*ಮಕ್ಕಳ ಅಸಹಜ ಸಾವು ಸಂಭವಿಸದಂತೆ ಅಧಿಕಾರಿಗಳು ಗಮನಹರಿಸಿ: ಶೇಖರಗೌರ ಜಿ. ರಾಮತ್ನಾಳ*
ಕೊಪ್ಪಳ ಜೂನ್ 20 (ಕರ್ನಾಟಕ ವಾರ್ತೆ): ಮಕ್ಕಳ ಅಸಹಜ ಸಾವಿನ ಪ್ರಕರಣಗಳು ಸಂಭವಿಸದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ಸೂಕ್ತ ಗಮನಹರಿಸುವಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶೇಖರಗೌರ ಜಿ. ರಾಮತ್ನಾಳ ಹೇಳಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಡಾ. ಕೆ.ಟಿ. ತಿಪ್ಪೇಸ್ವಾಮಿ ಅವರ ಉಪಸ್ಥಿತಿಯಲ್ಲಿ ಕೊಪ್ಪಳ ಜಿಲ್ಲೆಯ “ಮಕ್ಕಳ ಅಸಹಜ ಸಾವಿನ ಪ್ರಕರಣಗಳನ್ನು ತಡೆಗಟ್ಟುವ ಸಂಬಂಧ” ವಿವಿಧ ಭಾಗೀದಾರರ ಇಲಾಖೆಗಳ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಇತ್ತೀಚೆಗೆ ವಿದ್ಯುತ್ ಸ್ಪರ್ಶ, ನಿಷ್ಕ್ರಿಯ ಕಲ್ಲುಕ್ವಾರಿ ಮತ್ತು ಕೃಷಿಹೊಂಡಗಳಲ್ಲಿ ಈಜಲು ಹೋಗಿ ಮಕ್ಕಳು ಸಾವನ್ನಪ್ಪಿರುವುದು, ಆತ್ಮಹತ್ಯೆ ಹಾಗೂ ಹಾವುಕಡಿತ ಮುಂತಾದ ಕಾರಣಗಳಿಂದ ಮಕ್ಕಳು ಮರಣಹೊಂದುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜಿಲ್ಲೆಯಲ್ಲಿ 2023ನೇ ಸಾಲಿನಲ್ಲಿ 31 ಮಕ್ಕಳು 2024ನೇ ಸಾಲಿನಲ್ಲಿ 42 ಮಕ್ಕಳು ಹಾಗೂ ಪ್ರಸ್ತುತ ಸಾಲಿನಲ್ಲಿ ಇದುವರೆಗೆ 18 ಮಕ್ಕಳು ಸಾವನ್ನಪ್ಪಿರುವುದು ಅಘಾತಕಾರಿ ಸಂಗತಿಯಾಗಿದೆ. ಆದ್ದರಿಂದ ಮಕ್ಕಳ ಸುರಕ್ಷತೆ ಮತ್ತು ಮಕ್ಕಳ ಅಸಹಜ ಸಾವಿನ ಪ್ರಕರಣಗಳು ಸಂಭವಿಸದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ಸೂಕ್ತ ಗಮನಹರಿಸಿ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು.
ಇದೆ ಜೂನ್ 19 ರಂದು ಜಿಲ್ಲೆಯ ವಿವಿಧ ಶಾಲೆ, ವಸತಿ ಶಾಲೆ, ಅಂಗನವಾಡಿ ಕೇಂದ್ರ, ಪಂಚಾಯತಿ, ಮಕ್ಕಳ ಪಾಲನಾ ಸಂಸ್ಥೆಗಳು, ಮಕ್ಕಳ ವಿಶೇಷ ಪೊಲೀಸ್ ಘಟಕ ಮತ್ತು ಪೋಲೀಸ್ ಠಾಣೆಗಳಿಗೆ ಪ್ರವಾಸ ಕೈಗೊಂಡು ಪರಿಶೀಲಿಸಿ ಮಕ್ಕಳ ಹಕ್ಕುಗಳ ಅನುಷ್ಟಾನ ಮತ್ತು ತೆಗೆದುಕೊಂಡ ರಕ್ಷಣಾ ಕ್ರಮಗಳ ಕುರಿತು ಮಾಹಿತಿ ಪಡೆಯಲಾಗಿದೆ ಎಂದರು.
ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಡಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ, ಸರ್ಕಾರಿ ಮತ್ತು ಖಾಸಗಿ ಶಾಲೆ, ಕಾಲೇಜು, ವಸತಿಯುತ ಶಾಲೆಯ ಮಕ್ಕಳ ಪಾಲನಾ ಸಂಸ್ಥೆಗಳಗಳ ಕಂಪೌಡ ಒಳಗೆ ಯಾವುದೇ ವಿದ್ಯುತ್ ಟಿ.ಸಿಯನ್ನು ಅಳವಡಿಸಿರಬಾರದು. ಶಾಲೆಯ ಮೇಲ್ಟಾವಣಿ, ಆವರಣ ಹಾಗೂ ಮೈದಾನಗಳ ಮೇಲೆ ಯಾವುದೇ ತರಹದ ವಿದ್ಯುತ್ ತಂತಿಗಳು ಹಾದುಹೋಗಿರಬಾರದು. ಒಂದುವೇಳೆ ಅಂಗನವಾಡಿ ಶಾಲೆ, ಕಾಲೇಜು ಮತ್ತು ವಸತಿಯುತ ಶಾಲೆಗಳ ಕಂಪೌಡ ಒಳಗೆ ವಿದ್ಯುತ್ ತಂತಿಗಳು ಹಾದುಹೋಗಿದ್ದಲ್ಲಿ ಅದರ ಮಾಹಿತಿಯನ್ನು ಇಲಾಖಾ ಮುಖ್ಯಸ್ಥರು ಜುಲೈ 10ರೊಳಗಾಗಿ ಸಂಗ್ರಹಿಸಿ ಸಂಬಂಧಿಸಿದ ಜೆಸ್ಲಾಂ ಇಲಾಖೆರವರಿಗೆ ಮಾಹಿತಿಯನ್ನು ಸಲ್ಲಿಸಿ, ವಿದ್ಯುತ್ ಲೈನ್ ತೆರವುಗೊಳಿಸಲು ಕ್ರಮವಹಿಸಿ ಆಯೋಗಕ್ಕೆ ತುರ್ತಾಗಿ ವರದಿ ಸಲ್ಲಿಸುವಂತೆ ಸೂಚಿಸಿದರು.
ಮಕ್ಕಳ ಸಂರಕ್ಷಣೆ ಹಿತದೃಷ್ಟಿಯಿಂದ ಎಲ್ಲಾ ಶಾಲೆ, ಕಾಲೇಜು ಮತ್ತು ವಸತಿ ನಿಲಯಗಳಲ್ಲಿ ಮಕ್ಕಳ ರಕ್ಷಣಾ ನೀತಿ-2016ರನ್ನು ಅನುಷ್ಟಾನಗೊಳಿಸಿ ಮಕ್ಕಳಿಗೆ ಸೂಕ್ತ ಭದ್ರತೆ ನೀಡಿರುವ ಬಗ್ಗೆ ಖಾತ್ರಿಪಡಿಕೊಂಡು ಆಯೋಗಕ್ಕೆ 20ದಿನಗಳ ಒಳಗಾಗಿ ವರದಿ ಸಲ್ಲಿಸಲು ಶಿಕ್ಷಣ ಇಲಾಖೆ, ಹಿಂದುಗಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿಗಳಿಗೆ ಕ್ರಮ ವಹಿಸುವಂತೆ ತಿಳಿಸಿದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಡಾ. ಕೆ.ಟಿ. ತಿಪ್ಪೇಸ್ವಾಮಿ ಅವರು ಮಾತನಾಡಿ, ಶಾಲೆ ಮತ್ತು ಕಾಲೇಜುಗಳಿಂದ ಮಕ್ಕಳು ಹೊರಗುಳಿಯದಂತೆ ಸೂಕ್ತ ಕ್ರಮವಹಿಸಿ ಪುನಃ ಮಕ್ಕಳನ್ನು ಶಾಲೆ, ಕಾಲೇಜುಗಳಿಗೆ ಹಾಜರಾಗಲು ಕ್ರಮವಹಿಸಬೇಕು. ಬಾಲ್ಯವಿವಾಹ, ಪೋಕ್ಸೊ ಹಾಗೂ ಮುಂತಾದ ದೌರ್ಜನ್ಯಗಳಿಂದ ಮಕ್ಕಳನ್ನು ರಕ್ಷಿಸಲು ಅಧೀನ ಅಧಿಕಾರಿಗಳಿಗೆ ಜವಾಬ್ದಾರಿ ನಿಗದಿಪಡಿಸಬೇಜು. ಯಾವುದೇ ಮಗು ಶಾಲೆಯಿಂದ ಹೊರಗುಳಿಯದೇ ಶಿಕ್ಷಣ ಪಡೆಯಲು ಮತ್ತು ಸೂಕ್ತ ರಕ್ಷಣೆ ಹೊಂದಲು ಕ್ರಮವಹಿಸುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಪೊಲೀಸ್ ಇಲಾಖೆಯಿಂದ ನಿಯಮಿತವಾಗಿ ತೆರೆದಮನೆ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಆಯೋಜಿಸುವ ಮೂಲಕ ಮಕ್ಕಳ ಸುರಕ್ಷತಾ ಕ್ರಮಗಳ ಕುರಿತು ಹೆಚ್ಚು ಮಕ್ಕಳು ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮತ್ತು ಶಾಲಾ ಅವಧಿ ಮತ್ತು ರಜಾ ದಿನಗಳಲ್ಲಿ ಶಾಲಾ ಆವರಣದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ನಿಯಮಿತವಾಗಿ ಪೊಲೀಸ್ ಬೀಟ್ ವ್ಯವಸ್ಥೆಯನ್ನು ಎಲ್ಲಾ ಶಾಲೆ ಮತ್ತು ಕಾಲೇಜುಗಳಿಗೆ ಒದಗಿಸಲು ಹಾಗೂ ಶಾಲೆ, ಕಾಲೇಜುಗಳ ಸುತ್ತಮುತ್ತ ಯಾವುದೇ ತಂಬಾಕು ಮತ್ತು ಮಧ್ಯ ಮಾರಾಟ ಅಂಗಡಿಗಳಿದ್ದಲ್ಲಿ ಪರಿಶೀಲಿಸಿ, ಒಂದು ತಿಂಗಳ ಒಳಗಾಗಿ ಅವುಗಳನ್ನು ತೆರವುಗೊಳಿಸಲು ಕ್ರಮವಹಿಸುವಂತೆ ತಿಳಿಸಿದರು.
ಎಲ್ಲಾ ಇಲಾಖೆಗಳು ಪತ್ರ ವ್ಯವಹಾರ ಮಾಡುವ ಸಂದರ್ಭದಲ್ಲಿ ಪತ್ರದ ಕೆಳಭಾಗದಲ್ಲಿ ಕಡ್ಡಾಯವಾಗಿ “ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧ” ಎಂಬ ಬರಹವನ್ನು ಮುದ್ರಿಸುವುದು ಹಾಗೂ ಎಲ್ಲಾ ಇಲಾಖೆಯ ಕಚೇರಿಗಳ ಮುಂಭಾಗದಲ್ಲಿ “ಮಕ್ಕಳ ಸಹಾಯವಾಣಿ 1098ರ ಶಾಶ್ವತ ಗೋಡೆಬರಹವನ್ನು ಕಡ್ಡಾಯವಾಗಿ ಒಂದು ತಿಂಗಳ ಒಳಗಾಗಿ ಬರೆಯಿಸಿ ಜಿ.ಪಿ.ಎಸ್ ಪೋಟೋ ಸಹಿತ ಆಯೋಗಕ್ಕೆ ವರದಿ ನೀಡುವ ಮೂಲಕ ಸಾರ್ವಜನಿಕರಿಗೆ ಬಾಲ್ಯವಿವಾಹ ನಿಷೇದ ಹಾಗೂ ಮಕ್ಕಳ ರಕ್ಷಣೆಯ ಅವಶ್ಯಕತೆ ಕುರಿತು ಹೆಚ್ಚು ಪ್ರಚಾರ ಮಾಡಲು ಕ್ರಮವಹಿಸುವಂತೆ ಸೂಚನೆ ನೀಡಿದರು.
ಈ ಸಭೆಯಲ್ಲಿ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಮಂತ್ ಕುಮಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪರಶುರಾಮ ಶೆಟ್ಟಪ್ಪನವರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ ಸೇರಿದಂತೆ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರು ಹಾಗೂ ಎಲ್ಲಾ ಇಲಾಖೆಗಳ ಜಿಲಾಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.