ಬೆಂಗಳೂರು.15.ಜುಲೈ.25:- ರಾಜ್ಯ ಸರ್ಕಾರ ರಾಜ್ಯದ ಪರಿಶಿಷ್ಟರು, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರಿಗೆ ಸಾರ್ವಜನಿಕ, ಖಾಸಗಿ, ಡೀಮ್ಡ್ ಸೇರಿದಂತೆ ಎಲ್ಲವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಘನತೆಯ ಹಕ್ಕು ರಕ್ಷಣೆ ಮಾಡಲು ‘ರೋಹಿತ್ ವೇಮುಲ’ ಹೆಸರಿನಲ್ಲಿ ಹೊಸ ಕಾಯಿದೆ ಜಾರಿಗೆ ತರಲು ತಯಾರಿ.
ಈ ವಿಧೇಯಕ ಮುಂಬರುವ 2 ಆಗಸ್ಟ್ ತಿಂಗಳಿನಲ್ಲಿ ವಿಧಾನಮಂಡಲ ಅಧಿವೇಶನದಲ್ಲಿ ಮಂಡನೆಗೆ ಸಿದ್ಧತೆ.
ವಿಧೇಯಕ -2025′ ಕರಡು ಅಂತಿಮಗೊಂಡಿದ್ದು, ಆಗಸ್ಟ್ 2ನೇ ವಾರದಲ್ಲಿ ಆರಂಭವಾಗಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಮಂಡನೆಗೆ ಬಯಸಿದೆ. ರೋಹಿತ್ ವೇಮುಲ ವಿಧೇಯಕ ಕುರಿತು ಈಗಾಗಲೇ ಚರ್ಚೆ ಆರಂಭವಾಗಿದೆ.
ಯಾವುದೇ ವಿದ್ಯಾರ್ಥಿ ಜಾತಿ, ವರ್ಗ ಅಥವಾ ಧರ್ಮದ ಆಧಾರದ ಮೇಲೆ ತಾರತಮ್ಯಕ್ಕೆ ಒಳಗಾಗದಂತೆ ರಕ್ಷಣೆ ನೀಡುವುದು ವಿಧೇಯಕದ ಆಶಯ. ಕಾಯಿದೆ ಉಲ್ಲಂಘನೆಯು ಜಾಮೀನು ರಹಿತ ಅಪರಾಧವಾಗಲಿದ್ದು, ತಪ್ಪಿತಸ್ಥರಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ ಜತೆಗೆ ಸಂಬಂಧಪಟ್ಟ ಸಂಸ್ಥೆಗೆ ಸರ್ಕಾರದ ಎಲ್ಲರೀತಿಯ ಹಣಕಾಸು ನೆರವು ಮತ್ತು ಅನುದಾನ ನಿಲ್ಲಿಸಲು ವಿಧೇಯಕದಲ್ಲಿಅವಕಾಶ ಕಲ್ಪಿಸಲಾಗಿದೆ.
ನೂತನ ವಿಧೇಯಕದ ಕರಡು ಸಿದ್ಧವಾಗಿ ಕಾನೂನು ಇಲಾಖೆ ಪರಾಮರ್ಶೆಗೆ ಒಳಪಟ್ಟಿದ್ದು, ಮುಂದಿನ ಸಚಿವ ಸಂಪುಟದಲ್ಲಿ ಚರ್ಚೆಗೆ ಬರಲಿದೆ. ಆಗಸ್ಟ್ 11ರಿಂದ ಆರಂಭವಾಗಲಿರುವ ರಾಜ್ಯ ವಿಧಾನಮಂಡಲದ ಮಳೆಗಾಲದ ಅಧಿವೇಶನದಲ್ಲಿವಿಧೇಯಕ ಮಂಡಿಸಿ ಹೊಸ ಕಾಯಿದೆ ರೂಪಿಸಲು ಸರಕಾರ ಉದ್ದೇಶಿಸಿದೆ.
ಜಾಮೀನು ರಹಿತ ಅಪರಾಧ
ರೋಹಿತ್ ವೇಮುಲ ಕಾಯಿದೆಯಡಿ ಪ್ರತಿಯೊಂದು ಅಪರಾಧವು ಸಂಜ್ಞೆಯ ಮತ್ತು ಜಾಮೀನು ರಹಿತವಾಗಿರುತ್ತದೆ. ಕಾಯಿದೆ ಉಲ್ಲಂಘನೆಗೆ ಸಂಬಂಧಿತ ಸಂಸ್ಥೆಯ ವ್ಯವಹಾರಗಳ ಉಸ್ತುವಾರಿ ಹೊಂದಿರುವ ವ್ಯಕ್ತಿ ಅಥವಾ ವ್ಯಕ್ತಿಗಳು ಹೊಣೆಗಾರರಾಗಲಿದ್ದು, ಒಂದು ವರ್ಷದ ಅವಧಿಗೆ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಅಪರಾಧ 2ನೇ ಬಾರಿಗೆ ಪುನಾವರ್ತನೆಯಾದರೆ ಕನಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ಹಾಗೂ ಒಂದು ಲಕ್ಷ ರೂ. ದಂಡಕ್ಕೆ ಗುರಿಯಾಗಬೇಕಾಗುತ್ತದೆ.
ಜಾತಿ, ಧರ್ಮದ ಆಧಾರದಲ್ಲಿ ತಾರತಮ್ಯ ಅಥವಾ ಘನತೆಗೆ ಕುಂದು ತರುವ ಜತೆಗೆ ಅದಕ್ಕೆ ಪ್ರಚೋದನೆ ನೀಡುವ ವ್ಯಕ್ತಿ ಅಥವಾ ವ್ಯಕ್ತಿಗಳೂ ಶಿಕ್ಷೆ ಮತ್ತು ದಂಡ ಅನ್ವಯ ಆಗಲಿದೆ. ಜತೆಗೆ ಅಂತಹ ಸಂಸ್ಥೆಗೆ ರಾಜ್ಯ ಸರ್ಕಾರದ ಯಾವುದೇ ಹಣಕಾಸಿನ ನೆರವು ಅಥವಾ ಅನುದಾನ ನೀಡುವಂತಿಲ್ಲ ಎಂಬ ಅಂಶವನ್ನು ವಿಧೇಯಕದ ಕರಡಿನಲ್ಲಿ ಸೇರ್ಪಡೆ ಮಾಡಲಾಗಿದೆ.
ಮುಕ್ತ ಪ್ರವೇಶ
ವರ್ಗ, ಜಾತಿ, ಧರ್ಮ ಮತ್ತು ಲಿಂಗ ಬೇಧವಿಲ್ಲದೆ ಉನ್ನತ ಶಿಕ್ಷಣ ಸಂಸ್ಥೆಗಳ ಪ್ರವೇಶವು ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಅರ್ಹತಾ ಪರೀಕ್ಷೆ ಮತ್ತು ಮೀಸಲು ನೀತಿ ಅನ್ವಯ ಇರಬೇಕು. ಈ ವಿಚಾರದಲ್ಲಿ ಯಾವುದೇ ವ್ಯಕ್ತಿಗೆ ತಾರತಮ್ಯ ಇರಬಾರದು ಎಂದು ಉದ್ದೇಶಿತ ಕಾಯಿದೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ತಾರತಮ್ಯಕ್ಕೆ ಒಳಗಾದ ವ್ಯಕ್ತಿ, ಅವನ ಪೋಷಕರು, ಸಹೋದರ, ಸಹೋದರಿ ಅಥವಾ ರಕ್ತ ಸಂಬಂಧಿ ಅಥವಾ ಸಹೋದ್ಯೋಗಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿಕಾಯಿದೆ ಉಲ್ಲಂಘನೆಗಾಗಿ ದೂರು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ರೋಹಿತ್ ವೇಮುಲ ಆತ್ಮಹತ್ಯೆ: ಹೈದರಾಬಾದ್ನಲ್ಲಿ ರಾಹುಲ್ ಗಾಂಧಿ
ರೋಹಿತ್ ವೇಮುಲ ಯಾರು?
ಹೈದರಾಬಾದ್ ವಿಶ್ವವಿದ್ಯಾಲಯದ 26 ವರ್ಷಗಳ ಹರೆಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣ ರಾಷ್ಟ್ರಾದ್ಯಂತ ಸಂಚಲನ ಸೃಷ್ಟಿಸಿತ್ತು. ರಾಜ್ಯ ಪ್ರಾಯೋಜಿತ ಜಾತಿ ತಾರತಮ್ಯದಿಂದ ಈ ಸಾವು ಸಂಭವಿಸಿದೆ ಎಂದು ದೇಶಾದ್ಯಂತ ನಾನಾ ವಿಶ್ವವಿದ್ಯಾಲಯಗಳಲ್ಲಿಪ್ರತಿಭಟನೆ ನಡೆದಿದ್ದವು. ಈ ಪ್ರಕರಣದಲ್ಲಿಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆ ಹಾಗೂ ಶೋಷಿತ ಸಮುದಾಯಗಳ ವಿದ್ಯಾರ್ಥಿಗಳ ಘನತೆ ರಕ್ಷಣೆಗಾಗಿ ಕಠಿಣ ಕಾನೂನು ರೂಪಿಸುವ ಅಗತ್ಯವನ್ನು ಕಾಂಗ್ರೆಸ್ ಪ್ರತಿಪಾದಿಸಿತ್ತು.
ರಾಹುಲ್ ಕಾಳಜಿ
ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸಮಾನ ಪ್ರವೇಶ ಅವಕಾಶ ನೀಡುವ ಜತೆಗೆ, ಜಾತಿ, ಧರ್ಮ, ಲಿಂಗದ ಆಧಾರದಲ್ಲಿ ತಾರತಮ್ಯಕ್ಕೆ ಆಸ್ಪದವಾಗದಂತೆ ಘನತೆಯಿಂದ ನಡೆಸಿಕೊಳ್ಳಲು ಪೂರಕವಾಗಿ ಸ್ಪಷ್ಟ ಕಾಯಿದೆ ರೂಪಿಸುವಂತೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಪಕ್ಷದ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ್ದರು. ಇದಕ್ಕೆ ಸ್ಪಂದಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶೀಘ್ರ ಹೊಸ ಕಾಯಿದೆ ರೂಪಿಸುವುದಾಗಿ ಕಳೆದ ಏಪ್ರಿಲ್ ತಿಂಗಳಲ್ಲಿ ಪ್ರಕಟಿಸಿದ್ದರು.