*ಮಹಾತ್ಮಾಗಾಂಧಿ ನರೇಗಾ ಯೋಜನೆಯ ಮಾನವ ದಿನಗಳ ಸೃಜನೆಯಲ್ಲಿ
*ಬೀದರ ಜಿಲ್ಲೆ ರಾಜ್ಯದಲ್ಲಿ 3ನೇ ಸ್ಥಾನದಲ್ಲಿ-ಸಿಇಓ ಡಾ.ಗಿರೀಶ ಬದೋಲೆ
ಬೀದರ.19.ಏಪ್ರಿಲ್.25:-ಗ್ರಾಮೀಣ ಪ್ರದೇಶದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು, ಅತೀ ಸಣ್ಣ ರೈತರು ಮತ್ತು ಮಹಿಳೆಯರಿಗೆ ಉದ್ಯೋಗವಕಾಶ ಕಲ್ಪಿಸಿಕೊಟ್ಟು ಅವರ ಸ್ವಾವಲಂಬಿ ಬದುಕಿಗೆ ಆಸರೆಯಾಗುವ ಮಹಾತ್ವಾಕಾಂಕ್ಷಿ ಯೋಜನೆ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 2024-25ನೇ ಸಾಲಿನಲ್ಲಿ ಬೀದರ ಜಿಲ್ಲೆಯು ಅತೀ ಹೆಚ್ಚು ಮಾನವ ದಿನಗಳನ್ನು ಸೃಜಿಸಿದ ಜಿಲ್ಲೆಗಳಲ್ಲಿ ಬೀದರ ಜಿಲ್ಲೆ ಒಂದಾಗಿದ್ದು ಬೀದರ ಜಿಲ್ಲೆಯು ರಾಜ್ಯದಲ್ಲಿ 3ನೇ ಸ್ಥಾನದಲ್ಲಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಗಿರೀಶ ಬದೋಲೆ ತಿಳಿಸಿದ್ದಾರೆ.
ಬೀದರ ಜಿಲ್ಲೆಗೆ 2024-25ನೇ ಸಾಲಿನಲ್ಲಿ 50.00 ಲಕ್ಷ ಮಾನವ ದಿನಗಳ ಸೃಜನೆಯ ಗುರಿ ನೀಡಲಾಗಿತ್ತು. ಮಾರ್ಚ.31, 2025ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಬೀದರ ಜಿಲ್ಲೆಯು 62,28,784 ಮಾನವದಿನಗಳನ್ನು ಸೃಜಿಸುವ ಮೂಲಕ 130.58% ಸಾಧನೆ ಮಾಡಿ ರಾಜ್ಯದಲ್ಲಿ ಅತೀ ಹೆಚ್ಚು ಮಾನವದಿನ ಸೃಜನೆ ಮಾಡಿದ ಜಿಲ್ಲೆಗಳಲ್ಲಿ 3ನೇ ಸ್ಥಾನವನ್ನು ಪಡೆದಿದೆ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳಲ್ಲಿ ಮೊದಲನೆ ಸ್ಥಾನದಲ್ಲಿದೆಂದರು.
ಬೀದರ ಜಿಲ್ಲೆಯಲ್ಲಿ 2,57,344 ಉದ್ಯೋಗ ಚೀಟಿಗಳಿದ್ದು ಅದರಲ್ಲಿ 1,62,841 ಕ್ರಿಯಾಶೀಲ ಉದ್ಯೋಗ ಚೀಟಿಗಳಿರುತ್ತವೆ. ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ 1,27,932 ಕುಟುಂಬಗಳಿಗೆ ಕೂಲಿ ನೀಡಲಾಗಿದೆ. ಅದರಲ್ಲಿ 31,190 ಕುಟುಂಬಗಳು ಪರಿಶಿಷ್ಟಜಾತಿಗೆ ಸೇರಿದ್ದರೆ 22,524 ಕುಟುಂಬಗಳು ಪರಿಶಿಷ್ಟ ಪಂಗಡಕ್ಕೆ ಸೇರಿರುತ್ತವೆ. ಅತೀ ಸಣ್ಣ ರೈತರು ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ ಕುಟುಂಬಗಳು 74,217 ಆಗಿರುತ್ತದೆ, ಒಟ್ಟು ಕೂಲಿಕಾರರಲ್ಲಿ 1,07,984 ಮಹಿಳೆಯರಿಗೆ ಕೂಲಿ ಕೆಲಸ ನೀಡಲಾಗಿದೆ. ಒಟ್ಟು ಸೃಜಿಸಿದ 62,28,784 ಮಾನವ ದಿನಗಳಲ್ಲಿ 35,62,252 ಮಾನವ ದಿನಗಳನ್ನು ಮಹಿಳಾ ಕೂಲಿಕಾರರಿಂದ ಸೃಜಿಸಲಾಗಿದ್ದು, ಇದು ಪ್ರತಿಶತ 54.56% ಆಗಿರುತ್ತದೆ. 519 ವಿಕಲಚೇತನರಿಗೆ ಕೂಲಿ ಕೆಲಸ ನೀಡಲಾಗಿದೆ. ಬೀದರ ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ 1033 ಕುಟುಂಬಗಳ ಕೂಲಿಕಾರರು ಪೂರ್ಣ 100 ದಿನಗಳ ಕೆಲಸ ಪಡೆದಿರುತ್ತಾರೆಂದರು.
ಮಹಾತ್ಮಗಾAಧಿ ನರೇಗಾ ಯೋಜನೆಯು ಜಿಲ್ಲೆಯ ಗ್ರಾಮೀಣ ಪ್ರದೇಶದ ಕುಟುಂಬಗಳ ಆರ್ಥಿಕ ಪುನಶ್ಚೇತನಕ್ಕೆ ನೆರವಾಗುವುದಲ್ಲದೆ ಬಡ ಕೂಲಿಕಾರ್ಮಿಕರು ಉದ್ಯೋಗ ಅರಸಿ ಮುಂಬೈ, ಪುಣೆ, ಹೈದರಾಬಾದ ಮತ್ತು ಬೆಂಗಳೂರು ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸುವಲ್ಲಿ ಸಹಕಾರಿಯಾಗಿದೆ. ಹಾಗೆಯೇ ಬೀದರ ಜಿಲ್ಲೆಯ ಗ್ರಾಮೀಣ ಕೂಲಿಕಾರರು 2025-26ನೇ ಸಾಲಿನಲ್ಲಿಯೂ ಸಹ ಅತೀ ಹೆಚ್ಚು ಸಂಖ್ಯೆಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕೆಲಸ ಮಾಡುವ ಮೂಲಕ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಗಿರೀಶ ಬದೋಲೆ ತಿಳಿಸಿದ್ದಾರೆ.