ಧಾರವಾಡ.25.ಮೇ.25:- ಘಟಪ್ರಭಾ ನದಿಯ ಹಿಡಕಲ್ ಡ್ಯಾಮ್ ಜಲಾಶಯ ಈ ಭಾಗದ ರೈತರ ಜೀವನ ನಾಡಿಯಾಗಿದ್ದು. ರೈತರ ಭೂಮಿಗೆ ಹಾಗೂ ಬೆಳಗಾವಿ ನಗರ ಒಳಗೊಂಡು ಬೆಳಗಾವಿ ಜಿಲ್ಲೆಯ ಹಲವು ಗ್ರಾಮಗಳಿಗೆ ಕುಡಿಯುವ ನೀರಿನ ಜೀವ ಜಲವಾಗಿದೆ. ಹೀಗಾಗಿ ಯಾವ ಕಾರಣಕ್ಕೂ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ಹಿಡಕಲ್ ಜಲಾಶಯದಿಂದ ನೀರನ್ನು ಬಿಡಬಾರದೆಂದು ಸಾಮಾಜಿಕ ಹೋರಾಟಗಾರ ಉಪನ್ಯಾಸಕ ಪತ್ರಕರ್ತ ಪ್ರೊ.ನೀಲಕಂಠ ಭೂಮಣ್ಣವರ ಆಗ್ರಹಿಸಿದ್ದಾರೆ.
ಕನ್ನಡಪರ ಸಂಘಟನೆಗಳು, ವಿವಿಧ ಮಠಾಧೀಶರ ಹೋರಾಟ, ಭಾಗದ ಪ್ರತಿನಿಧಿಗಳ ಒತ್ತಡದಿಂದಾಗಿ ಈ ಕಾಮಗಾರಿಗೆ ಬ್ರೇಕ್ ಬಿದ್ದಿತ್ತು.
ಆದರೆ ಮತ್ತೆ ಎಲೆಮರೆಯಂತೆ ಈ ಕಾಮಗಾರಿಯನ್ನುಮುಂದುವರಿಸುತ್ತಿದ್ದು ಜನರಿಗೆ ಆತಂಕ ಸೃಷ್ಟಿ ಮಾಡಿದೆ.
ನಮ್ಮ ಭಾಗದ ಜನಪ್ರತಿನಿಧಿಗಳು, ಸಾರ್ವಜನಿಕರು, ರೈತರು, ಹೋರಾಟಗಾರರು ಎಚ್ಚೆತ್ತುಕೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ಬಹಳಷ್ಟು ನೀರಿನ ಅಭಾವ ಎದುರಿಸಬೇಕಾಗುತ್ತದೆ.

ಇದೀಗ ಕಾಮಗಾರಿಗೆ ಮತ್ತೊಮ್ಮೆ ಚಾಲನೆ ನೀಡಿದ್ದು ಬೈಲ್ಹೊಂಗಲ್ ಗೋಕಾಕ್ ತಾಲೂಕಿನ ಪ್ರದೇಶದಲ್ಲಿ ಜೆಸಿಬಿಗಳನ್ನು ಬಳಸಿ ಪೈಪ್ ಲೈನ್ ಕಾರ್ಯ ತೀವ್ರವಾಗಿ ನಡೆಯುತ್ತಿದೆ. ಇದರಿಂದ ಅನುಮಾನಗೊಂಡ ಈ ಭಾಗದ ಜನತೆ ಹೋರಾಟಕ್ಕೆ ಸಿದ್ದರಾಗುತ್ತಿದ್ದಾರೆ.
ಮೇ 2 ರಂದು ರಾಜ್ಯ ಸರ್ಕಾರ ಹೊರಡಿಸಿದ ಆದೇಶವನ್ನು ಹಿಂತೆಗೆದುಕೊಳ್ಳಬೇಕು. ಇಲ್ಲವಾದರೆ ಪ್ರಗತಿಪರ ಸಂಘಟನೆಗಳು, ರೈತ ಸಂಘಟನೆಗಳು, ಕರ್ನಾಟಕ ರಕ್ಷಣಾ ವೇದಿಕೆ, ಭಾಗದ ಜನ ಪ್ರತಿನಿಧಿಗಳನ್ನು, ಮಠಾಧೀಶರುಗಳನ್ನು ಒಳಗೊಂಡು ಉಗ್ರವಾದ ಹೋರಾಟ ಮಾಡಲಾಗುವುದೆಂದು ಹೇಳಿದ್ದಾರೆ.