ಹೊಸ ದೆಹಲಿ.10.ಏಪ್ರಿಲ್.25:- ಕರ್ನಾಟಕದ ಮತ್ತು ಮಹಾರಾಷ್ಟ್ರ ನಡುವಿನ ಹೊಸ 155 ಕಿ. ಮೀ. ಉದ್ದದ ರೈಲು ಮಾರ್ಗ ನಿರ್ಮಾಣಕ್ಕೆ ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳು ವೆಚ್ಚ ಹಂಚಿಕೆ ಮಾಡಿಕೊಳ್ಳಬೇಕು ಎಂದು ರೈಲ್ವೆ ಸಚಿವಾಲಯ ಸೂಚನೆ ನೀಡಿದೆ.
ಮಹಾರಾಷ್ಟ್ರ ಶೇ 50ರಷ್ಟು ವೆಚ್ಚ ಹಂಚಿಕೆ, ಭೂಮಿ ನೀಡಲು ಒಪ್ಪಿದೆ. ಆದರೆ ಕರ್ನಾಟಕ ಸರ್ಕಾರದ ಕಡೆಯಿಂದ ಇನ್ನೂ ಒಪ್ಪಿಗೆ ಸಿಗದ ಕಾರಣಕ್ಕೆ ಯೋಜನೆ ಜಾರಿಗೊಳಿಸುವುದು ವಿಳಂಬವಾಗುತ್ತಿದೆ.
ಹಲವು ವರ್ಷಗಳ ಬೇಡಿಕೆಯಾದ ಬೀದರ್-ನಾಂದೇಡ್ ಹೊಸ ರೈಲು ಮಾರ್ಗಕ್ಕೆ ಮಂಜೂರಾತಿ ದೊರೆತಿದೆ. ಯೋಜನೆಗೆ 2,354 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ರೈಲು ಮಾರ್ಗ ನಿರ್ಮಾಣದ ಸಮೀಕ್ಷೆ ಮುಗಿದು ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರು ಮಾಡಲಾಗಿದೆ. ಆದರೆ ವೆಚ್ಚ ಹಂಚಿಕೆ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ.
ಲೋಕಸಭೆಯಲ್ಲಿ ಮಾತು: ಈ ಕುರಿತು ಲೋಕಸಭೆಯಲ್ಲಿ ರೈಲ್ವೆ ಇಲಾಖೆಯ ಲಿಖಿತ ಉತ್ತರವನ್ನು ಬಿಡುಗಡೆ ಮಾಡಲಾಗಿದೆ. ಬೀದರ್-ನಾಂದೇಡ್ ನೇರ ರೈಲು ಮಾರ್ಗ ಯೋಜನೆಯನ್ನು ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳ ವೆಚ್ಚ ಹಂಚಿಕೆಯ ಆಧಾರದ ಮೇಲೆ ಕೈಗೊಳ್ಳಲಾಗುತ್ತದೆ ಎಂದು ಇಲಾಖೆ ಹೇಳಿದೆ.
ಈಗಾಗಲೇ 155 ಕಿ. ಮೀ. ಉದ್ದದ ಯೋಜನೆಗೆ ಮಹಾರಾಷ್ಟ್ರ ಶೇ 50ರಷ್ಟು ವೆಚ್ಚ, ಭೂಮಿಯನ್ನು ನೀಡಲು ಒಪ್ಪಿಗೆ ನೀಡಿದೆ. ಆದರೆ ಕರ್ನಾಟಕ ಸರ್ಕಾರದ ಒಪ್ಪಿಗೆಗಾಗಿ ಕಾಯಲಾಗುತ್ತಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಸಮೀಕ್ಷೆಯಲ್ಲಿ ಈ ಮಾರ್ಗದಲ್ಲಿ ಕಡಿಮೆ ರೈಲುಗಳು ಸಂಚಾರ ನಡೆಸುತ್ತವೆ ಎಂಬ ಅಂಶ ತಿಳಿಯಿತು. ಬಳಿಕ ಕೇಂದ್ರ ಸರ್ಕಾರ ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳು ವೆಚ್ಚ ಹಂಚಿಕೆ ಮಾಡಿಕೊಳ್ಳುವುದಾದರೆ ಯೋಜನೆಯನ್ನು ಜಾರಿಗೊಳಿಸುತ್ತೇವೆ ಎಂದು ಹೇಳಿತು.
ಕರ್ನಾಟಕದ ಗಡಿ ಜಿಲ್ಲೆ ಬೀದರ್ ಈಗಾಗಲೇ ಪ್ರಭಾನಿ, ಪರ್ಲಿ ವೈಜನಾಥ್ ಮೂಲಕ ನಾಂದೇಡ್ ನಡುವೆ ಸಂಪರ್ಕವನ್ನು ಹೊಂದಿದೆ. ಆದರೆ ಬೀದರ್-ನಾಂದೇಡ್ ನಡುವಿನ ನೇರ ಸಂಪರ್ಕಕ್ಕಾಗಿ ಈ ಹೊಸ 155 ಕಿ. ಮೀ. ರೈಲು ಮಾರ್ಗದ ಯೋಜನೆಯ ಪ್ರಸ್ತಾಪ ಮಾಡಲಾಗಿದ್ದು, ಡಿಪಿಆರ್ ಸಹ ತಯಾರು ಮಾಡಲಾಗಿದೆ.
ಈ ರೈಲು ಯೋಜನೆ ಕರ್ನಾಟಕ ಮತ್ತು ಮಹಾರಾಷ್ಟ್ರ ಮೂಲಕ ಹಾದು ಹೋಗುತ್ತದೆ. ಆದ್ದರಿಂದ ಯೋಜನಾ ವೆಚ್ಚವನ್ನು ಎರಡು ರಾಜ್ಯಗಳು ಭರಿಸಬೇಕು ಎಂದು ಕೇಂದ್ರ ರೈಲ್ವೆ ಸಚಿವಾಲಯ ತಿಳಿಸಿದೆ. ಮಹಾರಾಷ್ಟ್ರ ಇದಕ್ಕೆ ಒಪ್ಪಿದೆ. ಆದರೆ ಕರ್ನಾಟಕದ ಒಪ್ಪಿಗೆ ಬಾಕಿ ಇದೆ.
ಯೋಜನೆಯನ್ನು ಲತೂರ್-ನಾಂದೇಡ್ (91.3 ಕಿ. ಮೀ) ಮತ್ತು ಬೀದರ್-ನಾಂದೇಡ್ ಎಂದು ಎರಡು ವಿಭಾಗವಾಗಿ ಮಾಡಲಾಗಿದೆ. ಕರ್ನಾಟಕ ಒಪ್ಪಿಗೆ ನೀಡಿದರೆ ಈ ರೈಲು ಯೋಜನೆಯನ್ನು ಪ್ರಾರಂಭಿಸುತ್ತೇವೆ ಎಂದು ಲೋಕಸಭೆಯಲ್ಲಿ ಮಾಹಿತಿ ನೀಡಲಾಗಿದೆ.
2017ರಲ್ಲಿಯೇ ಈ ರೈಲು ಯೋಜನೆ ಆರಂಭವಾಗಲಿದೆ ಎಂದು ಅಂದಾಜಿಸಲಾಗಿತ್ತು. ಬೀದರ್ ಸಂಸದರಾಗಿದ್ದ ಭಗವಂತ ಖೂಬಾ ಸಹ ಶೀಘ್ರ ಕಾಮಗಾರಿ ಆರಂಭವಾಗುತ್ತದೆ ಎಂದು ಭರವಸೆ ನೀಡಿದ್ದರು. ಎಷ್ಟು ವೆಚ್ಚವಾಗಲಿದೆ ಎಂದು ಅಂದಾಜು ಪಟ್ಟಿಯನ್ನು ತಯಾರಿಸಿ ಕೊಡುವಂತೆ ರೈಲ್ವೆ ಇಲಾಖೆಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದ್ದರು.