ಹೊಸ ದೆಹಲಿ.17.ಆಗಸ್ಟ್.25:- ಪ್ರಧಾನಿ ನರೇಂದ್ರ ಮೋದಿ ಇಂದು ನವದೆಹಲಿಯಲ್ಲಿ ಸುಮಾರು 11 ಸಾವಿರ ಕೋಟಿ ರೂಪಾಯಿ ಮೌಲ್ಯದ ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಉದ್ಘಾಟಿಸಿದರು. ಈ ಯೋಜನೆಗಳಲ್ಲಿ ದ್ವಾರಕಾ ಎಕ್ಸ್ಪ್ರೆಸ್ವೇಯ ದೆಹಲಿ ವಿಭಾಗ ಮತ್ತು ನಗರ ವಿಸ್ತರಣಾ ರಸ್ತೆ-II (UER-II) ಸೇರಿವೆ. ರಾಷ್ಟ್ರ ರಾಜಧಾನಿಯ ದಟ್ಟಣೆಯನ್ನು ಕಡಿಮೆ ಮಾಡುವ ಸರ್ಕಾರದ ಸಮಗ್ರ ಯೋಜನೆಯ ಭಾಗವಾಗಿ ಈ ಯೋಜನೆಗಳನ್ನು ಅಭಿವೃದ್ಧಿಪಡಿಸಲಾಗಿದೆ.
ತಮ್ಮ ಭಾಷಣದಲ್ಲಿ, ದ್ವಾರಕಾ ಎಕ್ಸ್ಪ್ರೆಸ್ವೇಯ ದೆಹಲಿ ವಿಭಾಗ ಮತ್ತು UER-II ಉದ್ಘಾಟನೆಯೊಂದಿಗೆ NCRನಾದ್ಯಂತ ಸಂಪರ್ಕವು ದೊಡ್ಡ ಮುನ್ನಡೆ ಸಾಧಿಸುತ್ತದೆ ಎಂದು ಶ್ರೀ ಮೋದಿ ಹೇಳಿದರು. ದೆಹಲಿ NCR ನಲ್ಲಿರುವ ಜನರು ಇದರಿಂದ ಭಾರಿ ಪ್ರಯೋಜನ ಪಡೆಯುತ್ತಾರೆ ಮತ್ತು ತಮ್ಮ ಪ್ರಯಾಣದ ಸಮಯದಲ್ಲಿ ಸಮಯವನ್ನು ಉಳಿಸುತ್ತಾರೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ಎಲ್ಲಾ ದೆಹಲಿ ಜನರ ಪರವಾಗಿ ಪ್ರಧಾನಿ ಮೋದಿಗೆ ಧನ್ಯವಾದ ಅರ್ಪಿಸುತ್ತಾ, ಜನರನ್ನು ಉನ್ನತೀಕರಿಸಲು ಅವರು ಅವಿಶ್ರಾಂತವಾಗಿ ಶ್ರಮಿಸಿದ್ದಾರೆ ಎಂದು ಹೇಳಿದರು.
ಈ ಯೋಜನೆಗಳು ಸಂಪರ್ಕವನ್ನು ಗಮನಾರ್ಹವಾಗಿ ಸುಧಾರಿಸುವುದು, ಪ್ರಯಾಣದ ಸಮಯವನ್ನು ಕಡಿಮೆ ಮಾಡುವುದು ಮತ್ತು ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರವನ್ನು ಸುಲಭಗೊಳಿಸುವ ಗುರಿಯನ್ನು ಹೊಂದಿವೆ. ದ್ವಾರಕಾ ಎಕ್ಸ್ಪ್ರೆಸ್ವೇಯ 10.1 ಕಿಲೋಮೀಟರ್ ಉದ್ದದ ದೆಹಲಿ ವಿಭಾಗವನ್ನು 5 ಸಾವಿರದ 300 ಕೋಟಿ ರೂಪಾಯಿಗಳಿಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ವಿಭಾಗವು ಯಶೋಭೂಮಿ, DMRC ನೀಲಿ ಮತ್ತು ಕಿತ್ತಳೆ ಮಾರ್ಗಗಳು, ಮುಂಬರುವ ಬಿಜ್ವಾಸನ್ ರೈಲ್ವೆ ನಿಲ್ದಾಣ ಮತ್ತು ದ್ವಾರಕಾ ಕ್ಲಸ್ಟರ್ ಬಸ್ ಡಿಪೋಗೆ ಬಹು-ಮಾದರಿ ಸಂಪರ್ಕವನ್ನು ಒದಗಿಸುತ್ತದೆ.
ಬಹದ್ದೂರ್ಗಢ ಮತ್ತು ಸೋನಿಪತ್ಗೆ ಹೊಸ ಸಂಪರ್ಕಗಳೊಂದಿಗೆ UER-II ನ ಅಲಿಪುರ್ನಿಂದ ಡಿಚಾವ್ ಕಲಾನ್ ಮಾರ್ಗವನ್ನು ಸುಮಾರು 5,580 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ದೆಹಲಿಯ ಒಳ ಮತ್ತು ಹೊರ ವರ್ತುಲ ರಸ್ತೆಗಳಲ್ಲಿ ಹಾಗೂ ಮುಕರ್ಬಾ ಚೌಕ್, ಧೌಲಾ ಕುವಾನ್ ಮತ್ತು NH-9 ನಂತಹ ಜನನಿಬಿಡ ಸ್ಥಳಗಳಲ್ಲಿ ಸಂಚಾರವನ್ನು ಸುಗಮಗೊಳಿಸುತ್ತದೆ.
