26ಡಿ.24:- ಬೀದರ ಜಿಲ್ಲೆಯಲ್ಲಿ ಯುವಜನರನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಪೋಷಕರಿಗೆ ಯುವ ಸ್ಪಂದನ ವಿಶೇಷ ಕಾರ್ಯಾಗಾರವನ್ನು ಡಿಸೆಂಬರ್.29 ರಂದು ಬೆಳಿಗ್ಗೆ 10 ರಿಂದ 1 ಗಂಟೆಯವರೆಗೆ ಯುವ ಸ್ಪಂದನ ಕೇಂದ್ರ ಒಳಾಂಗಣ ಕ್ರೀಡಾಂಗಣದ ಆವರಣ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೀದರದಲ್ಲಿ ನಡೆಸಲಾಗುತ್ತಿದೆ ಎಂದು ಬೀದರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯುವ ಸ್ಪಂದನ ಕಾರ್ಯಕ್ರಮವು ಕರ್ನಾಟಕ ಸರ್ಕಾರದ ಮಹಾತ್ವಾಕಾಂಕ್ಷಿ ಕಾರ್ಯಕ್ರಮವಾಗಿದ್ದು, ಯುವಜನ ಸಂಬಂಧಿ ಯಾವುದೇ ಗೊಂದಲಗಳಿಗೆ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಕಾರ್ಯಕ್ರಮದ ಅಂಗವಾಗಿ ಪೋಷಕರಿಗೆ ಯುವ ಸ್ಪಂದನ ವಿಶೇಷ ಕಾರ್ಯಾಗಾರವನ್ನು ನಡೆಸಲಾಗುತ್ತಿದೆ.
ಆದ್ದರಿಂದ ಜಿಲ್ಲೆಯ ಎಲ್ಲಾ ಪೋಷಕರು ಸದರಿ ಕಾರ್ಯಾಗಾರದಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಈ ಕಾರ್ಯಾಗಾರದಲ್ಲಿ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಓದುತ್ತಿರುವ ಯುವಜನರ ಪೋಷಕರಿಗೆ ಆದ್ಯತೆ ನೀಡಲಾಗುವುದು. ಒಂದು ಕಾರ್ಯಾಗಾರದಲ್ಲಿ ಪೋಷಕರಲ್ಲಿ ಒಬ್ಬರಿಗೆ ಮಾತ್ರ ಅವಕಾಶವಿರುತ್ತದೆ.
ಈ ಕಾರ್ಯಾಗಾರವನ್ನು ಮಕ್ಕಳ ಪೋಷಣೆ, ಪೋಷಕರ ಆತಂಕ ನಿವಾರಣೆ, ಒತ್ತಡ ನಿರ್ವಹಣೆ, ಮಕ್ಕಳೊಂದಿಗಿನ ಸಂವಹನ ಇತ್ಯಾದಿ ವಿಷಯಗಳ ಬಗ್ಗೆ ಚಟುವಟಿಕೆಗಳ ಮೂಲಕ ಕೈಗೊಳ್ಳಲಾಗುವುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ (08482-227222), (9886731405), (7996300194) ಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
Source: www.prajaprabhat.com