ಬೀದರ18.ಜೂನ್25.:- ‘ಮಹಾತ್ಮಗಾಂಧಿ ನರೆಗಾ ಯೋಜನೆಯಡಿ ಸಾಮಾಜಿಕ ಪರಿಶೋಧನೆಯು ಕಡ್ಡಾಯ ಪ್ರಕ್ರಿಯೆಯಾಗಿದ್ದು ಅದನ್ನು ಜವಾಬ್ದಾರಿಯಿಂದ ನಿರ್ವಹಿಸಿ. ಈಗಾಗಲೇ ಸಾಮಾಜಿಕ ಲೆಕ್ಕ ಪರಿಶೋಧನೆಯ ದಿನಾಂಕಗಳನ್ನು ನಿಗದಿಪಡಿಸಿ ಕಳಿಸಲಾಗಿದೆ. ಆ ಕ್ಯಾಲೆಂಡರ್ ಗೆ ಅನುಗುಣವಾಗಿ ನಿಗದಿತ ದಿನಾಂಕಗಳoದೇ ಸಾಮಾಜಿಕ ಲೆಕ್ಕ ಪರಿಶೋಧನೆಯ ಗ್ರಾಮ ಸಭೆಗಳನ್ನು ಜರುಗಿಸಿ.ಗ್ರಾಮ ಸಭೆಯಲ್ಲಿ ಗ್ರಾಮ ಪಂಚಾಯತಿಗಳ ಪಿಡಿಒಗಳು, ಅನುಷ್ಠಾನ ಇಲಾಖೆಯ ತಾಲೂಕಾ ಮಟ್ಟದ ಅಧಿಕಾರಿಗಳು, ನರೆಗಾ ತಾಂತ್ರಿಕ ಸಿಬ್ಬಂದಿಯವರು ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ಬೀದರ ಜಿಲ್ಲಾ ಪಂಚಾಯತಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಗಿರೀಶ ಬದೋಲೆ ಅವರು ಸೂಚಿಸಿದರು.
ಅವರು ಸೋಮವಾರ ಬೀದರ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ನಡೆದ 2025ನೇ ಸಾಲಿನ ಸಾಮಾಜಿಕ ಲೆಕ್ಕ ಪರಿಶೋಧನೆಯ ಗ್ರಾಮ ಸಭೆಯ ಅಧ್ಯಕ್ಷರಾಗಿ ಆಯ್ಕೆಯಾದ ನೋಡಲ್ ಅಧಿಕಾರಿಗಳ ತರಬೇತಿ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಮಹಾತ್ಮ ಗಾಂಧಿ ನರೆಗಾ ಯೋಜನೆ,15 ನೇ ಹಣಕಾಸು ಆಯೋಗದ ಅನುದಾನದ 01.04.2024 ರಿಂದ 31.03.2025 ರ ವರೆಗಿನ ಅವಧಿಯ ರನರೆಗಾ ಹಣಕಾಸು ಆಯೋಗದ 01.04.2020 ರಿಂದ 31.03.2025 ರವರೆಗೆ ಅನುಷ್ಠಾನಗೊಂಡ ಎಲ್ಲಾ ಕಾಮಗಾರಿಗಳ ಸಾಮಾಜಿಕ ಪರಿಶೋಧನೆ ನಡೆಸಲಾಗುತ್ತಿದ್ದು ನಿಗದಿತ ವೇಳಾಪಟ್ಟಿಯಂತೆ ಗ್ರಾಮ ಪಂಚಾಯತಿ ನೋಡಲ್ ಅಧಿಕಾರಿಗಳು ಮತ್ತು ಅನುಷ್ಠಾನ ಇಲಾಖೆಗಳ ಅಧಿಕಾರಿಗಳು ಪಾಲ್ಗೊಳ್ಳಬೇಕು. ಸಾಮಾಜಿಕ ಪರಿಶೋಧನೆಗೆ ಅಗತ್ಯವಿರುವ ಕಡತ,ದಾಖಲೆಗಳನ್ನು 15 ದಿನಗಳ ಮುಂಚಿತವಾಗಿ ಸಾಮಾಜಿಕ ಪರಿಶೋಧನಾ ತಂಡಕ್ಕೆ ನೀಡಬೇಕು.
ಸಾಮಾಜಿಕ ಪರಿಶೋಧನಾ ಪ್ರಕ್ರಿಯೆ ಪ್ರಾರಂಭಿಸುವ ಮೊದಲು ವಾರದಲ್ಲಿ 3 ಬಾರಿ ಹಾಗೂ ಗ್ರಾಮ ಸಭೆಯ ಹಿಂದಿನ ದಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಡಂಗೂರ ಸಾರಿ ಸಾಮಾಜಿಕ ಪರಿಶೋಧನಾ ಗ್ರಾಮ ಸಭೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು.
ಗ್ರಾಮ ಪಂಚಾಯತ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಹೆಚ್ಚು ಜನಸಂದಣಿ ಇರುವ ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಪರಿಶೋಧನೆಯ ಕುರಿತು ಬ್ಯಾನರ್ಗಳನ್ನು ಅಳವಡಿಸಬೇಕು ಹಾಗೂ ಸಾಮಾಜಿಕ ಪರಿಶೋಧನಾ ವೇಳಾಪಟ್ಟಿಯನ್ನು ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಿಸಿ ಪ್ರಚುರಪಡಿಸಬೇಕು” ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಮತ್ತು ನರೆಗಾ ಜಿಲ್ಲಾ ನೋಡಲ್ ಅಧಿಕಾರಿ ಮುಕ್ಕಣ್ಣ ಕರಿಗಾರ, ಸಹಾಯಕ ಕಾರ್ಯದರ್ಶಿ ಬೀರೇಂದ್ರಸಿoಗ್, ಸಾಮಾಜಿಕ ಅರಣ್ಯ ಇಲಾಖೆಯ ಡಿಸಿಎಫ್ ಎ.ಬಿ ಪಾಟೀಲ್, ಪಿಆರ್ ಇಡಿಯ ಕಾರ್ಯಪಾಲಕ ಅಭಿಯಂತರರಾದ ಶಿವಾಜಿ ದೋಣಿ, ಸಾಮಾಜಿಕ ಲೆಕ್ಕ ಪರಿಶೋಧನೆಯ ಜಿಲ್ಲಾ ವ್ಯವಸ್ಥಾಪಕ ದೇವದಾಸ, ಎಡಿಪಿಸಿ ದೀಪಕ್ ಕಡಿಮನಿ,ಎಲ್ಲಾ ತಾಲೂಕಾ ಪಂಚಾಯತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳು,ನರೆಗಾ ಸಹಾಯಕ ನಿರ್ದೇಶಕರುಗಳು, ಗ್ರಾಮ ಪಂಚಾಯತಿಗಳ ಅಧ್ಯಕ್ಷರುಗಳು, ಪಿಡಿಒಗಳು, ಟಿಸಿಗಳು, ಟಿಐಇಸಿಗಳು, ನರೆಗಾ ಅಧೀಕ್ಷಕ ಬಶೀರ್,ಡಿಐಇಸಿ ರಜನಿಕಾಂತ್, ಮಹ್ಮದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.