ಬೆಂಗಳೂರು.02.ಜನವರಿ.26: ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ವಿಚಾರ ದೇಶದ ಗಮನ ದೇಶದಲ್ಲಿ ಕಾಂಗ್ರೆಸ್ ಅಧಿಕಾರ ಉಳಿಸಿಕೊಂಡಿರುವ ಕೆಲವೇ ಕೆಲವು ರಾಜ್ಯಗಳ ಪೈಕಿ ಕರ್ನಾಟಕ ಒಂದು ಹೀಗಿದ್ದಾಗ ಕಾಂಗ್ರೆಸ್ ನಾಯಕರಿಗೆ ಸಂಪುಟ ವಿಸ್ತರಣೆ ಅಥವಾ ಸಂಪುಟ ಪುನರ್ ರಚನೆ ಕುರಿತು ದೊಡ್ಡ ತಲೆನೋವು ಶುರುವಾಗಿದೆ.
ಅದ್ರಲ್ಲೂ ಸ್ವಲ್ಪ ಎಡವಟ್ಟು ಮಾಡಿಕೊಂಡರೂ ಭವಿಷ್ಯದಲ್ಲಿ ಇದೆಲ್ಲಾ ಸರ್ಕಾರದ ಉಳಿವಿಗೆ ಕೂಡ ದೊಡ್ಡ ಕಂಟಕ ತರುವ ಆತಂಕ ಆವರಿಸಿದೆ. ಇಷ್ಟೆಲ್ಲದರ ನಡುವೆ ಹಾಲಿ ಸಚಿವರಿಗೆ ಗೇಟ್ಪಾಸ್ ನೀಡುವ ಜೊತೆಗೆ ಶೇ 50 ರಷ್ಟು ಹೊಸ ಮುಖಗಳಿಗೆ ಆದ್ಯತೆ ನೀಡುವ ಸಾಧ್ಯತೆ ಇದೆ.
ಹೌದು, 2023 ಕರ್ನಾಟಕ ವಿಧಾನಸಭೆ ಚುನಾವಣೆ ಅಖಾಡದಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಜಯ ದಾಖಲಿಸಿ ಅಧಿಕಾರ ಹಿಡಿದಿತ್ತು. ಆದರೆ ಈಗ ಪಕ್ಷದ ಒಳಗೆ ನಾಯಕತ್ವ ಬದಲಾವಣೆ ಚರ್ಚೆಗಳ ನಡುವೆ ಸಚಿವ ಸ್ಥಾನದ ಲಾಬಿ ಕೂಡ ಜೋರಾಗಿದೆ. ಇದು ದೆಹಲಿ ಕಾಂಗ್ರೆಸ್ ವರಿಷ್ಠರಿಗೆ ಮತ್ತಷ್ಟು ತೊಳಲಾಟ ತರಿಸಿದೆ. ಅವರಿಗೆ ಕೊಟ್ಟರೆ ಇವರಿಗೆ ಕೋಪ & ಇವರನ್ನು ಬಿಟ್ಟರೆ ಅವರಿಗೆ ಕೋಪ ಎನ್ನುವ ಪರಿಸ್ಥಿತಿ ಇದೆ.
ಈ ಎಲ್ಲಾ ಒದ್ದಾಟಗಳ ನಡುವೆ ಹಾಲಿ ಸಚಿವರಿಗೆ ಗೇಟ್ಪಾಸ್ ಕೊಟ್ಟು ಶೇಕಡಾ 50ರಷ್ಟು ಹೊಸ ಮುಖಗಳಿಗೆ ಅವಕಾಶ ನೀಡಲು ಪರೋಕ್ಷವಾಗಿ ಡಿಮ್ಯಾಂಡ್ ಶುರು ಆಗಿದೆ.
ಸಂಪುಟಕ್ಕೆ ಶೇಕಡಾ 50ರಷ್ಟು ಹೊಸ ಮುಖ?
ಅಂದಹಾಗೆ ಜನವರಿ 15ರ ನಂತರ ಕರ್ನಾಟಕ ಸಚಿವ ಸಂಪುಟ ಪುನರ್ ರಚನೆ ಆಗುವ ಸಾಧ್ಯತೆಗಳು ದಟ್ಟವಾಗಿದ್ದು, ಈ ಸಮಯದಲ್ಲಿ ಸಂಪುಟ ಪುನರ್ ವೇಳೆ ಶೇಕಡಾ 50ರಷ್ಟು ಹೊಸಬರಿಗೆ ಅವಕಾಶ ಕಲ್ಪಿಸಲು ಹೈಕಮಾಂಡ್ಗೆ ಮನವಿ ಮಾಡಿದ್ದೀವಿ ಎಂದು, ಕಾಂಗ್ರೆಸ್ ನಾಯಕ ಹಾಗೂ ವಿಧಾನ ಪರಿಷತ್ತು ಸದಸ್ಯ ಸಲೀಂ ಅಹ್ಮದ್ ತಿಳಿಸಿದ್ದಾರೆ. ಈ ಮೂಲಕ ದೆಹಲಿ ವರಿಷ್ಠರಿಗೆ ಹೊಸ ಬೇಡಿಕೆಯ ನಿಭಾಯಿಸುವ ಜವಾಬ್ದಾರಿ ಸಿಕ್ಕಂತಾಗಿದೆ.
ಪರೋಕ್ಷವಾಗಿ ಮಂತ್ರಿಗಿರಿಗೆ ಡಿಮ್ಯಾಂಡ್!
ಇದೇ ವೇಳೆ ಮುಂಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಬಗ್ಗೆ ಕೂಡ ಪ್ರಸ್ತಾಪ ಮಾಡಿರುವ ಕಾಂಗ್ರೆಸ್ ನಾಯಕ ಸಲೀಂ ಅಹ್ಮದ್, ರಾಜ್ಯದಲ್ಲಿ 2028ಕ್ಕೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ತರುವ ದೃಷ್ಟಿಯಿಂದ ಈಗಿನ ಸಚಿವ ಸಂಪುಟ ಪುನರ್ ರಚನೆಯು ಮಹತ್ವದಿಂದ ಕೂಡಿದೆ ಎಂದು ಹುಬ್ಬಳ್ಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರತಿಪಾದಿಸಿದ್ದಾರೆ. ಅಲ್ಲದೆ ಉತ್ತರ ಕರ್ನಾಟಕ ಭಾಗದ ಅಲ್ಪಸಂಖ್ಯಾತ ಸಮುದಾಯದ ಶಾಸಕರೊಬ್ಬರು ಸಚಿವರಾಗಬೇಕು ಎಂಬ ಬೇಡಿಕೆ ಇದ್ದು, ಈ ಪೈಕಿ ನನಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇದೆ ಎಂದು ಹೇಳುವ ಮೂಲಕ ಮಂತ್ರಿಗಿರಿಗೆ ಸಲೀಂ ಅಹ್ಮದ್ ಡಿಮ್ಯಾಂಡ್ ಇಟ್ಟಿದ್ದಾರೆ.
ಸಚಿವ ಸ್ಥಾನಕ್ಕಾಗಿ ತೀವ್ರಗೊಂಡ ಪೈಪೋಟಿ
ಹೌದು, ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಇನ್ನು 2 ವರ್ಷ 5 ತಿಂಗಳು ಮಾತ್ರ ಬಾಕಿ ಉಳಿದಿದೆ. ಹೀಗಾಗಿ ಹೇಗಾದರು ಮಾಡಿ ಸಚಿವ ಸ್ಥಾನ ಪಡೆದು ಒಮ್ಮೆಯಾದರೂ ಮಂತ್ರಿ ಆಗಬೇಕು ಎನ್ನುವ ಬಯಕೆ ಹಲವು ಶಾಸಕರಲ್ಲಿ ಕಾಡುತ್ತಿದೆ.
ಹೊಸಬರು ಸಚಿವ ಸ್ಥಾನ ಪಡೆಯಲು ಒದ್ದಾಟ ನಡೆಸುತ್ತಿದ್ದರೆ, ಈಗಾಗಲೇ ಸಚಿವರಾಗಿ ಅನುಭವ ಹೊಂದಿದ್ದ ಹಿರಿಯ ಕಾಂಗ್ರೆಸ್ ನಾಯಕರು ಕೂಡ ತಮಗೆ ಮತ್ತೆ ಅಧಿಕಾರ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಇದ್ದಾರೆ. ಹಾಲಿ ಸಚಿವರಿಗೆ ಅಧಿಕಾರ ಉಳಿಸಿಕೊಳ್ಳುವ ಚಿಂತೆ ಆವರಿಸಿದ್ದು, ಕಾಂಗ್ರೆಸ್ ಕೇಂದ್ರ ನಾಯಕರಿಗೆ ಕರ್ನಾಟಕದಲ್ಲಿ ಅಧಿಕಾರ ಕಾಪಾಡಿಕೊಳ್ಳಲು ರಣತಂತ್ರ ಹೆಣೆಯುವ ಅನಿವಾರ್ಯತೆ ನಿರ್ಮಾಣವಾಗಿದೆ.






Any questions related to ರಾಜ್ಯದಲ್ಲಿ ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಭಾರಿ ಚರ್ಚೆ?