ಕಡೂರು.15. ಫೆ.25:- (ಚಿಕ್ಕಮಗಳೂರು): ಇಲ್ಲಿನ ಅಂಬೇಡ್ಕರ್ ಪ್ರತಿಮೆ ಎದುರು ಪ್ರೇಮಿಗಳ ದಿನದಂದು ಪ್ರೇಮಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ತಾಲ್ಲೂಕಿನ ಯಗಟಿ ಗ್ರಾಮದ ಕುಮಾರ್ (25) ಮತ್ತು ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಪುರ್ಲಹಳ್ಳಿಯ ಸುಚಿತ್ರಾ (20) ಅಂತರ್ಜಾತಿ ವಿವಾಹವಾದರು.
ಕುಮಾರ್ ಅವರು ಏಳನೇ ತರಗತಿಗೆ ಓದು ನಿಲ್ಲಿಸಿದ್ದರೆ, ಸುಚಿತ್ರಾ ದ್ವಿತೀಯ ಪಿಯುಸಿ ಓದಿದ್ದಾರೆ. ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.
‘ನಾನು ಮಾದಿಗ ಸಮುದಾಯಕ್ಕೆ ಸೇರಿದ್ದರೆ, ಸುಚಿತ್ರಾ ಲಂಬಾಣಿ ಸಮುದಾಯದವರು. ನಮ್ಮ ಮನೆಯಲ್ಲಿ ಎಲ್ಲರೂ ಒಪ್ಪಿದ್ದರು. ಸುಚಿತ್ರಾ ಮನೆಯಲ್ಲಿ ತಾಯಿ ಹೊರತುಪಡಿಸಿ ಉಳಿದವರು ಒಪ್ಪಿರಲಿಲ್ಲ. ಆದ್ದರಿಂದ ಪ್ರೇಮಿಗಳ ದಿನದಂದು ಅದರಲ್ಲೂ ಅಂಬೇಡ್ಕರ್ ಪ್ರತಿಮೆ ಬಳಿಯೇ ಮದುವೆಯಾಗಬೇಕು ಎಂಬ ಆಸೆ ಇತ್ತು. ಅದರಂತೆ ಮದುವೆಯಾಗಿದ್ದೇವೆ’ ಎಂದು ಕುಮಾರ್ ತಿಳಿಸಿದರು.
ಬಿಜೆಪಿ ಮಂಡಲ ಉಪಾಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ, ತಾಲ್ಲೂಕು ಮಾದಿಗ ಸಮಾಜದ ಗೌರವಾಧ್ಯಕ್ಷ ಕೆ.ವೈ.ವಾಸು, ಅಧ್ಯಕ್ಷ ಜಗದೀಶ್, ಪ್ರಧಾನ ಕಾರ್ಯದರ್ಶಿ ಗಂಗರಾಜು, ಸಗನಪ್ಪ, ನಾರಾಯಣಸ್ವಾಮಿ, ತಿಮ್ಮಯ್ಯ ಈ ಪ್ರೇಮ ವಿವಾಹಕ್ಕೆ ಸಾಕ್ಷಿಯಾದರು.
Source prajawani