ಬೆಂಗಳೂರು.22.ಏಪ್ರಿಲ್.25:- ಬೇಸಿಗೆ ರಜೆಯನ್ನು ಆಟೋಟಗಳಲ್ಲಿ ಕಳೆಯುವ ಮಕ್ಕಳು, ಈಗ ಬಿಡುವಿನ ಅವಧಿಯನ್ನು ಮನರಂಜನೆಯ ಜೊತೆ ಕಲಿಕೆಗೂ ಬಳಸಿಕೊಳ್ಳುತ್ತಿದ್ದಾರೆ. ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು, ಹವ್ಯಾಸಗಳನ್ನು ರೂಢಿಸಿಕೊಳ್ಳಲು ಗ್ರಾಮ ಪಂಚಾಯತಿಗಳ ಅರಿವು ಕೇಂದ್ರಗಳಲ್ಲಿ ಆಯೋಜಿಸುತ್ತಿರುವ ‘ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ’ಗಳು ನೆರವಾಗುತ್ತಿವೆ.
ಬೇಸಿಗೆ ಶಿಬಿರವು ಮಕ್ಕಳಲ್ಲಿ ಪರಿಸರ ಕಾಳಜಿ, ಸಾಮಾಜಿಕ ತಿಳಿವಳಿಕೆ, ವಿಜ್ಞಾನ ಮತ್ತು ಇತಿಹಾಸದಂತಹ ವಿಷಯಗಳನ್ನು ಕಲಿಯುವ ಅವಕಾಶ ಕಲ್ಪಿಸುತ್ತಿದೆ. ಅಲ್ಲದೆ ಅವರಲ್ಲಿ ನಾಯಕತ್ವ ಮನೋಭಾವ ಬೆಳೆಸುವುದು, ಸಂವಹನ ಸಾಮರ್ಥ್ಯ ವೃದ್ಧಿ, ಸೃಜನಶೀಲತೆ, ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಚಟುವಟಿಕೆಗಳನ್ನು ನಡೆಸುತ್ತಿವೆ.
ಉಡುಪಿ ಜಿಲ್ಲೆ, ಬ್ರಹ್ಮಾವರ ತಾಲ್ಲೂಕಿನ ಹಾವಂಜೆ ಗ್ರಾಮ ಪಂಚಾಯತಿಯು ಈ ದಿಸೆಯಲ್ಲಿ ಗಮನಾರ್ಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಬೇಸಿಗೆ ಶಿಬಿರವು ತನ್ನ ಬೌದ್ಧಿಕ ವಿಕಾಸಕ್ಕೆ ಹೇಗೆ ನೆರವಾಗಿದೆ ಎಂಬುದನ್ನು ಉಪ್ಪೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ದೀಕ್ಷಾ ವಿವರಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿ ಬೇಸಿಗೆ ಅವಧಿಯಲ್ಲಿ ಮಕ್ಕಳ ಸೃಜನಾತ್ಮಕ ಬೆಳವಣಿಗೆಗೆ ಹಿನ್ನಡೆಯಾಗಬಾರದು ಹಾಗೂ ಈ ರಜೆಯು ಸದ್ಬಳಕೆಯಾಗಬೇಕು ಎನ್ನುವುದು ಬೇಸಿಗೆ ಶಿಬಿರದ ಮೂಲ ಉದ್ದೇಶ. ಇದನ್ನು ಗ್ರಾಮೀಣ ಮಕ್ಕಳು ಸದ್ಬಳಕೆ ಮಾಡಿಕೊಳ್ಳುವುದರೊಂದಿಗೆ ನಮ್ಮ ಆಶಯ ಸಫಲವಾಗುತ್ತಿರುವ ಸಂತಸದ ಸಂಗತಿ.
ಗ್ರಾಮ ಪಂಚಾಯತಿಗಳು ಇಂದು ಗ್ರಾಮಾಡಳಿತಕ್ಕಷ್ಟೇ ಸೀಮಿತವಾಗಿಲ್ಲ. ಇವು ಹಳ್ಳಿಗಳು ಮತ್ತು ಗ್ರಾಮೀಣರ ಸಮಗ್ರ ಅಭ್ಯುದಯಕ್ಕೆ ವೇದಿಕೆ ಕಲ್ಪಿಸುತ್ತಿವೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಧ್ಯೇಯಕ್ಕೆ ಪೂರಕವಾಗಿ ಪಂಚಾಯತಿಗಳು ಆಬಾಲವೃದ್ಧರವರೆಗೆ ಜ್ಞಾನಾರ್ಜನೆಯ ಕೇಂದ್ರಗಳಾಗಿ ಪರಿವರ್ತನೆ ಹೊಂದುತ್ತಿದೆ. ಗ್ರಾಮೀಣ ಜನತೆಯ, ಮುಖ್ಯವಾಗಿ ಭವಿಷ್ಯದ ಪ್ರಜೆಗಳ ಬೌದ್ಧಿಕ ವಿಕಸನಕ್ಕೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ನಮ್ಮ ಕಾಂಗ್ರೆಸ್ ಸರ್ಕಾರದ ಗುರಿ.
