|

ಟಿಇಟಿ ಪರೀಕ್ಷೆ ಬರೆದ ಅಭ್ಯರ್ಥಿಗಳಲ್ಲಿ ಹೊಸ ಆಸೆ.ಹೊಸ ವರ್ಷ ತರುವುದೇ ನೇಮಕ ಹರ್ಷ.

ದಾವಣಗೆರೆ.29.ಡಿಸೆಂಬರ್.25: ರಾಜ್ಯದಲ್ಲಿ ಸರಕಾರಿ ಪ್ರಾಥಮಿಕ ಶಾಲೆ, ಪ್ರೌಢಶಾಲೆಗೆ ಶಿಕ್ಷಕರನ್ನು ನೇಮಿಸಿ ದಶಕ ಕಳೆದಿದೆ. ರಾಜ್ಯದಲ್ಲಿ ಪ್ರತಿ ವರ್ಷ ಶಿಕ್ಷಕರ ಅರ್ಹತಾ ಪರೀಕ್ಷೆ ಪಾಸಾಗಿ, ಕೆಲಸದ ಕರೆಗಾಗಿ ಕಾಯುವ ಅಭ್ಯರ್ಥಿಗಳ ಸಂಖ್ಯೆ ಜಾಸ್ತಿ ಆಗ್ತಿದೆ. ಈ ನಡುವೆ ಮುಖ್ಯ ಶಿಕ್ಷಕರ ಬಡ್ತಿಯಿಂದ ಹೊಸ ಹುದ್ದೆಗಳು ಸೃಷ್ಟಿಯಾಗಿ ತಮಗೆ ಅವಕಾಶ ಸಿಗಬಹುದು ಎಂಬ ನವ ನಿರೀಕ್ಷೆಯೊಂದಿಗೆ ಶಿಕ್ಷಕ ಆಕಾಂಕ್ಷಿಗಳು ಹೊಸ ವರ್ಷವನ್ನು ಭರಮಾಡಿಕೊಳ್ಳುತ್ತಿದ್ದಾರೆ.

ಸರಕಾರಿ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗಳಿಗೆ 2025ರಲ್ಲಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಆಗ ಪ್ರಾಥಮಿಕ ಶಾಲೆಗೆ 1929, ಪ್ರೌಢಶಾಲೆಗೆ 1637 ಶಿಕ್ಷಕರನ್ನು ನೇಮಕ ಮಾಡಲಾಗಿತ್ತು. ಅದುವೇ ಕೊನೆ, ಇಲ್ಲಿಯವರೆಗೆ ಒಂದೇ ಒಂದು ಶಿಕ್ಷಕ ಹುದ್ದೆ ಭರ್ತಿಯಾಗಿಲ್ಲ. ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ತೆರೆದಾಗ ಶಿಕ್ಷಕ ಆಕಾಂಕ್ಷಿಗಳ ನೇಮಕದ ಆಸೆ ಚಿಗುರೊಡೆದಿತ್ತಾದರೂ, ಅಲ್ಲಿ ಸರಕಾರ ಶಿಕ್ಷಕರನ್ನು ‘ಅತಿಥಿ’ಗಳಾಗಿ ಕಂಡಿತು.

ಈ ನಡುವೆ ಹಿರಿಯ ಪ್ರಾಥಮಿಕ ಶಾಲೆಗಳಿಗೆ ನಿರಂತರವಾಗಿ ನೇಮಕಾತಿ ನಡೆಯುತ್ತಿದೆಯಾದರೂ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಪಾಸಾಗುವ ಅಭ್ಯರ್ಥಿಗಳ ಸಂಖ್ಯೆಗೂ, ಸರಕಾರ ನೇಮಕ ಮಾಡಿಕೊಳ್ಳುತ್ತಿರುವ ಹುದ್ದೆಗಳ ಸಂಖ್ಯೆಗೂ ಅಜಗಜಾಂತರ ವ್ಯತ್ಯಾಸವಿದೆ. ಹಿರಿಯ ಪ್ರಾಥಮಿಕ ಶಾಲೆಗಳಿಗೆ ಕಡೆಯದಾಗಿ 2023ರಲ್ಲಿ13,352 ಶಿಕ್ಷಕರನ್ನು ಸರಕಾರ ನೇಮಿಸಿತ್ತು. ಬಳಿಕ ಮೂರು ಬಾರಿ ಟಿಇಟಿ ನಡೆದು, 1,76,829 ಅಭ್ಯರ್ಥಿಗಳು ಶಿಕ್ಷಕರಾಗಿ ಅರ್ಹತೆ ಗಳಿಸಿ ಮನೆಯಲ್ಲಿಕುಳಿತಿದ್ದಾರೆ.

ಅರ್ಹತೆ-ನೇಮಕ ಅಜಗಜಾಂತರ:

ಕರ್ನಾಟಕದಲ್ಲಿ ಮೊದಲ ಟಿಇಟಿ ನಡೆದದ್ದು 2014ರಲ್ಲಿ. ಅಂದಿನಿಂದ ಇಲ್ಲಿನವರೆಗೆ ನಡೆದ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಪಾಸಾಗಿ ಅರ್ಹತೆ ಗಳಿಸಿದವರು 4.47 ಲಕ್ಷ ಮಂದಿ, ನೇಮಕ ಆದೇಶ ಪಡೆದವರು ಕೇವಲ 28 ಸಾವಿರ ಶಿಕ್ಷಕರು. ಅರ್ಹರಾದವರ ಪೈಕಿ ನೇಮಕ ಆಗಿರುವುದು ಶೇ.10ಕ್ಕೂ ಕಡಿಮೆ. 2025ರ ಡಿಸೆಂಬರ್‌ 7ರಂದು ನಡೆದ ಟಿಇಟಿ ಫಲಿತಾಂಶ ಪ್ರಕಟವಾಗಿದ್ದು, ದಾಖಲೆಯ 97,383 ಅಭ್ಯರ್ಥಿಗಳು ಅರ್ಹತೆ ಗಿಟ್ಟಿಸಿದ್ದಾರೆ. ಈ ಪೈಕಿ ಪ್ರಾಥಮಿಕ ಶಾಲೆ ಶಿಕ್ಷಕರಾಗಲು (ಪತ್ರಿಕೆ-1) 29,377, ಪ್ರೌಢಶಾಲೆ (ಪತ್ರಿಕೆ-2) ಶಿಕ್ಷಕರಾಗಲು 68,006 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ.

ಹೊಸ ವರ್ಷಕ್ಕೆ ನೇಮಕ ಕನಸು

2026ಕ್ಕೆ ಮುಖ್ಯ ಶಿಕ್ಷಕರಿಗೆ ಹಿರಿಯ ಮುಖ್ಯ ಶಿಕ್ಷಕರಾಗಿ ಬಡ್ತಿ ನೀಡಲು ನಿರ್ಧರಿಸಿರುವ ರಾಜ್ಯ ಸರಕಾರ, ಜನವರಿಯಲ್ಲಿ ಕೌನ್ಸೆಲಿಂಗ್‌ ನಡೆಸುವುದಾಗಿ ತಿಳಿಸಿದೆ. ಈ ವಿಷಯ ಕೇಳಿ ಟಿಇಟಿ ಅಭ್ಯರ್ಥಿಗಳಲ್ಲಿ ಹೊಸ ಆಸೆ ಚಿಗುರೊಡೆದಿದೆ. ಆರಂಭಿಕ ಹಂತದಲ್ಲಿ2000ಕ್ಕೂ ಅಧಿಕ ಎಚ್‌ಎಂಗಳು ಎಸ್‌ಎಚ್‌ಎಂಗಳಾಗಿ ಬಡ್ತಿ ಪಡೆಯಲಿದ್ದಾರೆ ಎನ್ನಲಾಗಿದ್ದು, ಜಿಲ್ಲಾವಾರು ಜೇಷ್ಠತಾ ಪಟ್ಟಿ ಸಿದ್ಧವಾದರೆ ಈ ಸಂಖ್ಯೆ 5 ಸಾವಿರ ಮೀರುವ ಸಾಧ್ಯತೆ ಇದೆ.

ಇನ್ನು 1000ಕ್ಕೂ ಹೆಚ್ಚು ಕೆಪಿಎಸ್‌ ಶಾಲೆಗಳ ಆರಂಭ ಕೂಡ ನೇಮಕದ ಕನಸು ಬಿತ್ತಿದೆ. ಈ ನಡುವೆ ಶಿಕ್ಷಕರ ನೇಮಕವಾಗಿ ಎರಡು ವರ್ಷ ಕಳೆದಿದ್ದು, ಸರಕಾರಿ ಶಾಲೆಗಳಿಗೆ ಶಿಕ್ಷಕ ನೇಮಕ ಮಾಡುವುದಾಗಿ ಶಿಕ್ಷಣ ಸಚಿವರು ಹೇಳುತ್ತಲೇ ಬಂದಿದ್ದಾರೆ. ಹೀಗಾಗಿ 2026ರಲ್ಲಿತಮಗೆ ಉದ್ಯೋಗ ಭಾಗ್ಯದ ಬಾಗಿಲು ತೆರೆಯಬಹುದು ಎಂಬ ಹೊಸ ಕನಸಿನೊಂದಿಗೆ ಟಿಇಟಿ ಅಭ್ಯರ್ಥಿಗಳು ಹೊಸ ವರ್ಷ ಸ್ವಾಗತಿಸಲು ಸಿದ್ಧರಾಗಿದ್ದಾರೆ.

ಸರಕಾರದಿಂದಲೇ ನಿರುದ್ಯೋಗ ಸೃಷ್ಟಿ!

ಯುವನಿಧಿ ಗ್ಯಾರಂಟಿ ಯೋಜನೆಯಡಿ ನಿರುದ್ಯೋಗಿಗಳಿಗೆ ಭತ್ಯೆ ನೀಡುತ್ತಿರುವ ರಾಜ್ಯ ಸರಕಾರ, ಇನ್ನೊಂದೆಡೆ ಪ್ರತಿ ವರ್ಷ ಟಿಇಟಿ ನಡೆಸುವ ಮೂಲಕ ಸ್ವತಃ ಲಕ್ಷಾಂತರ ನಿರುದ್ಯೋಗಿಗಳನ್ನು ಸೃಷ್ಟಿಸುತ್ತಿದೆ. ಒಮ್ಮೆ ಟಿಇಟಿ ಬರೆದು ಅರ್ಹತೆ ಗಳಿಸಿದ ಅಭ್ಯರ್ಥಿಗಳು ಸರಕಾರಿ ನೇಮಕಕ್ಕಾಗಿ ಕಾಯುತ್ತಾರೆಯೇ ಹೊರತು, ಬೇರೆ ಕೆಲಸ ಹುಡುಕುವುದಿಲ್ಲ. ಅನಿವಾರ್ಯತೆ ಇರುವವರು ಖಾಸಗಿ ಶಾಲೆಗಳ ಬಾಗಿಲು ತಟ್ಟುತ್ತಾರಾದರೂ ಈಗೀಗ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲೂಕೆಲಸದ ‘ಆಫರ್‌’ ಕಡಿಮೆಯಾಗಿದೆ. ಪರಿಣಾಮ, ಶಿಕ್ಷಕರಾಗುವ ಪರಿಪೂರ್ಣ ಅರ್ಹತೆ ಇದ್ದರೂ 4.19 ಲಕ್ಷ ಮಂದಿ ನಿರುದ್ಯೋಗಿಗಳಾಗೇ ಉಳಿದಿದ್ದಾರೆ.

ರಾಜ್ಯದ ಮಂಜೂರು-ಖಾಲಿ ಹುದ್ದೆ ವಿವರ

ಶಾಲೆ- ಒಟ್ಟು ಹುದ್ದೆ – ಮಂಜೂರು – ಖಾಲಿ
ಪ್ರಾಥಮಿಕ 1,88,531- 1,38,802- 49,729
ಪ್ರೌಢಶಾಲೆ 44,406- 32,610 – 11,796
ಒಟ್ಟು 2,32,937- 1,71,412- 61,525

ಪ್ರಾಥಮಿಕ ಶಾಲೆಗೆ ಟಿಇಟಿ ಬರೆದು ಅರ್ಹತೆ ಪಡೆದು 8 ವರ್ಷ ಕಳೆದಿವೆ. 10 ವರ್ಷದಿಂದ ಸರಕಾರ ನೇಮಕ ಮಾಡಿಕೊಂಡಿಲ್ಲ. ಅರ್ಹತೆ ಪಡೆದಿರುವ ಕಾರಣ, ಈಗ ಕರೆಯಬಹುದು, ಆಗ ಕರೆಯಬಹುದು ಎಂದು ಕಾಯುತ್ತಾ ಬೇರೆ ಕೆಲಸಕ್ಕೆ ಹೋಗಲಿಲ್ಲ. ಹೊಸ ವರ್ಷದ ಹೊಸ್ತಿಲಲ್ಲಿನ ಬೆಳವಣಿಗೆಗಳು ಹೊಸ ನಿರೀಕ್ಷೆ ಮೂಡಿಸಿವೆ ಎಂದಿದ್ದಾರೆ ಜಯರಾಮ ಸಾರೆ, ಟಿಇಟಿ ಅಭ್ಯರ್ಥಿ, ದಾವಣಗೆರೆ.

Similar Posts

Leave a Reply

Your email address will not be published. Required fields are marked *