ಬೀದರ.04.ಮಾರ್ಚ.25:- ಬೀದರ್ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಕನಿಷ್ಠ 60ರಿಂದ 80 ಎಕರೆ ಸರ್ಕಾರಿ ಭೂಮಿಯನು ಉಚಿತವಾಗಿ ನೀಡಲು ಜಿಲ್ಲಾಧಿಕಾರಿಗೆ ಎಪಿಎಂಸಿ ಕಾರ್ಯದರ್ಶಿ ಪತ್ರ ಬರೆದಿದ್ದಾರೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ಮಂಗಳವಾರ ವಿಧಾನಪರಿಷತ್ತಿಗೆ ತಿಳಿಸಿದ್ದಾರೆ.
ಪ್ರಸ್ತುತ ಬೀದರ್ ಎಪಿಎಂಸಿ 39 ಎಕರೆ 28 ಗುಂಟೆ ಭೂಮಿ ಹೊಂದಿದ್ದು, ಈಗಾಗಲೇ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇನ್ನೂ ಎಪಿಎಂಸಿ ವಹಿವಾಟು ವಿಸ್ತರಣೆ ಮಾಡಲು ಸ್ಥಳಾವಕಾಶದ ಕೊರತೆ ಇರುವ ಕಾಣ ಬೀದರ್ ಸುತ್ತಮುತ್ತ 80 ಎಕರೆ ಸರ್ಕಾರದ ಭೂಮಿ ಒದಗಿಸಲು ಕೋರಲಾಗಿದೆ ಎಂದು ಸಚಿವರು ಶಾಸಕ ಭೀಮ್ರಾವ್ ಬಸವರಾಜ ಪಾಟೀಲ್ ಅವರ ಪ್ರಶ್ನೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಬೀದರ್ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಅಧಿಸೂಚಿತ ಕೃಷಿ ಉತ್ಪನ್ನಗಳ ಮಾರುಕಟ್ಟೆ ಪ್ರಾಂಗಣದ ವಿಸ್ತರಣೆಗಾಗಿ ಅನುಮೋದಿತ ದದ ಪ್ರತಿಶತ 50ರ ರಿಯಾಯಿತಿ ದರದಲ್ಲಿ ನೂರು ಎಕರೆ ಭೂಮಿ ಮಂಜೂರು ಮಾಡುವಂತೆ ಕೃಷಿ ಮಾರಾಟ ಇಲಾಖೆ ನಿರ್ದೇಶಕರು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ಕೋರಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
ಬೀದರ್ ಜಿಲ್ಲೆಯ ವ್ಯಾಪ್ತಿಯಲ್ಲಿ ಬೀದರ್, ಔರಾದ್ (ಬಾ), ಹುಮನಾಬಾದ್, ಬಸವಕಲ್ಯಾಣ ಮತ್ತು ಭಾಲ್ಕಿಯಲ್ಲಿ ಎಪಿಎಂಸಿಗಳು ಕಾರ್ಯನಿರ್ವಹಿಸುತ್ತಿವೆ. ಔರಾದ್ ಎಪಿಎಂಸಿ 45 ಎಕರೆ, ಹುಮನಾಬಾದ್ 16 ಎಕರೆ 15 ಗುಂಟೆ, ಬಸವಕಲ್ಯಾಣ 16 ಎಕರೆ 8 ಗುಂಟೆ ಹಾಗೂ ಭಾಲ್ಕಿ ಎಪಿಎಂಸಿ 36 ಎಕರೆ 37 ಗುಂಟೆ ಭೂಮಿ ಹೊಂದಿದ್ದು, ಈ ಮಾರುಕಟ್ಟೆಗಳಲ್ಲಿ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಸ್ಥಳಾವಕಾಶದ ಕೊರತೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.