06/07/2025 7:22 AM

Translate Language

Home » ಲೈವ್ ನ್ಯೂಸ್ » ಪರಿಸರ ರಕ್ಷಣೆಗೆ ಪ್ರತಿಯೊಬ್ಬರು ಕೈಜೋಡಿಸಬೇಕು – ನ್ಯಾ ಮಹಾಂತೇಶ ದರಗದ

ಪರಿಸರ ರಕ್ಷಣೆಗೆ ಪ್ರತಿಯೊಬ್ಬರು ಕೈಜೋಡಿಸಬೇಕು – ನ್ಯಾ ಮಹಾಂತೇಶ ದರಗದ

Facebook
X
WhatsApp
Telegram

ಕೊಪ್ಪಳ.05.ಜುಲೈ.25:ಗೆ ಮನುಷ್ಯನ ಸುಖ, ಸಂತೋಷ ಪ್ರಕೃತಿಯಲ್ಲಿ ಅಡಗಿದ್ದು, ಪರಿಸರ ರಕ್ಷಣೆಗೆ ನಾವೆಲ್ಲರೂ ಕೈಜೋಡಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ ಎಸ್. ದರಗದ ಹೇಳಿದರು.


ಅವರು ಶನಿವಾರ ಕೊಪ್ಪಳ ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಕಾಲೇಜಿನ ಸಭಾಂಗಣದಲ್ಲಿ ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಹಾಗೂ ಶ್ರೀ ಗವಿಸಿದ್ಧೇಶ್ವರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪರಿಸರ ರಕ್ಷಣೆಯಲ್ಲಿ ಯಾರಲ್ಲಿಯೂ ನಿಶ್ಕಾಳಜಿ ಇರುವುದಿಲ್ಲ. ಆದರೆ, ಸರಿಯಾಗಿ ಪರಿಸರ ರಕ್ಷಣೆಯಾಗುತ್ತಿಲ್ಲ. ದಿನ ನಿತ್ಯವು ಪರಿಸರ ನಾಶವಾಗುತ್ತಿದೆ.

ಇದಕ್ಕೆ ಮುಖ್ಯ ಕಾರಣ ಮನುಷ್ಯನ ಆಸೆಗಳು ಹೆಚ್ಚಾಗುತ್ತಿರುವುದು. ಇಂದಿನ ಕಾಲದಲ್ಲಿ ಮನುಷ್ಯನ ಆಸೆಗಳಿಗೆ ಕೊನೆಯೇ ಇಲ್ಲದಂತಾಗಿದೆ. ಮನುಷ್ಯನು ಸಮಸ್ಯೆಗಳಲ್ಲಿ ಸಿಲುಕಿಕೊಂಡಾಗ ಅದರಿಂದ ಪರಿಹಾರ ಕಂಡುಕೊಳ್ಳಲು ಮತ್ತು ಸಮಾಧಾನ, ನೆಮ್ಮದಿಗಾಗಿ ಪ್ರಕೃತಿಯನ್ನೇ ಹುಡುಕಿಕೊಂಡು ಹೋಗುತ್ತಾನೆ.

ಹೀಗಿದ್ದರೂ ಸಹ ನಮ್ಮಲ್ಲಿ ಬದಲಾವಣೆಯಾಗುತ್ತಿಲ್ಲ. ನಾವೆಲ್ಲರೂ ಅಕ್ಷರವಂತರಾಗುತ್ತಿದ್ದೇವೆ. ಆದರೆ, ಬುದ್ದಿವಂತರಾಗುತ್ತಿಲ್ಲ. ಹಿಂದೆ ನಮ್ಮ ಪೂರ್ವಜರಲ್ಲಿ ಅಕ್ಷರವಂತರ ಸಂಖ್ಯೆ ತೀರಾ ಕಡಿಮೆ ಇದ್ದರು ಸಹ ಅವರಲ್ಲಿ ಪರಿಸರ ಕಾಳಜಿಯು ಹೆಚ್ಚಾಗಿತ್ತು. ಇದಕ್ಕೆ ಸೂಕ್ತ ನಿದರ್ಶನಗಳೆಂದರೆ ನಮ್ಮ ರಾಜ್ಯದಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದಿರುವ ವೃಕ್ಷ ಮಾತೆಯರಾದ ಸಾಲುಮರದ ತಿಮ್ಮಕ್ಕ ಮತ್ತು ತುಳಸಿ ಗೌಡ. ಇವರಿಬ್ಬರ ಬಗ್ಗೆ ಇಂದು ಹಲವಾರು ವಿದ್ಯಾರ್ಥಿಗಳು ಸಂಶೋದನೆಗಳನ್ನು ಮಾಡಿ ಪಿ.ಹೆಚ್.ಡಿ ಪಡೆಯುತ್ತಿದ್ದಾರೆ ಎಂದರು.
ಒಂದು ವರದಿ ಪ್ರಕಾರ ಕಳೆದ ಒಂದು ದಶಕದಲ್ಲಿ ನಾವು ಬಳಕೆ ಮಾಡಿ ಬಿಸಾಡಿದ ಪ್ಲಾಸ್ಟಿಕ್ ಪ್ರಮಾದವು ಹಿಂದಿನ ಒಂದು ಶತಮಾನದ ಒಟ್ಟು ಬಳಕೆಯ ಮೊತ್ತಕ್ಕೆ ಸಮವಾಗಿದೆ.

ಇದು ನಮ್ಮ ಅಕ್ಷರಸ್ಥರ ಸಾಧನೆಯಾಗಿದ್ದು, ಈ ಬಗ್ಗೆ ನಾವೆಲ್ಲರೂ ಚಿಂತನೆ ಮಾಡಿಕೊಳ್ಳಬೇಕಿದೆ. ಭೂಮಿ ಮೇಲೆ ಪ್ರತಿ ನಿಮಿಷಕ್ಕೆ 10 ಲಕ್ಷ ಪ್ಲಾಸ್ಟಿಕ್ ಬಾಟಲ್‌ಗಳನ್ನು ಕೊಂಡುಕೊಳ್ಳುತ್ತಿದ್ದೇವೆ. ಒಂದು ಸಮೀಕ್ಷೆ ಪ್ರಕಾರ 2050ರ ವೇಳೆಗೆ ಸಮುದ್ರದಲ್ಲಿ ಮೀನುಗಳಿಗಿಂತ ಹೆಚ್ಚು ಪ್ಲಾಸ್ಟಿಕ್ ಸೇರಿರುತ್ತದೆ ಎಂದು ವರದಿ ಮಾಡಲಾಗಿದೆ. ಓಜನ್ ಪದರು ಭೂಮಿಯ ರಕ್ಷಣಾ ಕವಚವು ಸಹ ಇಂದು ನಾಶವಾಗುತ್ತಿದೆ. ಇದರ ರಕ್ಷಣೆಯಾಗದೇ ಹೋದರೆ ಮನುಷ್ಯ ಜೀವಿಸುವುದು ಸಾಧ್ಯವಿಲ್ಲ. ಗಿಡ-ಮರಗಳ ನಾಶ ಮತ್ತು ಹೆಚ್ಚಿನ ಪ್ಲಾಸ್ಟಿಕ್ ಉಪಯೋಗದಿಂದ ಈ ಸ್ಥಿತಿ ಉಂಟಾಗಿದೆ. ಹಾಗಾಗಿ ಒಬ್ಬ ಮನುಷ್ಯನಿಗೆ ಎಷ್ಟು ಸಾಧ್ಯವೋ ಅಷ್ಟು ಗಿಡ-ಮರಗಳನ್ನು ಬೆಳಸಬೇಕು ಮತ್ತು ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಬೇಕು ಎಂದು ಹೇಳಿದರು.


ಕೊಪ್ಪಳ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ ಗುಂಡುರ ಅವರು ಮಾತನಾಡಿ, ಒಂದು ಗಿಡ ನೆಟ್ಟರೆ ಮಾತ್ರ ಪರಿಸರ ರಕ್ಷಣೆಯಾಗುವುದಿಲ್ಲ. ಅದರ ಪಾಲನೆ ಮತ್ತು ಪೋಷಣೆಯು ಸಹ ನಮ್ಮ ಕರ್ತವ್ಯವಾಗಿದೆ. ಪ್ರತಿಯೊಂದು ಮನೆಯ ಅಡುಗೆ ಮನೆಯಿಂದ ಪರಿಸರ ಸಂರಕ್ಷಣೆಯಾಗಬೇಕು.

ಅದಕ್ಕಾಗಿ ಹಸಿ ಮತ್ತು ಒಣ ಕಸಗಳನ್ನು ಪ್ರತ್ಯೇಕಿಸಿ, ಕಸ ವಿಲೇವಾರಿ ವಾಹನಗಳಿಗೆ ನೀಡಬೇಕು. ಪ್ಲಾಸ್ಟಿಕ್ ವಸ್ತುಗಳನ್ನು ಬಿಸಾಡದೆ ಅವುಗಳನ್ನು ಮರು ಬಳಕೆಗೆ ಮಾಡಿಕೊಳ್ಳಬೇಕು. ಪರಿಸರ ರಕ್ಷಣೆಯ ಜ್ಞಾನ ಮೊದಲು ನಮ್ಮೆಲ್ಲರಿಂದಲೇ ಬೆಳೆಯಬೇಕು ಎಂದರು.


ಕೊಪ್ಪಳ ಪರಿಸರ ಅಧಿಕಾರಿ ವೈ.ಎಸ್. ಹರಿಶಂಕರ ಅವರು ಮಾತನಾಡಿ, ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕೊಪ್ಪಳ ತಾಲ್ಲೂಕಿನ ವಿವಿಧ ಶಾಲಾ ವಿದ್ಯಾರ್ಥಿಗಳಿಗೆ ಪರಿಸರ ಕಾಳಜಿವುಳ್ಳ ಚಿತ್ರಕಲೆ, ಪ್ರಬಂಧ ಸ್ಪರ್ಧೆ ಮತ್ತು ಪರಿಸರ ಗೀತೆ ಗಾಯನ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಪ್ಲಾಸ್ಟಿಕ ಬಳಕೆಯನ್ನು ತಡೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಗಿಣಿಗೇರಾದ ಅಲ್ಟ್ರಾಟೆಕ್ ಸಿಮೆಂಟ್ ಕಂಪನಿಯವರಿಂದ ಬಟ್ಟೆ ಕೈಚಿಲಗಳನ್ನು ಸಿದ್ದಪಡಿಸಿ, ವಿತರಣೆ ಮಾಡಲಾಗುತ್ತಿದೆ ಎಂದರು.

ಕೊಪ್ಪಳದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಡಯಟ್ ಮತ್ತು ನೋಡಲ್ ಅಧಿಕಾರಿ ಗವಿಸಿದ್ದೇಶ್ವರಸ್ವಾಮಿ ರಾಚಯ್ಯ ಬೆಣಕಲ್ಲಮಠ ಅವರು ವಿಶೇಷ ಉಪನ್ಯಾಸ ನೀಡಿದರು. ವಿಜಯನಗರದ ಹಿರಿಯ ಪರಿಸರ ಅಧಿಕಾರಿ ಬಿ.ಎಸ್.ಮುರಳೀಧರ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು. ಶ್ರೀ ಗವಿಸಿದ್ದೇಶ್ವರ ಕಾಲೇಜಿನ ಪ್ರಾಂಶುಪಾಲರಾದ ಡಾ. ಚನ್ನಬಸವ ಎ. ಅವರು ಅಧ್ಯಕ್ಷತೆ ವಹಿಸಿ, ಮಾತನಾಡಿದರು.

*ಬಹುಮಾನ ವಿತರಣೆ:* ಚಿತ್ರಕಲೆ, ಪ್ರಬಂಧ ಸ್ಪರ್ಧೆ ಮತ್ತು ಪರಿಸರ ಗೀತೆ ಗಾಯನ ಸ್ಪರ್ಧೆಗಳನ್ನು ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ಇದೇ ಸಂದರ್ಭದಲ್ಲಿ ವಿತರಣೆ ಮಾಡಲಾಯಿತು. ಕಾರ್ಯಕ್ರಮ ಪ್ರಾರಂಭಕ್ಕೂ ಪೂರ್ವದಲ್ಲಿ ಶ್ರೀ ಗವಿಸಿದ್ದೇಶ್ವರ ಕಾಲೇಜು ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.

ಕಾರ್ಯಕ್ರಮದಲ್ಲಿ ಸಹಾಯಕ ಪರಿಸರ ಅಧಿಕಾರಿ ಅಮರ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಪ್ಪಳ ಪ್ರಾದೇಶಿಕ ಕಛೇರಿಯ ಸಿಬ್ಬಂದಿಗಳು ಹಾಗೂ ಶ್ರೀ ಗವಿಸಿದ್ದೇಶ್ವರ ಕಾಲೇಜಿನ ಉಪನ್ಯಾಸಕರು ಹಾಗೂ ಸಿಬ್ಬಂದಿಗಳು ಸೇರಿದಂತೆ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!