ಬೀದರ.11.ಮಾರ್ಚ.25:- ತಾಯಿ ಮರಣ ನಿಯಂತ್ರಣಕ್ಕೆ ಸುಶಿಕ್ಷಿತ ಮಹಿಳಾ ವರ್ಗ ತಮ್ಮ ಸುತ್ತಲೂ ಉತ್ತಮ ಆರೋಗ್ಯಕರ ಜೀವನದ ಬಗ್ಗೆ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆಯೆಂದು ಖ್ಯಾತ ಸ್ತ್ರೀ ರೋಗ ತಜ್ಞೆ ಡಾ.ಉಮಾ ದೇಶಮುಖ ಅಭಿಪ್ರಾಯಪಟ್ಟರು.
ರಂಗಮoದಿರದಲ್ಲಿ ಜಿಲಾಡಳಿತ ಆಯೋಜಿಸಿದ ಮಹಿಳೆಯರಿಂದ ಮಹಿಳೆಯರಿಗಾಗಿ ವಿಶೇಷ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾಗಿ ಮಾತನಾಡಿದರು. ಜಿಲ್ಲಾಡಳಿತ ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ಎಲ್ಲ ಮಹಿಳೆಯರು ಸುಶಿಕ್ಷಿತರಿದ್ದಾರೆ.
ಆರೋಗ್ಯಕರ ಜೀವನದ ಬಗ್ಗೆ ಅರಿವು ಇದೆ. ಎಲ್ಲರೂ ತಾಯಿ ಮರಣ ನಿಯಂತ್ರಿಸುವಲ್ಲಿ ಜಾಗೃತಿ ಮೂಡಿಸಬೇಕೆಂದರು.
ಹೆಣ್ಣು ಮಕ್ಕಳು ತಮ್ಮ ಕುಟುಂಬದೊoದಿಗೆ ತಮ್ಮ ಆರೋಗ್ಯ ಕಾಳಜಿ ವಹಿಸಬೇಕು. ಅಲ್ಲದೇ ಇತ್ತೀಚಿಗೆ ಗರ್ಭಕಂಠ ಕ್ಯಾನ್ಸರ್ ಸಹ ಆಗುತ್ತಿದ್ದು, ಗರ್ಭಕಂಠ ಕ್ಯಾನ್ಸರ್ ತಡೆಯಬೇಕಾದರೆ 9 ರಿಂದ 14 ಮಕ್ಕಳಿಗೆ ಎರಡು ಲಸಿಕೆಗಳನ್ನು ತೆಗೆದುಕೊಳ್ಳಬೇಕು ಹಾಗೂ 14 ರಿಂದ 45 ವರ್ಷದವರೆಗಿನವರಿಗೆ ಮೂರು ಲಸಿಕೆಗಳನ್ನು ತೆಗೆದುಕೊಳ್ಳಬೇಕೆಂದರು.
ಹೆಣ್ಣು ಮಕ್ಕಳು ಗರ್ಭಿಣಿಯಾಗುವ ಮುಂಚಿತವಾಗಿ, ಗರ್ಭಿಣಿಯಾದ ಮೇಲೆ ವೈದ್ಯರ ಸಲಹೆ ಮೇರೆಗೆ ಆರೈಕೆಯೊಂದಿಗೆ ಕುಟುಂಬದವರು ಕೂಡ ಆರೋಗ್ಯ ಕಡೆ ಗಮನವಹಿಸಬೇಕು. ಗರ್ಭೀಣಿಯರಿಗೆ ಸರ್ಕಾರದಿಂದ ಸಾಕಷ್ಟು ಸವಲತ್ತುಗಳು ನೀಡುತ್ತಿದ್ದು, ಈ ಕುರಿತು ಆಶಾ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿದಾಗ ಅಗತ್ಯ ಮಾಹಿತಿ ನೀಡತಕ್ಕದ್ದು, ಆರೋಗ್ಯ ಸಮಸ್ಯೆ ಇದ್ದರೆ ಯಾವುದೇ ಮುಜುಗರ ಇಲ್ಲದೇ ವೈದ್ಯರಿಗೆ ತಿಳಿಸಿ ಚಿಕಿತ್ಸೆ ಪಡೆದರೆ ನಾವು ತಾಯಿ ಮರಣ ಪ್ರಮಾಣವನ್ನು ಕಡಿಮೆ ಮಾಡಬಹುದಾಗಿದೆ ಎಂದು ಡಾ.ಉಮಾ ದೇಶಮುಖ ತಿಳಿಸಿದರು.
ಇಂಜಿನೀಯರಿoಗ ಕ್ಷೇತ್ರದಲ್ಲಿ ಸಂಶೋಧಕಿಯಾಗಿರುವ ಶೈನಿ ಪ್ರದೀಪ ಗುಂಟಿ ಅವರು ಮಾತನಾಡಿ, ಮಹಿಳೆಯರು ನಗುವಿನಲ್ಲಿ ಈ ಜಗತ್ತಿನ ನೋವುಗಳನ್ನು ಭರಿಸುವ ಶಕ್ತಿಯಿದೆ. ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಕಾಲ ಕಾಲಕ್ಕೆ ವೈದ್ಯರ ಸಲಹೆ ಪಡೆಯಬೇಕೆಂದರು. ತಾಯಿಯು ಗಂಡು ಹೆಣ್ಣು ಎಂಬ ತಾರತಮ್ಯ ಮಾಡದೇ ಇಬ್ಬರನ್ನು ಒಂದೇ ರೀತಿಯಾಗಿ ಬೆಳೆಸಬೇಕು. ಹೆಣ್ಣು ಮಕ್ಕಳನ್ನು ಗೌರವಿಸುವಂತೆ ಗಂಡುಮಕ್ಕಳಿಗೆ ಕಲಿಸಬೇಕೆಂದರು.
ಕಾರ್ಯಕ್ರಮದಲ್ಲಿ ರಾಣಿ ಸತ್ಯಮೂರ್ತಿ, ನೃತ್ಯ ಶಾಲೆಯ ವಿದ್ಯಾರ್ಥಿಗಳು ನೃತ್ಯ ಮಾಡಿದರು. ವಿವಿಧ ಇಲಾಖೆಯ ಮಹಿಳಾ ಸಿಬ್ಬಂದಿಗಳು ವಿವಿಧ ಸಂಗೀತ ಕಾರ್ಯಕ್ರಮ ನೀಡಿದರು.