್ರಬುದ್ಧ ಭಾರತ ತುಡಿತ’, ‘ಸಂವಿಧಾನದ ಅರಿವು’, ‘ಮೈತ್ರಿಯೆಡೆಗೆ’ ಕೃತಿಗಳನ್ನು ಡಿಎಸ್‌ಎಸ್‌ (ಅಂಬೇಡ್ಕರ್‌ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್‌ ಬಿಡುಗಡೆ ಮಾಡಿದರು.

ಲೇಖಕಿ ಆತ್ರಾಡಿ ಅಮೃತ ಡೀಕಯ್ಯ, ಲೇಖಕ ಯೋಗೇಶ್‌ ಮಾಸ್ಟರ್‌, ಬಿವಿಎಸ್‌ ಅಧ್ಯಕ್ಷ ಹರಿರಾಂ ಎ., ನಾಗ ಮಾರ್ಷಲ್ ಆರ್ಟ್ಸ್‌ನ ಸೋಸಲೆ ಸಿದ್ಧರಾಜು, ಬಿವಿಎಸ್ ರಾಜ್ಯ ಸಂಯೋಜಕ ಶ್ರೀನಿವಾಸ್‌ ಜಿ. ಉಪಸ್ಥಿತರಿದ್ದರು. ಕೊಕ್ಕೊ ಕ್ರೀಡೆಯಲ್ಲಿ ಸಾಧನೆ ಮಾಡಿರುವ ಚೈತ್ರಾ ಬಿ., ಗೌತಮ್‌ ಎಂ.ಕೆ. ಅವರನ್ನು ಸನ್ಮಾನಿಸಲಾಯಿತು. ವಿವಿಧ ಸಾಧಕರನ್ನು ಗೌರವಿಸಲಾಯಿತು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!