ಮಂಗಳೂರು.13.ಮಾರ್ಚ.25:- ಮಂಗಳೂರು ವಿಶ್ವವಿದ್ಯಾನಿಲಯವೇ ನಡೆಸುತ್ತಿರುವ 5 ಘಟಕ ಕಾಲೇಜುಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಅವುಗಳ ಅಸ್ತಿತ್ವವೇ ಡೋಲಾಯಮಾನವಾಗಿದೆ.
ಹಂಪನಕಟ್ಟದ ವಿವಿ ಸಂಜೆ ಕಾಲೇಜು, ಕೊಣಾಜೆಯ ಮಂಗಳಗಂಗೋತ್ರಿ ಪ್ರಥಮ ದರ್ಜೆ ಕಾಲೇಜು, ನೆಲ್ಯಾಡಿ, ಬನ್ನಡ್ಕ ಹಾಗೂ ಮೂಡುಬಿದಿರೆ ಕಾಲೇಜುಗಳು 8-9 ವರ್ಷಗಳಿಂದ ಮಂಗಳೂರು ವಿವಿಯು ತನ್ನದೇ ಸಂಪನ್ಮೂಲದಲ್ಲಿ ನಡೆಸುತ್ತಿತ್ತು.
ಆದರೆ, ಆರ್ಥಿಕ ಸ್ಥಿತಿಗತಿ ತೀರಾ ಹದಗೆಟ್ಟಿದ್ದು, ವಿಶ್ವವಿದ್ಯಾಲಯ ಸರಕಾರದ ಮೊರೆ ಹೊಕ್ಕಿದೆ.
ವಿಚಿತ್ರವೆಂದರೆ, ಸರಕಾರದಿಂದ ಈ ಕಾಲೇಜುಗಳಿಗೆ ಇಲ್ಲಿಯ ವರೆಗೂ “ಅನುಮತಿ’ ಪಡೆದಿರಲಿಲ್ಲ. “ಅನುಮತಿ’ ಇಲ್ಲದೆ ಇಲ್ಲಿಯ ವರೆಗೆ ನಡೆಸಿದ ಈ ಎಲ್ಲಾ ಕಾಲೇಜುಗಳನ್ನು ಕಾಲೇಜು ಶಿಕ್ಷಣ ಇಲಾಖೆಗೆ ಹಸ್ತಾಂತರ ಮಾಡಿ ಸರಕಾರಿ ಕಾಲೇಜಿನಂತೆ ಪರಿಗಣಿಸ ಬೇಕು ಎಂದು ವಿವಿ ಮನವಿ ಮಾಡಿದೆ.
ಒಂದು ವೇಳೆ ಇದಕ್ಕೆ ಸರಕಾರ ಒಪ್ಪಿದರೆ 5 ಕಾಲೇಜುಗಳು ಯಥಾಸ್ಥಿತಿಯಲ್ಲಿ ಮುಂದು ವರಿಯಲಿದೆ. ಇಲ್ಲವಾದರೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಈ ಕಾಲೇಜುಗಳನ್ನು ಬಂದ್ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಯಾಕೆ ಈ ನಿರ್ಧಾರ?
ಸ್ಥಳೀಯ ವಿದ್ಯಾರ್ಥಿಗಳಿಗೆಂದು ವಿಶ್ವವಿದ್ಯಾ ನಿಲಯ ಈ ಕಾಲೇಜುಗಳನ್ನು ನಡೆಸಬೇಕಿತ್ತು. ಆದರೆ ಸರಕಾರದ ಒಪ್ಪಿಗೆ ಕೇಳಲಿಲ್ಲವೋ, ಸಿಗಲಿಲ್ಲವೋ ಅಥವಾ ಒಪ್ಪಿಗೆ ಪಡೆಯದೇ ನಡೆಸುವ ನಿರ್ಧಾರಕ್ಕೆ ಬಂದಿದ್ದರೆ ಅದಕ್ಕೆ ಕಾರಣ ಹಾಗೂ ಭದ್ರತೆ ಏನು ಎಂಬುದಕ್ಕೆ ಉತ್ತರ ಸಿಗುತ್ತಿಲ್ಲ. ಆಡಿಟ್ ವರದಿ ಸಂದರ್ಭವೂ ಇದನ್ನು “ಗೊತ್ತಿಧ್ದೋ-ಇಲ್ಲದೆಯೋ’ ಮುಂದುವರಿಸಲಾಗಿತ್ತು. ಈಗ ರಾಜ್ಯ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಅಧಿಕೃತ ಆದೇಶವಿಲ್ಲದೇ ಈ ಕಾಲೇಜುಗಳನ್ನು ಯಾಕೆ ನಡೆಸಲಾಯಿತು? ಕೋಟ್ಯಾಂತರ ರೂ. ಹಣ ಯಾಕೆ ವ್ಯಯ ಮಾಡಲಾಗಿದೆ? ಇದಕ್ಕೆ ಅನುಮತಿ ನೀಡಿದ್ದು ಯಾರು?’ ಎಂಬಿತ್ಯಾದಿ ಪ್ರಶ್ನೆಗಳೊಂದಿಗೆ ವಿವಿಗೆ ಕಪಾಳಮೋಕ್ಷ ಮಾಡಿದೆ.
ಸರಕಾರ ಕೇಳಿದ್ದು ಯಾಕಾಗಿ?
ವಿವಿಯಲ್ಲಿ ಹಿಂದೆ ವಿದ್ಯಾರ್ಥಿಗಳ ಶುಲ್ಕವಲ್ಲದೇ ವಿವಿಧ ಮೂಲಗಳಿಂದ ಆಂತರಿಕ ಸಂಪನ್ಮೂಲವನ್ನು ಕ್ರೋಢೀಕರಿಸಲಾಗುತ್ತಿತ್ತು. ವಿದ್ಯಾರ್ಥಿಗಳ ಶುಲ್ಲದಲ್ಲಿ ಮಿಕ್ಕ ಹಣದಿಂದಲೇ ಸುಮಾರು 60-65 ಕೋ.ರೂ. ಉಳಿತಾಯ ಮಾಡಲಾಗಿತ್ತು. ಅದರ ಬಡ್ಡಿಯಲ್ಲಿಯೇ ವಿವಿಯು ಘಟಕ ಕಾಲೇಜಿನ ತಾತ್ಕಾಲಿಕ ಸಿಬಂದಿಗೆ ಸಂಬಳ ನೀಡುತ್ತಿತ್ತು. ಆದರೆ, ಅಂತಾರಾಷ್ಟ್ರೀಯ ದರ್ಜೆಯ ಹಾಸ್ಟೆಲ್ ಎಂಬಿತ್ಯಾದಿ ಕೆಲವು ಯೋಜನೆ ಹಾಗೂ ಇತರ ದುಂದುವೆಚ್ಚಗಳ ನೆಪದಿಂದ ಇತ್ತೀಚೆಗೆ ಈ ಹಣ ಸಂಪೂರ್ಣ ಬರಿದಾಗಿದೆ. ಹೀಗಾಗಿ ವಿವಿ ಘಟಕ ಕಾಲೇಜುಗಳ ಉಪನ್ಯಾಸಕರಿಗೆ ಸಂಬಳ ನೀಡಲು ಹಣವಿಲ್ಲದಿದ್ದಾಗ ವಿವಿ ಯು ಸರಕಾರವನ್ನು ಕೋರಿತು. ಆಗ ಸರಕಾರವು ನನ್ನ ಅನುಮತಿ ಇಲ್ಲದೆ ಕಾಲೇಜು ನಡೆಸಿದ್ದು ಯಾಕೆ’? ಎಂಬ ಪ್ರಶ್ನೆಗಳನ್ನು ಹಾಕಿದೆ.
ಸರಕಾರ ಅಸ್ತು ಅಂದರೆ ಬಚಾವ್!
ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದ್ದು, ಶುಲ್ಕವೂ ಇಳಿಕೆಯಾಗಿದೆ. ಈ ಹಣದಲ್ಲಿ ಕಾಲೇಜು ನಡೆಸುವುದು ಕಷ್ಟ. ಸರಕಾರದ ಅನುಮತಿ ಇಲ್ಲದ ಕಾರಣ ಹುದ್ದೆಗಳ ನೇಮಕಾತಿ ಆಗದು. ಕೇವಲ ಅತಿಥಿ ಉಪನ್ಯಾಸಕರಿಂದಲೇ ನಡೆಸಬೇಕು. 1 ಕೋರ್ಸ್ಗೆ 3ರಿಂದ 4 ರಂತೆ ಕನಿಷ್ಠ ಅತಿಥಿ ಉಪನ್ಯಾಸಕರು ಬೇಕು. ಇದರಂತೆ 1 ವರ್ಷಕ್ಕೆ 1 ಕಾರ್ಯಕ್ರಮಕ್ಕೆ ವಿವಿಗೆ ಸುಮಾರು 25 ಲಕ್ಷ ರೂ. ಖರ್ಚು ಬರುತ್ತದೆ. ಇದನ್ನು ವಿಶ್ವವಿದ್ಯಾಲಯ ಭರಿಸುವ ಸ್ಥಿತಿಯಲ್ಲಿ ಇಲ್ಲ.
ಅಂದಹಾಗೆ 5 ಕಾಲೇಜಿನಲ್ಲಿ ಯಾವುದೇ ವಿಭಾಗದಲ್ಲಿ 20 ಮಕ್ಕಳು ಅಧಿಕವಿದ್ದರೆ ಮಾತ್ರ ಈ ಬಾರಿ ತರಗತಿ-ಇಲ್ಲವಾದರೆ ಬಂದ್ ಮಾಡುವ ಬಗ್ಗೆ ವಿವಿ ಸಿಂಡಿಕೇಟ್ ಇತ್ತೀಚೆಗೆ ತೀರ್ಮಾನಿಸಿತ್ತು. ಆದರೆ, ಹಂಪನಕಟ್ಟದಲ್ಲಿರುವ ವಿವಿ ಸಂಜೆ ಕಾಲೇಜು ಹೊರತುಪಡಿಸಿ ಉಳಿದ 4 ಕಾಲೇಜುಗಳಲ್ಲಿ ಕೆಲವು ವಿಭಾಗದಲ್ಲಿ 20ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ವಿವಿ ಸಂಜೆ ಕಾಲೇಜಿನಲ್ಲಿ ಮಾತ್ರ ದ್ವಿತೀಯ/ತೃತೀಯ ವರ್ಷದ ತರಗತಿ ಈ ಬಾರಿ ನಡೆಯಲಿದೆ.
ಆರ್ಥಿಕ ಶಿಸ್ತು ಕೈತಪ್ಪಿದ್ದು ಹೇಗೆ?
ಸಮಯಕ್ಕೆ ಸರಿಯಾಗಿ ಪದವಿ ಶೈಕ್ಷಣಿಕ ತರಗತಿ ಆರಂಭವಾಗದೆ ವಿದ್ಯಾರ್ಥಿಗಳ ಕಾಲೇಜು ಸೇರ್ಪಡೆ ಸಂಖ್ಯೆ ಕಡಿಮೆ ಯಾಯಿತು. ಮಿತಿಗಿಂತ ಅಧಿಕ ಅರೆಕಾಲಿಕ ನೌಕರರ ನೇಮಕ ದಿಂದ ಸಂಬಳ ಹೊರೆ ಹೆಚ್ಚಿದೆ. ಹಲವು ಕಾಲೇಜುಗಳು ಪ್ರತ್ಯೇಕ ವಿವಿ, ಸ್ವಾಯತ್ತ ಸ್ಥಾನಮಾನ ಪಡೆದಿವೆ. ಇದರಿಂದ ವಿದ್ಯಾರ್ಥಿ ಕೊರತೆ ಆಗಿ ಆದಾಯಕ್ಕೂ ಪೆಟ್ಟು ಬಿತ್ತು. ನಿವೃತ್ತರ ಸಂಖ್ಯೆ ಏರಿಕೆಯಾಗಿ ಪಿಂಚಣಿ ನೀಡುವ ಸವಾಲು ಎದುರಾಯಿತು. ಇದರೊಂದಿಗೆ ಅಂತಾರಾಷ್ಟ್ರೀಯ ಹಾಸ್ಟೆಲ್ ನಂಥ ಯೋಜನೆಗೆ ಹಣ ವೆಚ್ಚ ಮಾಡುವುದು, ಕೆಲವು ದುಂದು ವೆಚ್ಚ ಕಡಿವಾಣ ಹಾಕದಿರುವುದು ಇತ್ಯಾದಿ ಕಾರಣಗಳಿಂದ ವಿವಿ ಆರೋಗ್ಯ ಹದಗೆಟ್ಟಿದೆ. ಇದರೊಂದಿಗೆ ರಾಜ್ಯ ಸರಾರವು 4 ವರ್ಷಗಳಿಂದ ಅನುದಾನ ನೀಡದಿರುವುದು ಸಂಕಷ್ಟವನ್ನು ಹೆಚ್ಚಿಸಿದೆ.
ಪಿಂಚಣಿ ಭಾಗ್ಯವಿಲ್ಲ!
ವಿಶ್ವವಿದ್ಯಾನಿಲಯದ ಬೋಧಕ ಹಾಗೂ ಬೋಧಕೇತರ ಖಾಯಂ ಸಿಬಂದಿ ವೇತನ, ಗಳಿಕೆ ರಜೆ ನಗದೀಕರಣ ಹಾಗೂ ಇತರ ಭತ್ತೆಯನ್ನು ಪಾವತಿಸಲು ರಾಜ್ಯ ಸರಕಾರ 2024-25ನೆ ಸಾಲಿಗೆ 60.25 ಕೋಟಿ ರೂ. ಮಂಜೂರು ಮಾಡಿದೆ. ವಿವಿಯಲ್ಲಿ 426 ಪಿಂಚಣಿದಾರರು ಹಾಗೂ ಕುಟುಂಬ ಪಿಂಚಣಿದಾರರಿದ್ದಾರೆ. ವಾರ್ಷಿಕವಾಗಿ 25.61 ಕೋಟಿ ರೂ.ವೆಚ್ಚವಾಗುತ್ತಿದೆ. 2024-25ನೇ ಸಾಲಿನಲ್ಲಿ 22 ಸಿಬಂದಿ ವಯೋನಿವೃತ್ತಿ ಹೊಂದಲಿದ್ದು, ಇವರ ನಿವೃತ್ತಿ ಸೌಲಭ್ಯ ಮತ್ತು ಗಳಿಕೆ ರಜೆ ನಗದೀಕರಿಸಲು ಒಟ್ಟು 10.80 ಕೋಟಿ ರೂ. ಅಗತ್ಯವಿದೆ.
ಹೀಗಾಗಿ ವಿಶ್ರಾಂತಿ ವೇತನ ಅನುದಾನಕ್ಕಾಗಿ ವಿವಿಯು ಸರಕಾರಕ್ಕೆ 36.41 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಿದೆ. ಇದರಲ್ಲಿ 10 ಕೋಟಿ ರೂ. ಮಾತ್ರ ರಾಜ್ಯ ಸರಕಾರದಿಂದ ಮಂಜೂರಾಗಿದ್ದು, ಉಳಿದ ಮೊತ್ತ ಹಾಗೂ ಹೆಚ್ಚುವರಿ ವಿಶ್ರಾಂತಿ ವೇತನ ಅನುದಾನ ಸೇರಿ ಮತ್ತೆ 26.41 ಕೋಟಿ ರೂ. ಮಂಜೂರು ಮಾಡಲು ಮರು ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ನಡುವೆ 7ನೆ ರಾಜ್ಯ ವೇತನ ಜಾರಿಯಿಂದ ಪಿಂಚಣಿ ಮತ್ತೆ ಪರಿಷ್ಕೃತಗೊಳ್ಳಲಿದ್ದು, ಹೆಚ್ಚುವರಿ ವಿಶ್ರಾಂತಿ ವೇತನ ಮಂಜೂರು ಮಾಡಲು ಮತ್ತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕಿದೆ.
– ದಿನೇಶ್ ಇರಾ