ಬೀದರ.13.ಜುಲೈ.25:- ಜಿಲ್ಲೆಯ ರೈತರು ಹೆಚ್ಚಿನ ಪ್ರಮಾಣದಲ್ಲಿ ಬೆಳೆ ವಿಮೆಗೆ ನೋಂದಣಿ ಮಾಡಿಕೊಳ್ಳಲು ಕೃಷಿ ಇಲಾಖೆಯಿಂದ ಗ್ರಾಮ ಮಟ್ಟದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಮಾಡಬೇಕೆಂದು ಬೀದರ ಜಿಲ್ಲಾ ಕೃಷಿಕ ಸಮಾಜದ ಸಿದ್ರಾಮಯ್ಯಾ ಸ್ವಾಮಿ ತಿಳಿಸಿದರು.
ಅವರು ಇತ್ತೀಚಿಗೆ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ನಡೆದ ಜಿಲ್ಲೆಯ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೃಷಿ ಇಲಾಖೆಯ ಎಲ್ಲಾ ಯೋಜನೆಗಳು ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಅನುಷ್ಠಾನವಾಗಬೇಕು. ರೈತರು ಕೇವಲ ಸೋಯಾಅವರೆ ಬೆಳೆ ಬೆಳೆಯದೆ ಮಿಶ್ರಬೆಳೆ ಪದ್ದತಿ ಅಸನುಸರಿಸಬೇಕೆಂದರು.
ಸಿರಿಧಾನ್ಯ ಬೆಳೆಯುವ ರೈತರಿಗೆ ಸರಕಾರದ ಸಹಾಯಧನ ಇರುವುದರಿಂದ ಹೆಚ್ಚಿನ ರೈತರು ಇದರ ಸದುಪಯೋಗ ಪಡೆಯಬೇಕು. ರೈತರು ಡಿ.ಎ.ಪಿ ಗೊಬ್ಬರಕ್ಕೆ ಪರ್ಯಾಯ ಸಂಯುಕ್ತ ಗೊಬ್ಬರ ಬಳಕೆ ಹಾಗೂ ಯೂರಿಯಾ ಗೊಬ್ಬರಕ್ಕೆ ಪರ್ಯಾಯವಾಗಿ ನ್ಯಾನೂ ಯುರಿಯಾ ಬಳಸುವುದು ಸೂಕ್ತ. ಈ ದಿಸೆಯಲ್ಲಿ ಕೃಷಿ ಇಲಾಖೆಯಿಂದ ಹಾಗೂ ತಾಲ್ಲೂಕು ಕೃಷಿಕ ಸಮಾಜದ ಘಟಕದಿಂದ ವ್ಯಾಪಕ ಪ್ರಚಾರ ಕೈಗೊಂಡು ರೈತರಿಗೆ ಸಂಯುಕ್ತ ಗೊಬ್ಬರ ಬಳಕೆ ಹಾಗೂ ನ್ಯಾನೂ ಯುರಿಯಾ ಬಳಸಲು ಪ್ರೋತ್ಸಾಹಿಸಬೇಕೆಂದರು.
ಈ ಸಭೆಯಲ್ಲಿ ಬೀದರ ಜಂಟಿ ಕೃಷಿ ನಿರ್ದೇಶಕರಾದ ದೇವಿಕಾ ಆರ್, ಕೃಷಿ ಅಧಿಕಾರಿ ಕೈಲಾಸನಾಥ, ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷ ಉಮಾಕಾಂತ, ಖಜಾಂಚಿ ಗೋವಿಂದರೆಡ್ಡಿ, ಪ್ರಧಾನ ಕಾರ್ಯದರ್ಶಿ ಸಂಗಮೇಶ ವಾಲೆ, ರಾಜ್ಯ ಪ್ರತಿನಿಧಿ ಹಾಗೂ ಸದಸ್ಯರಾದ ವಿಶ್ವನಾಥ ಪಾಟೀಲ, ಜನವಾಡ ಕೃಷಿ ವಿಜ್ಞಾನ ಕೇಮದ್ರದ ಹಿರಿಯ ವಿಜ್ಞಾನಿ ಡಾ.ಉಮೇಶ, ಡಾ.ಭವಾನಿ, ಕ.ರಾ.ಸ.ಮಂ.ವ್ಯವಸ್ಥಾಪಕ ಮಲ್ಲಿಕಾರ್ಜುನ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
