ಬೀದರ.13.ಮೇ.25:- ಸಮೀಕ್ಷಾದಾರರಿಗೆ, ಪ.ಜಾತಿ ಜನಾಂಗದವರು ತಮ್ಮ ಜಾತಿ/ಮೂಲ ಜಾತಿ/ಶಿಕ್ಷಣ/ಉದ್ಯೋಗ/ರಾಜಕೀಯ/ಸಾಮಾಜಿಕ ಹಾಗೂ ಆರ್ಥಿಕ ಇತ್ಯಾದಿ ಮಾಹಿತಿಯನ್ನು ನೀಡಿ ಸಮೀಕ್ಷೆಗೆ ಸಹಕರಿಸುವುದು ಬಹಳ ಮುಖ್ಯವಾಗಿರುತ್ತದೆ.
ಇದರಿಂದ ಅವರಿಗೆ ಮುಂದೆ ಒಳ ಮೀಸಲಾತಿ ಪ್ರಯೋಜನೆಯನ್ನು ಪಡೆಯುವಲ್ಲಿ ಸಹಾಯಕವಾಗುತ್ತದೆ.
2025ನೇ ಏಪ್ರಿಲ್ 9ರ ಸರ್ಕಾರದ ಆದೇಶದಲ್ಲಿ ರಾಜ್ಯ/ಜಿಲ್ಲಾ/ತಾಲ್ಲೂಕು ಮಟ್ಟದ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗಿಕರಣ ಕುರಿತು ಸಮೀಕ್ಷೆ ಕೈಗೊಳ್ಳುವ ಸಂಬoಧ ಸಮನ್ವಯ ಸಮಿತಿಗಳನ್ನು ರಚಿಸಿ ಇವುಗಳ ಮೇಲುಸ್ತುವಾರಿಯಲ್ಲಿ ಈ ಕೆಳಕಂಡ ಮೂರು ಹಂತಗಳಲ್ಲಿ ಸಮೀಕ್ಷೆಯನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ.
ಮೊದಲನೇ ಹಂತ: ದಿನಾಂಕ: 05.05.2025 ರಿಂದ 17.05.2025 ರವರೆಗೆ ಮನೆ – ಮನೆ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ.
ಎರಡನೇ ಹಂತ: ದಿನಾಂಕ: 19.05.2025 ರಿಂದ 21.05.2025 ರವರೆಗೆ ವಿಶೇಷ ಶಿಬಿರಗಳಲ್ಲಿ ಸಮೀಕ್ಷೆ ಹಮ್ಮಿಕೊಳ್ಳಲಾಗಿದೆ.
ಮೂರನೇ ಹಂತ: ದಿನಾಂಕ: 19.05.2025 ರಿಂದ 23.05.2025 ರವರೆಗೆ ಆನ್ಲೈನ್ ಮೂಲಕ ಸ್ವಯಂ ಘೋಷಣೆಗೆ ಅವಕಾಶ ಕಲ್ಪಿಸಲಾಗಿರುತ್ತದೆ. ಸಮೀಕ್ಷೆಗೆ ಸುಮಾರು 25 ಲಕ್ಷ ಪರಿಶಿಷ್ಟ ಜಾತಿ ಕುಟುಂಬಗಳು ಇರಬಹುದೆಂದು ಅಂದಾಜಿಸಲಾಗಿದೆ.
ಸಮೀಕ್ಷೆಯ ಉದ್ದೇಶಕ್ಕಾಗಿ ಈಗಾಗಲೇ ಜಿಲ್ಲಾ ಮಟ್ಟದ ಮಾಸ್ಟರ್ ಟ್ರೈನರ್ ಗಳನ್ನು ಗುರುತಿಸಿ ದಿನಾಂಕ: 25.04.2025 ರಂದು ರಾಜ್ಯ ಮಟ್ಟದಿಂದ ತರಬೇತಿ ನೀಡಲಾಗಿರುತ್ತದೆ. ಹಾಗೂ ತಾಲ್ಲೂಕು ಮಟ್ಟದ ಮಾಸ್ಟರ್ ಟ್ರೈನರ್ ಗಳಿಗೆ ಜಿಲ್ಲಾ ಮಟ್ಟದಲ್ಲಿ ದಿನಾಂಕ: 28.04.2025 ರಂದು ತರಬೇತಿ ನೀಡಲಾಗಿರುತ್ತದೆ.
ಸಮೀಕ್ಷೆಗೆ ನೇಮಕವಾಗಿರುವ ಸುಮಾರು 65,000 ಗಣತಿದಾರರು ಮತ್ತು ಮೇಲ್ವಿಚಾರಕರಿಗೆ ಸಮೀಕ್ಷೆಯ ಕುರಿತು ದಿನಾಂಕ: 02.05.2025 ಮತ್ತು 03.05.2025 ರಂದು ತಾಲ್ಲೂಕು ಮಟ್ಟದಲ್ಲಿ ತರಬೇತಿಯನ್ನು ನೀಡಲಾಗಿರುತ್ತದೆ. ಮತ್ತು ಎಲ್ಲಾ ಸಮೀಕ್ಷಾದಾರರಿಗೆ ಸಮೀಕ್ಷಾ ಕೈಪಿಡಿ ಮತ್ತು ಸಮೀಕ್ಷಾ ಕಿಟ್ಗಳನ್ನು ಒದಗಿಸಲು ಕ್ರಮವಹಿಸಲಾಗುತ್ತಿದೆ.
ಮಾಹಿತಿಯನ್ನು ವೈಜ್ಞಾನಿಕವಾಗಿ ಕಡಿಮೆ ಅವಧಿಯಲ್ಲಿ ಪಡೆಯುವ ಉದ್ದೇಶದಿಂದ ಇ-ಆಡಳಿತ ಇಲಾಖೆಯು ಅಭಿವೃದ್ಧಿ ಪಡಿಸಿರುವ ಅಂಡ್ರಾಯಿಡ್ ಆಧಾರಿತ ಮೊಬೈಲ್ ಆಪ್ ಮೂಲಕ ಸಮೀಕ್ಷೆಯನ್ನು ಕೈಗೊಳ್ಳಲಾಗುತ್ತಿದೆ.
ಸಮೀಕ್ಷೆ ನಡೆಸುವ ಎಲ್ಲಾ ಗಣತಿದಾರರ ಮೊಬೈಲ್ ಸಂಖ್ಯೆಗಳನ್ನು ಅಂಡ್ರಾಯಿಡ್ ಆಧಾರಿತ ಮೊಬೈಲ್ ಆಪ್ ಮುಖಾಂತರ ವೈಟ್ಲಿಸ್ಟಿಂಗ್ ಮಾಡಲಾಗಿದ್ದು, ಈ ಮೊಬೈಲ್ ನಂಬರಗಳನ್ನು ಹೊರತುಪಡಿಸಿ ಇತರೆ ಮೊಬೈಲ್ ನಂಬರ್ ಮುಖೇನ ಸಮೀಕ್ಷೆಯನ್ನು ಕೈಗೊಳ್ಳಲು ಸಾಧ್ಯವಾಗುವುದಿಲ್ಲ, ಇದರಿಂದಾಗಿ ಸಮೀಕ್ಷೆಯನ್ನು ಪಾರದರ್ಶಕವಾಗಿ ಹಮ್ಮಿಕೊಳ್ಳಲು ಸಾಧ್ಯವಾಗುತ್ತದೆ.
ಸಮೀಕ್ಷೆಯಲ್ಲಿ ಕುಟುಂಬ ತಂತ್ರಾoಶದಿoದ ಡಾಟಾಬೇಸ್ (ಪಡಿತರ ಚೀಟಿ) ನಲ್ಲಿರುವ ದತ್ತಾಂಶಗಳನ್ನು ಬಳಸಿಕೊಂಡು ಮಾಹಿತಿ ಸಂಗ್ರಹಿಸುತ್ತಿರುವುದರಿoದ, ವೈಜ್ಞಾನಿಕವಾದ ದತ್ತಾಂಶಗಳನ್ನು ಪಡೆಯಲು ಸಹಕಾರಿಯಾಗಿದೆ.
ಮೊಬೈಲ್ ಆಪ್ನಲ್ಲಿರುವ ಸಮೀಕ್ಷಾ ಪ್ರಶ್ನಾವಳಿಯಲ್ಲಿ 42 ಪ್ರಶ್ನೆಗಳಿದ್ದು, ಇದರಲ್ಲಿ ಕೌಟುಂಬಿಕ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಔದ್ಯೋಗಿಕ ವಿಷಯಗಳನ್ನೊಳಗೊಂಡoತೆ ಸಮಗ್ರವಾದ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಈ ಮಾಹಿತಿಯು ಪರಿಶಿಷ್ಟ ಜಾತಿ ಪಟ್ಟಿಯಲ್ಲಿನ ವಿವಿಧ ಜಾತಿಗಳ ಸ್ಥಿತಿಗತಿ ಮತ್ತು ವಿವಿಧ ಕ್ಷೇತ್ರಗಳಲ್ಲಿನ ಪ್ರಾತಿನಿದ್ಯತೆ ಬಗ್ಗೆ ದತ್ತಾಂಶವನ್ನು ನೀಡುತ್ತದೆ. ಇದರಿಂದಾಗಿ ವೈಜ್ಞಾನಿಕವಾಗಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಯ ವರ್ಗಿಕರಣಕ್ಕಾಗಿ ಅನುಕೂಲಕರವಾಗಲಿದೆ.
ಸಮೀಕ್ಷೆಯನ್ನು ಕೈಗೊಳ್ಳಲು ಮೈಬೈಲ್ ಆಪ್ ಬೆಳಿಗ್ಗೆ 6:30 ರಿಂದ ಸಂಜೆ 6:30 ರವರೆಗೆ ಎನೇಬಲ್ (eಟಿಚಿbeಟeಜ) ಮಾಡಲಾಗಿರುತ್ತದೆ. ಸದರಿ ಅವಧಿಯಲ್ಲಿ ಗಣತಿದಾರರು ಮನೆಗಳಿಗೆ ಭೇಟಿ ನೀಡಲಿದ್ದು, ಸಾರ್ವಜನಿಕರು/ಕುಟುಂಬದವರು ತಮ್ಮ ಜಾತಿಯ ಕುರಿತು ಮಾಹಿತಿಯನ್ನು ನೀಡಲು ಸಹಕರಿಸಿ ಸಮೀಕ್ಷೆ ಕಾರ್ಯವನ್ನು ಯಶಸ್ವಿಗೊಳಿಸಲು ಹಾಗೂ ಮನೆ-ಮನೆ ಸಮೀಕ್ಷೆ ಕೈಗೊಂಡ ಸಂದರ್ಭದಲ್ಲಿ ಮಾಹಿತಿ ಒದಗಿಸಲು ಸಾಧ್ಯವಾಗದೇ ಇರುವ ಪರಿಶಿಷ್ಟ ಜಾತಿಯ ಕುಟುಂಬದವರು ಸ್ವಯಂಪ್ರೇರಿತವಾಗಿ ವಿಶೇಷ ಶಿಬಿರಗಳಲ್ಲಿ ಭಾಗವಹಿಸಿ ಮಾಹಿತಿಯನ್ನು ಒದಗಿಸಬಹುದಾಗಿದೆ.
ಸಹಾಯವಾಣಿ: ಜಿಲ್ಲಾ ಮಟ್ಟದ ಸಹಾಯವಾಣಿ ಸ್ಥಾಪಿಸತಕ್ಕದ್ದು, ನಗರ ಪ್ರದೇಶದಲ್ಲಿ ಇ-ಆಡಳಿತ ಇಲಾಖೆಯ ಡಿ.ಪಿ.ಎಂ ಗಳ ಸಹಾಯವಾಣಿಯನ್ನು ಸ್ಥಾಪಿಸಬೇಕು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಆರ್.ಡಿ.ಪಿ.ಆರ್. ಸಹಾಯವಾಣಿಯನ್ನು ಬಳಸಬಹುದು.
ಇದರಲ್ಲಿ ಎಫ್.ಎ.ಕ್ಯೂ ಗಳನ್ನು ತಯಾರಿಸಲಾಗುವುದು ಹಾಗೂ ಎಫ್.ಎ.ಕ್ಯೂ ಗಳಲ್ಲಿರುವ ಪ್ರಶ್ನೆಗಳಿಗೆ ಮಾತ್ರ ಉತ್ತರ ನೀಡಲಾಗುವುದು.
ರಾಜ್ಯ ಮಟ್ಟದ ಸಹಾಯವಾಣಿ ಸಂಖ್ಯೆ: 9481359000 ಈ ಸಹಾಯವಾಣಿ ಈಗಾಗಲೇ ಚಾಲ್ತಿಯಲ್ಲಿರುತ್ತದೆ. ಇದಲ್ಲದೆ ಇತರೆ ಯಾವುದೇ ಸಂದೇಹಗಳಿದ್ದಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಸಮಾಜ ಕಲ್ಯಾಣ ಇಲಾಖೆ ಅಥವಾ ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ ರವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ