ಬೀದರ.02.ಮಾರ್ಚ.25:-ಬಂಜಾರ ಸಮಾಜ ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರ ಮತ್ತು ಸಮಾಜದಲ್ಲಿ ಜಾಗೃತಿ ಮೂಡಿಸಿ ಹಕ್ಕಿಗಾಗಿ ಹೋರಾಡಲು ಸಂಘಟಿಸುವ ಉದ್ದೇಶದಿಂದ ಮಾ. 5ರಿಂದ 10ರ ವರೆಗೆ ಜನಾಂದೋಲನ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಸೇವಾನಗರ ತಾಂಡಾದ ಶಿವಶಕ್ತಿ ಪೀಠದ ಗೋವಿಂದ ಮಹಾರಾಜ ಮಾಹಿತಿ ನೀಡಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋರಸೇನಾ ರಾಷ್ಟ್ರೀಯ ಸಂಘಟನೆ ರಾಜ್ಯ ಘಟಕದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸತತ ಆರು ದಿನ 15 ಜಿಲ್ಲೆಗಳಲ್ಲಿ 1,250 ಕಿ.ಮೀ ರಥಯಾತ್ರೆ ಸಂಚರಿಸಲಿದೆ ಎಂದು ವಿವರಿಸಿದರು.
ರಾಜ್ಯದಲ್ಲಿ ಸುಮಾರು 3,500ಕ್ಕೂ ಹೆಚ್ಚು ತಾಂಡಾಗಳಿವೆ. ಇದುವರೆಗೆ ಈ ಎಲ್ಲ ತಾಂಡಾಗಳ ಜನಸಂಖ್ಯೆ ಕುರಿತು ಯಾವುದೇ ವೈಜ್ಞಾನಿಕ ಅಧ್ಯಯನ ಆಗಿಲ್ಲ. ಪ್ರಸ್ತುತ ಮೀಸಲಾತಿ ಹಂಚಿಕೆ ಸಂಬಂಧ ರಚನೆಯಾಗಿರುವ ನಿವೃತ್ತ ನ್ಯಾಯಮೂರ್ತಿ ಎಚ್. ಎನ್. ನಾಗಮೋಹನದಾಸ ಏಕಸದಸ್ಯ ಆಯೋಗಕ್ಕೆ ಸಮರ್ಪಕ ದತ್ತಾಂಶದ ಕೊರತೆಯೂ ಎದುರಾಗಹುದು ಎಂಬ ಆತಂಕ ಸಮಾಜಕ್ಕೆ ಇದೆ.
ರಾಜ್ಯದಾದ್ಯಂತ ಇರುವ ಗೋರ ಬಂಜಾರ ಜನಾಂಗದ ಸಂಪೂರ್ಣ ವೈಜ್ಞಾನಿಕ ದತ್ತಾಂಶ ಸಂಗ್ರಹಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ತಾಂಡಾ ಜನರ ಏಳಿಗೆ, ಮುಖ್ಯ ವಾಹಿನಿಯಲ್ಲಿ ಭಾಗವಹಿಸುವಿಕೆಯ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮಾ. 10ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸೇರಿ, ಸರ್ಕಾರಕ್ಕೆ ನಮ್ಮ ಬೇಡಿಕೆಗಳ ಈಡೇರಿಕೆಗೆ ಹಕ್ಕೊತ್ತಾಯ ಮಾಡಲಾಗುವುದು ಎಂದರು.
ಗೋರ ಶಿಖವಾಡಿ ಸಂಘಟನೆಯ ಜಿಲ್ಲಾಧ್ಯಕ್ಷ ಗೋವರ್ಧನ ರಾಠೋಡ್ ಮಾತನಾಡಿ ಸಮಾಜದವರು ಮೂಢನಂಬಿಕೆಗಳ ಬಲಿ ಪಶು ಆಗುತ್ತಿದ್ದಾರೆ. ಸಂಘಟನಾತ್ಮಕವಾಗಿ ಒಂದಿಲ್ಲ. ಇದೆಲ್ಲ ಮನಗಂಡು ಈ ಕಾರ್ಯಕ್ರಮ ರೂಪಿಸಲಾಗಿದೆ. ರಥಯಾತ್ರೆಯೂ ಭಾಲ್ಕಿ ತಾಲ್ಲೂಕಿನ ಸೇವಾನಗರ ತಾಂಡಾದಿಂದ ಬೀದರ್ ಕಲಬುರಗಿ ಮಾರ್ಗವಾಗಿ ಬೆಂಗಳೂರು ತಲುಪಲಿದೆ. ಮಾ. 10ರಂದು ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಗೋರಸೇನಾ ಜಿಲ್ಲಾಧ್ಯಕ್ಷ ರಮೇಶ ಜಾಧವ ಸವಿತಾಬಾಯಿ ರಾಠೋಡ್ ಬಾಬು ಜಾಧವ ನೀಲಕಂಠ ರಾಠೋಡ್ ಸುಧಾಕರ ರಾಠೋಡ್ ಅರವಿಂದ ರಾಠೋಡ್ ಕೃಷ್ಣ ರಾಠೋಡ್ ಹಾಜರಿದ್ದರು.